ಗುರುವಾರ, ಜುಲೈ 18, 2013

ಅನಾಮಿಕಳ ಆತ್ಮೀಯ ಪತ್ರ...!

ಟಕ್‌... ಟಕ್‌... ಟಕ್...
 ಬಾಗಿಲು ಬಡಿದ ಸದ್ದು. ತೆರೆದು ನೋಡುತ್ತೇನೆ; ಅಂಚೆಯವ ‘ಸರ್‌ ಪೋಸ್ಟ್‌’ ಎನ್ನುತ್ತಾ ಕವರನ್ನು ಕೈಗಿಟ್ಟ. -ಮೇಲ್‌, ಫೇಸ್‌ಬುಕ್, ಮೊಬೈಲ್‌, ಎಸ್‌ಎಂಎಸ್‌ಗಳ ಕಾಲದಲ್ಲಿ ಯಾರಪ್ಪಾ ಕಾಗದ ಬರೆದವರು ಎನ್ನುತ್ತಾ ಕವರಿನ ಹಿಂಬದಿ ನೋಡಿದೆ; ವಿಳಾಸ ಇರಲಿಲ್ಲ. ಸಾಮಾನ್ಯವಾಗಿ ಇನ್ಸೂರೆನ್ಸ್‌ ಕಂಪೆನಿಗಳ, ಬ್ಯಾಂಕುಗಳ ಕಾಗದಗಳಷ್ಟೇ ನಮ್ಮ ಮನೆ ಗೇಟಿನಲ್ಲಿರುವ ಪೆಟ್ಟಿಗೆಗೆ ಬಿದ್ದಿರುತ್ತವೆ. ವಿಳಾಸ ಇಲ್ಲದ ಕವರು ನನ್ನ ಕುತೂಹಲ ಕೆರಳಿಸಿತು.

ಕೌತುಕದಿಂದಲೇ ಕವರು ಒಡೆದೆ. ಸುಂದರ ಕೈಬರಹನ್ನೊಳಗೊಂಡ ಪತ್ರ ಅದು. ದುಂಡು ದುಂಡು ಅಕ್ಷರಗಳು ಸ್ಫುಟವಾಗಿ ಕಣ್ಣಿಗೆ ರಾರಾಜಿಸುತ್ತಿದ್ದವು. ಆ ಕೈ ಬರಹಕ್ಕೆ ಮೆಚ್ಚುಗೆ ಸೂಚಿಸುತ್ತಾ ಪತ್ರ ಓದಲು ಶುರು ಹಚ್ಚಿದೆ.

~~~
ಹಾಯ್‌,
ಗೆಳೆಯಾ ಹೇಗಿದ್ದೀಯಾ?

ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡಿಯಲ್ಲ, ಯಾರಪ್ಪಾ ಇದು ಅಂತ..? ನಿನಗೆ ನನ್ನನ್ನು ಗೊತ್ತಿದೆಯೋ ಇಲ್ಲವೋ, ನನಗೆ ಗೊತ್ತಿಲ್ಲ. ಆದರೆ ನಿನ್ನನ್ನು ನಾನು ಬಲ್ಲೆ. ನಾವಿಬ್ಬರೂ ಪರಸ್ಪರ ಮಾತನಾಡದಿದ್ದರೂ, ಪರಿಚಯ ಇಲ್ಲದಿದ್ದರೂ ನನಗೆ ನೀನು ಆತ್ಮೀಯ. ಐದು ವರ್ಷಗಳಿಂದ ನೀನು ನನಗೆ ಗೊತ್ತು. ಏಕವಚನದಲ್ಲಿ ಹೋಗೋ ಬಾರೋ ಅನ್ನುವಷ್ಟರ ಮಟ್ಟಿಗೆ ನೀನು ನನಗೆ ಹತ್ತಿರ. ಆದರೆ ನಿನಗೆ? ನನಗೆ ಗೊತ್ತಿಲ್ಲ. ನೀನು ನನ್ನನ್ನು ನೋಡಿರಬಹುದು. ಬಹುದು ಏನು ನೋಡೇ ನೋಡಿರ್ತಿಯಾ. ಯಾರು ಅಂತ ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲವೋ ಏನೋ.. ಇರಲಿ. ತಲೆ ತಿನ್ನುವುದಿಲ್ಲ. ನಾನೇ ಹೇಳುತ್ತೇನೆ.

                                                                       ಚಿತ್ರ ಕೃಪೆ: ಅಂತರ್ಜಾಲ
ನನಗೆ ಇನ್ನೂ ಚೆನ್ನಾಗಿ ನೆನಪಿದೆ; ನಿನ್ನನ್ನು ಮೊಟ್ಟ ಮೊದಲ ಸಲ ನೋಡಿದ ದಿನ. ಅದು ಕಾಲೇಜಿನ ಆರಂಭದ ದಿನ. ನೀನು ಉಪ್ಪಿನಂಗಡಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದೆ. ನಿನ್ನ ಜೊತೆ ನಾಲ್ಕಾರು ಹುಡುಗರು ಹರಟುತ್ತಾ ಇದ್ದರು. ಗಂಭೀರ ಮುಖ, ಚೆನ್ನಾಗಿ ಬಾಚಿದ ಕ್ರಾಪು, ಚಿಗುರು ಮೀಸೆ, ಕುರುಚಲು ದಾಡಿ ಮೇಲೆ ಕೈ ಆಡಿಸುತ್ತಾ ಪಟ್ಟಾಂಗ ಹೊಡೆಯುತ್ತಿದ್ದ ನಿನ್ನನ್ನು ನೋಡಿ ನಾನು ಇಂಪ್ರೆಸ್‌ ಆದೆ. ನಿನ್ನ ನಗು, ಶಾರ್ಪ್‌ ಕಣ್ಣುಗಳು ನನ್ನನ್ನು ಆಕರ್ಷಿಸಿತು. ಕಾಲೇಜಿನಲ್ಲಿ ಮೊದಲ ದಿನ ಏನಾಗುತ್ತೋ ಎಂಬ ಹೆದರಿಕೆಯಿಂದಲೇ ಕಾಲೇಜಿಗೆ ಹೊರಟಿದ್ದ ನನಗೆ ನಿನ್ನನ್ನು ನೋಡಿದಾಕ್ಷಣ ಎಲ್ಲಾ ಮರೆತು ಹೋಯಿತು. ಖುಷಿನೂ ಆಯಿತು. ಯಾಕೋ ಗೊತ್ತಿಲ್ಲ, ಮನಸ್ಸಲ್ಲಿ ನಿನ್ನ ಬಗ್ಗೆ ಆತ್ಮೀಯ ಭಾವ ಚಿಗುರಲು ಶುರು ಆಯಿತು. ತಪ್ಪು ತಿಳಿಬೇಡ; ಅದು ಆತ್ಮೀಯ ಸ್ನೇಹ ಭಾವವೇ ಹೊರತು ಬೇರೇನೂ ಅಲ್ಲ. ನೀನೆ ನನ್ನ ಬೆಸ್ಟ್‌ ಫ್ರೆಂಡ್‌ ಅಂತ ನಾನು ಆ ಕ್ಷಣವೇ ನಿರ್ಧರಿಸಿದ್ದೆ.

ಅಷ್ಟೊತ್ತಿಗೆ ಪುತ್ತೂರು ಬಸ್‌ ಬಂತು. ನೀನು ಓಡಿ ಹೋಗಿ ಹತ್ತಿದೆ. ನಾನೂ ಆ ಬಸ್ಸನ್ನೇ ಏರಿದೆ. ನನಗೆ ಇನ್ನೂ ಅಚ್ಚರಿ ಕಾದಿತ್ತು. ಪುತ್ತೂರಿನಲ್ಲಿ ನಾನು ಇಳಿದ ಜಾಗದಲ್ಲಿ ನೀನೂ ಇಳಿದಿದ್ದೆ. ಅಷ್ಟೇ ಏಕೆ ನಾನು ಹೊಸದಾಗಿ ಸೇರಿದ್ದ ಕಾಲೇಜಿಗೇ ನೀನೂ ಸೇರಿದ್ದೆ! ನಮ್ಮ ಕ್ಲಾಸ್‌ಗಳಿದ್ದುದು ಒಂದೇ ಬ್ಲಾಕ್‌ನಲ್ಲಿ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಒಂದೇ ಬೇಜಾರು; ನೀನು ಬಿಎಸ್‌ಸಿ, ನಾನು ಬಿಎ. ಸೈನ್ಸ್‌ ಆದ ಕಾರಣ ಪ್ರಾಕ್ಟಿಕಲ್‌, ಸ್ಪೆಷಲ್‌ ಕ್ಲಾಸ್‌ ಅಂತ ಸಂಜೆವರೆಗೂ ನಿನಗೆ ಕ್ಲಾಸುಗಳು ಇರುತ್ತಿದ್ದವು. ನನಗೋ ಮಧ್ಯಾಹ್ನವರೆಗೆ ಕ್ಲಾಸ್‌ ಇದ್ದರೆ ಅದೇ ದೊಡ್ಡದು. ಆದರೆ, ಇನ್ನು ಮೂರು ವರ್ಷ ನಾನು ನಿನ್ನ ಹತ್ತಿರದಲ್ಲೇ ಇರುತ್ತೇನೆ ಎನ್ನುವುದೇ ನನಗೆ ಖುಷಿಯ ವಿಚಾರವಾಗಿತ್ತು. ಮನಸ್ಸು ಎಷ್ಟು ಸಂತಸದಿಂದ ಕುಣಿದಾಡಿತ್ತು ಗೊತ್ತಾ ಅವತ್ತು? ಹಿಂಜರಿಕೆಯಿಂದಲೇ ಕಾಲೇಜಿಗೆ ಬಂದಿದ್ದ ನಾನು ಹೀಗೆಲ್ಲಾ ಆಗಬಹುದು ಅಂದುಕೊಂಡಿರಲಿಲ್ಲ. I was so happy.

ಪದವಿ ಶಿಕ್ಷಣದ ಮೂರು ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ದಿನಗಳು ಎಂದು ಈಗಲು ಕೂಡ ನಾನು ಎಲ್ಲರ ಜೊತೆಗೂ ಹೇಳುತ್ತಿರುತ್ತೇನೆ. ಅದಕ್ಕೆ ಮುಖ್ಯ ಕಾರಣ ನೀನೆ. ಪ್ರತಿ ದಿನ ನಿನ್ನನ್ನು ಭೇಟಿಯಾಗುತ್ತಿದ್ದುದು ಉಪ್ಪಿನಂಗಡಿ ಬಸ್‌ ಸ್ಟ್ತಾಂಡ್‌ನಲ್ಲಿ. ನೀನು ಬರದೇ ಇದ್ದರೆ, ಬರೋವರೆಗೂ ಕಾದು ನಂತರ ನೀನು ಹತ್ತಿದ್ದ ಬಸ್ಸನ್ನೇ ನಾನೂ ಏರುತ್ತಿದ್ದೆ. ನೀನು ಬಸ್‌ನ ಹಿಂಬದಿಯಲ್ಲಿ ವಿಂಡೋ ಸೀಟಲ್ಲಿ ಕೂರುತ್ತಿದೆ. ನಾನು ನಿನ್ನನ್ನು ನೋಡುವುದಕ್ಕೋಸ್ಕರ ಕೊನೆಗೆ ಹತ್ತಿ ಸೀಟು ಇದ್ದರೂ ನಿಂತಿರುತ್ತಿದ್ದೆ! ಕುಂಭಕರ್ಣ ನೀನು. ಬಸ್‌ ಹೊರಟ ತಕ್ಷಣ ನೀನು ನಿದ್ದೆಗೆ ಜಾರುವುದನ್ನು ನೋಡಿ ನಾನು ನಕ್ಕ ದಿನಗಳು ಅದೆಷ್ಟು? ಯಾವಾಗಲೂ ನಿಧಾನವಾಗಿ ಹೋಗುವ ಬಸ್‌ ಎಷ್ಟು ಬೇಗ ಪುತ್ತೂರಿಗೆ ತಲುಪುತ್ತಪ್ಪಾ ಅಂತ ಪ್ರತಿ ದಿನವೂ ಅನ್ನಿಸಿದ್ದಿದೆ. ಹುಚ್ಚಿ ಅಂತ ಅಂದುಕೊಳ್ಳುತ್ತಾ ಇದ್ದೀಯಾ? ಪರವಾಗಿಲ್ಲ ಬಿಡು. ನನ್ನನ್ನು ಆವರಿಸಿದ್ದು ನಿಶ್ಕಲ್ಮಷ ಸ್ನೇಹದ ಹುಚ್ಚು.

ಪ್ರತಿ ದಿನ ನಿನ್ನನ್ನು ಕಂಡಾಗ ಒಳಗೊಳಗೇ ಏನೋ ಒಂದು ರೀತಿಯ ಖುಷಿ ಆಗುತ್ತಿತ್ತು. ಮನಸ್ಸು ಉಲ್ಲಸಿತ ವಾಗಿರುತ್ತಿತ್ತು. ಪ್ರತೀ ದಿನ ನಾನು ಫ್ರೆಷ್‌ ಆಗಿರುತ್ತಿದ್ದೆ. ಕ್ಲಾಸ್‌ನಲ್ಲಿ ಲೆಕ್ಚರ್‌ಗಳು, ಫ್ರೆಂಡ್ಸ್‌ಗಳೆಲ್ಲಾ ಕಿರಿ ಕಿರಿ ಮಾಡಿದರೂ ಬೇಜಾರೇ ಆಗುತ್ತಿರಲಿಲ್ಲ. ಒಂದು ದಿನ ನಿನ್ನನ್ನು ಕಾಣದೇ ಇದ್ದರೆ ನಾನು ಸ್ವಿಚ್‌ ಆಫ್‌. ನಾನು ಮೂಡು ಔಟ್‌ ಅಂತ ಫ್ರೆಂಡ್ಸ್‌ಗೆ ಗೊತ್ತಾಗ್ತಿತ್ತು. ಆದರೆ ಕಾರಣ? ಉಹುಂ ಇಲ್ಲ ಗೊತ್ತಾಗುತ್ತಿರಲಿಲ್ಲ. ಕಾಲೇಜಿನ ಕ್ಯಾಂಟಿನ್‌ನಲ್ಲಿ, ಕಾರಿಡಾರ್‌ನಲ್ಲಿ, ಲೈಬ್ರೆರಿಯಲ್ಲಿ …. ಕಂಡಾಗಲೆಲ್ಲಾ ನಿನ್ನನ್ನು ನಾನು ನೋಡುತ್ತಿದ್ದೆನಾದರೂ, ನೀನು ನನ್ನತ್ತ ದೃಷ್ಟಿ ಹಾಯಿಸುತ್ತಿರಲಿಲ್ಲ ( ನಾನು ಅಷ್ಟೇನು ಸುಂದರವಾಗಿ ಇಲ್ಲದೇ ಇರುವುದು ಕಾರಣ ಆಗಿರಬಹುದು), ನಿನ್ನ ಹತ್ತಿರ ಮಾತಾಡುವುದಕ್ಕೆ ನಾನು ತುಡಿಯುತ್ತಿದ್ದೆ. ಆದರೆ ಮನಸ್ಸು ಯಾಕೋ ಬೇಡ ಅನ್ನುತ್ತಿತ್ತು. ನಿನ್ನ ಸೀರಿಯಸ್‌ನೆಸ್ ನೋಡಿ ಮನಸು ಹೆದರಿತ್ತೋ ಏನೋ? ನನಗೆ ಗೊತ್ತಿಲ್ಲ. ಆದರೆ ಪ್ರಯತ್ನ ಪಟ್ಟಾಗಲೆಲ್ಲಾ, ಮನಸ್ಸು ಹಿಂದೇಟು ಹಾಕುತ್ತಿತ್ತು.

ಆ ಮೂರು ವರ್ಷಗಳಲ್ಲಿ ನಿನ್ನನ್ನು ನೋಡದೇ ಇದ್ದ ದಿನಗಳು ತುಂಬಾ ಕಡಿಮೆ. ಸಮಯಕ್ಕೆ ಎಲ್ಲಿದೆ ತಡೆ? ದಿನಗಳು ಹೇಗೆ ಉರುಳಿದವೋ ಏನೋ. ನಮ್ಮ ಪರೀಕ್ಷೆಗಳು ಬಂತು, ಕೊನೆಗೇ ಕೋರ್ಸ್‌ ಕೂಡ ಮುಗಿಯುತ್ತಾ ಬಂತು. ಆದರೆ ಅಷ್ಟು ಹೊತ್ತಿಗಾಲೇ ಈ ವಿಷಯ ನನ್ನ ಫ್ರೆಂಡ್‌ಗಳಿಗೆ ಗೊತ್ತಾಯಿತು. ನೀನು ಅವನನ್ನು ಪ್ರೀತಿಸುತ್ತಾ ಇದ್ದೀಯಾ ಎಂದು ನಗುವುದಕ್ಕೆ, ಕಾಲೆಳೆಯುವುದಕ್ಕೆ ಆರಂಭಿಸಿದರು. ಆದರೆ, ನಿಜವಾಗಿಯೂ ನನಗೆ ಅಂತಹ ಭಾವನೆ ಇರಲಿಲ್ಲ. ನನ್ನ ವಿಚಿತ್ರ ಸ್ನೇಹ ಭಾವಗಳ ತೊಳಲಾಟಗಳಿಂದಾಗಿ ಅವರಿಗೆ ಹಾಗೆ ಅನಿಸಿದ್ದರಲ್ಲಿ ತಪ್ಪೇನಿಲ್ಲ ಬಿಡು.

ಆ ವೇಳೆಗಾಗಲೇ ನಮ್ಮ ಪದವಿ ಜೀವನ ಮುಗಿದಿತ್ತು. ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಬೇಜಾರು ಇದ್ದರೂ, ಜೀವನದ ಹಲವು ಸತ್ಯಗಳನ್ನು ಒಪ್ಪಿಕೊಳ್ಳಲೇ ಬೇಕಲ್ಲ? ನಾನು ನನ್ನ ಮುಂದಿನ ಜೀವನದ (ಉನ್ನತ ಶಿಕ್ಷಣ, ವೈವಾಹಿಕ ಜೀವನ) ಬಗ್ಗೆ ಯೋಚಿಸಲು ಆರಂಭಿಸಿದೆ. ಮನೆಯಲ್ಲಿ ಅಪ್ಪ ಅಮ್ಮ ಕೂಡ ಅದನ್ನೇ ಮಾಡುತ್ತಿದ್ದರು. ನೀನು ಆಮೇಲೆ ಯೂನಿವರ್ಸಿಟಿ ಸೇರಿದೆ ಅಂತ ಗೊತ್ತಾಯಿತು. ದೂರದಲ್ಲಿ ಇದ್ದುಕೊಂಡು ಒಳ್ಳೆಯ ಸ್ನೇಹಿತೆ/ಸ್ನೇಹಿತ ಏನು ಮಾಡಬಹುದೋ ಅದನ್ನೇ ನಾನು ಮಾಡಿದೆ. ನಿನ್ನ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದೆ.

ಆನಂತರ ನನ್ನ ಸಂಸಾರಿಕ ಜೀವನದ ಗಡಿಬಿಡಿಯಲ್ಲಿ ನಿನ್ನ ಬಗ್ಗೆ ಆಲೋಚನೆ ಮಾಡಲು ಸಾಕಷ್ಟು ಸಮಯವೇ ಸಿಗಲಿಲ್ಲ ನೋಡು. ನನ್ನ ಕಾಲೇಜು ಜೀವನಗಳನ್ನು ಮೆಲುಕು ಹಾಕಿದಾಗಲೆಲ್ಲ ನೀನು, ಉಪ್ಪಿನಂಗಡಿ ಬಸ್‌ ಸ್ಟ್ಯಾಂಡ್, ಬಸ್‌, ಪುತ್ತೂರು, ಕಾಲೇಜು ಕಾರಿಡಾರ್‌, ಕ್ಯಾಂಟೀನ್‌... ಹೀಗೆ ಹಲವು ವಿಷಯಗಳು ಸ್ಮೃತಿ ಪಟಲದಲ್ಲಿ ಹಾದುಹೋಗಿ ಮನಸ್ಸಿಗೆ ಹಿತ ಅನ್ನಿಸುತ್ತಿತ್ತು.

ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಗೊತ್ತಾ? ಮೊನ್ನೆ ನಿನ್ನನ್ನು ಆಕಸ್ಮಾತ್‌ ಆಗಿ ಎಂ.ಜಿ ರೋ‌ಡ್‌ನಲ್ಲಿ ಕಂಡೆ. ದೂರದಿಂದಲೇ ನಿನ್ನನ್ನು ಗುರುತಿಸಿದೆ. ಸ್ವಲ್ಪ ದಪ್ಪ (!) ಆಗಿದ್ದೀಯಾ ಎನ್ನುವುದನ್ನು ಬಿಟ್ಟರೆ ನಿನ್ನಲ್ಲಿ ಬದಲಾವಣೆ ಏನೂ ಆಗಿಲ್ಲ. ಅದೇ ಗಂಭೀರತೆ, ಅದೇ ನಗು, ತೀಕ್ಷ್ಣ ನೋಟ ಎಲ್ಲವೂ ಅದೇ. ನಿನ್ನ ಜೊತೆ ನಾಲ್ಕಾರು ಮಂದಿ ಮಾತನಾಡುತ್ತಿದ್ದರು. ಪ್ರತಿಷ್ಠಿತ ಸಂಸ್ಥೆಯ ಬ್ಯುಲ್ಡಿಂಗ್‌ನಿಂದ ನೀನು ಹೊರ ಬರುತ್ತಿದೆ. ನೀನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀಯಾ ಎಂಬುದನ್ನು ಕೊರಳಲ್ಲಿ ಇದ್ದ ಐಡಿ ಕಾರ್ಡ್‌ ಹೇಳುತ್ತಿತ್ತು. ದಡ್ಡಿ ನಾನು. ಎದುರಲ್ಲಿ ಇದ್ದರೂ ನಿನ್ನನ್ನು ಮಾತಾಡಿಸಲು ಯತ್ನಿಸಲಿಲ್ಲ. ಈ ಬಾರಿ ಯಾಕೋ ನನಗೆ ಮಾತಾನಾಡುವುದು ಬೇಡ ಅನ್ನಿಸಿತು. ಆ ಕ್ಷಣ ನನಗೆ ಎಷ್ಟು ಸಂತಸವಾಯಿತು ಗೊತ್ತಾ? ಉಪ್ಪಿನಂಗಡಿಯಲ್ಲಿ ಮೊದಲ ಬಾರಿ ಕಂಡಾಗ ಆದ ಸಂತಸಕ್ಕಿಂತಲೂ ಹೆಚ್ಚು ಖುಷಿ ಆಯಿತು. ನನ್ನ ಹಾರೈಕೆ ವ್ಯರ್ಥವಾಗದೇ ಇದ್ದುದಕ್ಕೆ ದೇವರಿಗೆ ಮನಸ್ಸಲ್ಲೇ ನಮಸ್ಕರಿಸಿದೆ. Once again I was very happy.
ಎಷ್ಟು ಬರೆದಿದ್ದಾಳಪ್ಪಾ ಇವಳು ಅಂತ ಯೋಚಿಸಿಸುತ್ತಾ ಇದ್ದೀಯಾ? ಆರ್ಟ್ಸ್‌ ಸ್ಟ್ಯೂಡೆಂಟ್‌ ನೋಡು. ಎಲ್ಲನೂ ಪ್ರಬಂಧದ ರೀತಿಯಲ್ಲಿ ಬರೆದೇ ಗೊತ್ತು. ಕ್ಷಮಿಸು. ನಿನ್ನ ತಾಳ್ಮೆಯನ್ನು ಪರೀಕ್ಷಿಸುವುದಿಲ್ಲ. ಒಂದೇ ಗೇರೆ. ಗೆಳತಿಯಾಗಿ ನಿನ್ನ ಉತ್ತಮ ಭವಿಷ್ಯಕ್ಕಾಗಿ ಪ್ರತಿ ದಿನವೂ ಹಾರೈಸುತ್ತೇನೆ. ಎಂದೆಂದಿಗೂ ನಗು ನಗುತಾ ಇರು.

ಇಂತಿ ನಿನ್ನ...

~~~

ಇನ್ನೇನು ಹೆಸರು ಓದಬೇಕು ಎನ್ನುವಷ್ಟರಲ್ಲಿ, ಮತ್ತೆ ಟಕ್‌.. ಟಕ್‌.. ಅಂತ ಬಾಗಿಲು ಬಡಿದ ಸದ್ದು... ಯಾರಪ್ಪಾ ಅಂತ ಎದ್ದು ಕಣ್ಣು ಬಿಡುತ್ತೇನೆ. ನಾನಿನ್ನು ಹಾಸಿಗೆಯಲ್ಲಿ! ಬೆಳಿಗ್ಗೆ ಆರು ಗಂಟೆ. ‘ಸಾರ್‌ ಪೇಪರ್‌’ ಅಂತ ಹುಡುಗ ಕಿಟಕಿ ಮೂಲಕ ಪೇಪರ್‌ ತೂರಿ ಬಿಟ್ಟ. ಅಂದು ಭಾನುವಾರ. ಏಳುವಾಗ ಸ್ವಲ್ವ ತಡ ಆಗಿತ್ತು. ಅಂತೂ ಕನಸಿನಲ್ಲಿ ಆತ್ಮೀಯತೆಯ ಸ್ಪರ್ಶ ಹೊಂದಿರುವ ಪತ್ರವೊಂದನ್ನು ಓದಿದ ಖುಷಿಯಲ್ಲಿ ಪೇಪರ್‌ ಮೇಲೆ ಕಣ್ಣಾಡಿಸಿದೆ, ಸುದ್ದಿ ಓದಿದ ಬಳಿಕ ಪುರವಣಿ ಓದುವ ರೂಢಿ ನನ್ನದು. ಭಾನುವಾರ ಆದ್ದರಿಂದ ಸಾಪ್ತಾಹಿಕ ಪುರವಣಿ. ಅದರಲ್ಲಿ ವಾರ ಭವಿಷ್ಯ ಇರುತ್ತದೆ. ಎಂದಿನಂತೆ ಅಂದು ನನ್ನ ರಾಶಿಯ ಮೇಲೆ ಕಣ್ಣಾಡಿಸಿದೆ.
ಅದರಲ್ಲಿ ಹೀಗೆ ಬರೆದಿತ್ತು: ಆತ್ಮೀಯರೊಬ್ಬರ ಪತ್ರ ಈ ವಾರ ನಿಮ್ಮ ಕೈ ಸೇರಲಿದೆ!

ಕೊನೆ ಮಾತು: ಮುಂಜಾನೆಯಲ್ಲಿ ಕಂಡ ಕನಸು ನಿಜವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಉಹ್ಞುಂ, ನನಗೆ ಗೊತ್ತಿಲ್ಲ.

ಬುಧವಾರ, ಡಿಸೆಂಬರ್ 12, 2012

ಮಧುಗಿರಿ ಬೆಟ್ಟದ ಚಾರಣದ ಸಿಹಿ...

ದೀಪಾವಳಿಯ ದಿನ. ಇಡೀ ಉದ್ಯಾನನಗರಿಯೇ ಪಟಾಕಿ ಸದ್ದಿನಲ್ಲಿ ಮುಳುಗಿ ಹೋಗಿತ್ತು. ಅರ್ಧಕರ್ಧ ಜನ ಊರಿನತ್ತ ಪ್ರಯಾಣ ಬೆಳೆಸಿದ್ದರು. ನಮಗೆಲ್ಲಿತ್ತು ಆ ಯೋಗ? ಇದ್ದಿದ್ದು ಒಂದೇ ದಿನ ರಜೆ. ಅದನ್ನು ಕಳೆಯುವುದಾದರೂ ಹೇಗೆ? ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ಬೆಟ್ಟವನ್ನು ಏರುವುದು ಗೆಳೆಯ ಈಶ್ವರ ಚಂದ್ರನ ಬಹುದಿನದ ಕನಸು. ಹಲವು ಬಾರಿ ಅಲ್ಲಿಗೆ ಹೋಗಬೇಕೆಂದುಕೊಂಡರೂ ಆಗಿರಲಿಲ್ಲ. ಹಾಗಾಗಿ ಈ ಬಾರಿ ಮಧುಗಿರಿಗೆ ಹೋಗೋಣ ಎಂಬ ನಿರ್ಧಾರ ಕೈಗೊಳ್ಳುವ ಹೊತ್ತಿಗೆ, ಮಿತ್ರ ಪ್ರದೀಪ ಸರಳಿಮೂಲೆಯೂ ಜೊತೆಯಾಗಿದ್ದ. ಬೆಂಗಳೂರಿನಿಂದ ೧೦೭ ಕಿ.ಮೀ ದೂರದಲ್ಲಿರುವ ಮಧುಗಿರಿಗೆ ನಾವು ಹೊರಟಿದ್ದು ಬೈಕಲ್ಲಿ.   ಬೆಳಿಗ್ಗೆ ೬.೩೦ಕ್ಕೆ ನಮ್ಮ ರಥಗಳು (ರಾಯಲ್‌ ಎನ್‌ಫೀಲ್ಡ್‌ ಇಲೆಕ್ಟ್ರಾ ಮತ್ತು ಸುಜೂಕಿ ಜಿಎಸ್ ೧೫೦ಆರ್‌ ) ತುಮಕೂರಿನತ್ತ ಮುಖ ಮಾಡಿದ್ದವು. ೩ ಗಂಟೆಗಳ ಪ್ರಯಾಣ. (ಅರ್ಧ ಗಂಟೆ ಬೆಳಗಿನ ಉಪಹಾರಕ್ಕಾಗಿ ಮೀಸಲು) ಬೆಳಿಗ್ಗೆ ೯.೩೦ಕ್ಕೆ ನಾವು ಮಧುಗಿರಿ ಬೆಟ್ಟದ ತಳದಲ್ಲಿ.
~
ಇದನ್ನು ಹತ್ತಲು ಸಾಧ್ಯವೇ?
ಎಳೆ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಬೃಹತ್‌ ಬಂಡೆಯನ್ನು ಕಂಡು ಪ್ರದೀಪ ಕೇಳಿದ ಮೊದಲ ಪ್ರಶ್ನೆ ಇದು. ಪಕ್ಕದಲ್ಲೇ ಬುಲೆಟ್‌ ಸ್ಟ್ಯಾಂಡ್ ಹಾಕುತ್ತಿದ್ದ ಈಶ್ವರ ಚಂದ್ರ ನಕ್ಕ. ಅಲ್ಲಾ ಮಾರಾಯ ನೀನು ಇದನ್ನು ಕೇಳಲು ಇಲ್ಲಿಗೆ ಬರಬೇಕಿತ್ತಾ ಅಂತ ಅವನು ಕೇಳಿದಾಗ ನಗುವ ಸರದಿ ನನ್ನದು. ಆ ಪ್ರಶ್ನೆಯನ್ನು ನಗುತ್ತಲೇ ಪ್ರದೀಪ ಕೇಳಿದ್ದರೂ, ಅದರಲ್ಲಿ ನಿಜಾಂಶವೂ ಇತ್ತು.
ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬೆಟ್ಟ ಪ್ರತಿಯೊಬ್ಬ ನೋಡುಗನ ಮನಸ್ಸಿನಲ್ಲಿ ಮೂಡಿಸುವ ಮೊದಲನೇ ಪ್ರಶ್ನೆಯೇ ಇದು. ಈ ಬೆಟ್ಟ ಒಡ್ಡುವ ಸವಾಲು ಚಾರಣಿಗರನ್ನು ಇತ್ತ ಆಕರ್ಷಿಸುವಂತೆ ಮಾಡುತ್ತವೆ. ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತವರಿಗೆ ಈ ‘ಗಿರಿ’ಯ ನೆನಪು ‘ಮಧು’ವಿನಂತೆ ಸಿಹಿಯೇ!

ಈ ದುರ್ಗದ ಇನ್ನೊಂದು ಆಕರ್ಷಣೆ ೧೭ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಟೆ. ಶತ್ರು ಪಾಳಯದ ಮೇಲೆ ನಿಗಾ ಇಡುವುದಕ್ಕಾಗಿ ಬೆಟ್ಟದ ಅಲ್ಲಲ್ಲಿ ನಿರ್ಮಿಸಲಾಗಿರುವ  ಬುರುಜುಗಳು ಇಡೀ ಊರಿನ ಸುಂದರ ನೋಟವನ್ನೇ ಕಣ್ಣಿಗೆ ಕಟ್ಟಿ ಕೊಡುತ್ತವೆ. ಚಾರಣ ಆರಂಭಗೊಳ್ಳುವುದು ಕೋಟೆಯ ದ್ವಾರ ಪ್ರವೇಶಿಸುವ ಮೂಲಕ. ಸ್ವಲ್ಪ ದೂರದಲ್ಲಿ ದೊಡ್ಡ ಕೆರೆಯೊಂದು ಚಾರಣಿಗರನ್ನು
ಸ್ವಾಗತಿಸುತ್ತದೆ. ಕೆರೆಯ ಪಕ್ಕದಲ್ಲೇ ಇರುವ ನೀರಿನ ಸಂಗ್ರಹ ತೊಟ್ಟಿಯು, ಮಳೆಕೊಯ್ಲು ಹಾಗೂ ಜೀವ ಜಲದ ಸಂರಕ್ಷಣೆಯ ಕುರಿತಾಗಿ ಅಂದಿನ ಜನರಿಗಿದ್ದ ಕಾಳಜಿಗೆ ಹಿಡಿದ ಕನ್ನಡಿ.

ಚಾರಣದ ಮೊದಲ ೨೦ ನಿಮಿಷದ ಹಾದಿ ತುಂಬಾ ಸಲೀಸು. ಆದರೆ ನಂತರದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಠಿಣವೇ. ಕಡಿದಾದ ಏರು ಹಾದಿಯಲ್ಲಿ ಆಧಾರಕ್ಕಾಗಿ ಕಬ್ಬಿಣದ ಸರಳುಗಳಿವೆ. ಏರು ಹಾದಿಯಲ್ಲಿ ಕ್ರಮಿಸಿದಂತೆ ಕಾಲು ಸೋಲಲು ಆರಂಭಿಸುತ್ತದೆ. ಹೃದಯ ಬಡಿತ ಹೆಚ್ಚುತ್ತದೆ. ಏದುಸಿರು ತನ್ನಿಂತಾನೇ ಹೊರಬರುತ್ತದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಕಾಲೇ ಹೇಳುತ್ತದೆ. ಚೀಲದಲ್ಲಿದ್ದ ನೀರು, ಕುರುಕಲು ತಿಂಡಿಗಳು ಆಯಾಚಿತವಾಗಿ ಹೊರ ಇಣುಕುತ್ತವೆ. ಏರಿ ಬಂದ ಹಾದಿಯನ್ನು ತಿರುಗಿ ನೋಡಿದರೆ ಎಷ್ಟೊಂದು ಆಳ!. ತಲೆ ಸುತ್ತಿದ ಅನುಭವ.
ಬೀಸುವ ತಂಪಾದ ಗಾಳಿ, ಮೈಯನ್ನು ಸ್ಪರ್ಶಿಸುವ ಸೂರ್ಯನ ಬಿಸಿಲು, ಊರಿನ ಸುಂದರ ನೋಟ.. ಓಹ್‌... ಈ ದೃಶ್ಯಕಾವ್ಯವನ್ನು ಸವಿದಾಗ ಮೇಲೇರುವಾಗ ಅನುಭವಿಸಿದ ಸಂಕಟಗಳೆಲ್ಲಾ ಮಾಯ!

ದಣಿವಾರಿಸಿಕೊಂಡು ಎದುರು ಕಾಣುತ್ತಿರುವ ಬುರುಜೇ ಬೆಟ್ಟದ ತುದಿ ಎಂದು ಅಂದುಕೊಳ್ಳುತ್ತ ಉತ್ಸಾಹದಿಂದ ಅಲ್ಲಿಗೆ ತಲುಪಿದಾಗ, ಈಗ ಏರಿದಷ್ಟೇ ದೂರ ಮುಂದಕ್ಕೂ ಇದೆ ಎಂಬ ಸತ್ಯ ಅರಿತು ಹೆಜ್ಜೆಗಳು ನಿಧಾನವಾಗುತ್ತವೆ. ಇಲ್ಲಿನ ಹಾದಿಗಳು ಮತ್ತೂ ಕಠಿಣ. ಅಲ್ಲಿ ಕಂಬಿಗಳ ನೆರವಿಲ್ಲ. ಕೆಲವು ಕಡೆ ತೆವಳಿಕೊಂಡು ಹೋಗುವ ದಾರಿ. ಉರಿ ಬಿಸಿಲು ಆರೋಹಣವನ್ನು ಇನ್ನಷ್ಟು ಕಷ್ಟಗೊಳಿಸುತ್ತದೆ. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು. ಹೆಜ್ಜೆ ಇಡುವಾಗ ಎಡವಿದರೆ ಮುಗಿಯಿತು. ಬೆಟ್ಟ ಹತ್ತುವ ಉತ್ಪಾಹಿಯ ಜೀವನದಲ್ಲಿ ಇದೇ ಕೊನೆ ಚಾರಣ ಆಗುವ ಸಂಭವವೇ ಜಾಸ್ತಿ!

ಸುದೀರ್ಘ ಎರಡು ಗಂಟೆಗಳ ಚಾರಣದ ನಂತರ ತುತ್ತ ತುದಿಯಲ್ಲಿ ಕಲ್ಲಿನ ಕಟ್ಟಡವೊಂದು ಕಾಣುತ್ತದೆ. ಹಿಂದೆ ಅದು ಗೋಪಾಲಕೃಷ್ಣ ದೇವಾಲಯ ಆಗಿತ್ತಂತೆ. ಈಗ ಅಲ್ಲಿ ದೇವಾಲಯದ ಯಾವುದೇ ಕುರುಹುಗಳಿಲ್ಲ. ಪಾಳು ಬಿದ್ದಿದೆ. ಅದರ ಹಿಂಭಾಗದಲ್ಲಿ ಕುದುರೆ ಲಾಯವನ್ನು ಹೋಲುವ ಇನ್ನೊಂದು ಕಟ್ಟಡವಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದ ಅದೂ ಲಯವಾಗಿದೆ!

ಸಮುದ್ರ ಮಟ್ಟದಿಂದ ೩೯೮೫ ಅಡಿಗಳಷ್ಟು (೧೧೯೩) ಎತ್ತರದಿಂದ ಸುತ್ತಲೂ ಕಣ್ಣುಹಾಯಿಸಿದಾಗ ಕಾಣುವುದು ಸಾಲು ಸಾಲು ಬೆಟ್ಟಗಳು. ಮಧಿಗಿರಿ ಪಟ್ಟಣದ ಪೂರ್ಣ ನೋಟ, ಹಚ್ಚ ಹಸಿರನ್ನು ಹೊದ್ದ ಭೂರಮೆ. ವೇಗವಾಗಿ ಬೀಸುವ ತಂಪಾದ ಗಾಳಿ, ರುದ್ರರಮಣೀಯ ದೃಶ್ಯಗಳು ಚಾರಣಿಗನ ಆಯಾಸವನ್ನು ಪರಿಹರಿಸುತ್ತವೆ. ಮನಸ್ಸನ್ನು ರಂಜಿಸುತ್ತವೆ. ಮೊಗದಲ್ಲಿ ನಗುವನ್ನೂ ಹೊಮ್ಮಿಸುತ್ತವೆ.

ಬೆಟ್ಟ ಇಳಿಯುವ ಹಾದಿ ಹತ್ತುವಷ್ಟು ಸಮಯವನ್ನು ತೆಗೆದುಕೊಳ್ಳದಿದ್ದರೂ, ಇಳಿಯುವಾಗ ಎಚ್ಚರಿಕೆ ಅಗತ್ಯ. ೪೫ರಿಂದ ೬೦ ನಿಮಿಷಗಳಲ್ಲಿ ಮಧುಗಿರಿ ದುರ್ಗದ ತಳವನ್ನು ತಲುಪಬಹುದು.
~
ಮಧ್ಯಾಹ್ನ ೧ ಗಂಟೆ ಸುಮಾರು. ಬೆಟ್ಟದ ತಳ ತಲುಪಿದ ಬಳಿಕ ಇನ್ನೇನು ಬೈಕ್‌ ಚಾಲೂ ಮಾಡಬೇಕು. ಇದೇ ಬೆಟ್ಟವನ್ನು ನಾವು ಹತ್ತಿದ್ದೋ? ಎಂಬ ಪ್ರಶ್ನೆಯನ್ನು ಪ್ರದೀಪ ತೂರಿ ಬಿಟ್ಟ. ಅವನ ಕಾಲೆಳೆಯಲು ಏನೋ ಹೇಳಬೇಕೆಂದು ನಾನು ಬಾಯಿ ತೆಗೆಯುವಷ್ಟರಲ್ಲಿ, ಆತನೇ ಮುಂದುವರಿದು, ‘ಏನೇ ಆಗಲಿ, ಜೀವನದಲ್ಲಿ ಒಮ್ಮೆಯಾದರೂ ಈ ಬೆಟ್ಟವನ್ನು ಏರಲೇ ಬೇಕು. ಮಧುಗಿರಿ ಬೆಟ್ಟದ ಚಾರಣ ನಿಜಕ್ಕೂ ಅದ್ಭುತ ಅನುಭವ’ ಎಂದು ಷರಾ ಬರೆದ. ಈಶ್ವರ ಚಂದ್ರ ಹಾಗೂ ನನ್ನ ಅಭಿಪ್ರಾಯವೂ ಅದೇ ಆಗಿತ್ತು.
~
ಪ್ರಾಯಶಃ ನಮ್ಮದು ಮಾತ್ರವಲ್ಲ, ಮಧುಗಿರಿ ಬೆಟ್ಟದ ಚಾರಣದ ಸವಿಯುಂಡವರ ಅನುಭವವೂ ಇದೇ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
 ~ ~ ~

ಮಧುಗಿರಿ ಬೆಟ್ಟ ಇಲ್ಲಿದೆ...

ತುಮಕೂರಿನಿಂದ ೪೩ ಕಿ.ಮೀ ದೂರ. ರಾಜಧಾನಿ ಬೆಂಗಳೂರಿನಿಂದ ೧೦೭ ಕಿ.ಮೀ ದೂರ. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬರುವ ಡಾಬಾಸ್‌ಪೇಟೆಯಿಂದ ಬಲಕ್ಕೆ ತಿರುಗಿ ಕೊರಟಗೆರೆ ಮಾರ್ಗವಾಗಿ ಮಧುಗಿರಿ. (ಕೊರಟಗೆರೆ-ಪಾವಗಡದ ಮಧ್ಯೆ ಮಧುಗಿರಿ ಪಟ್ಟಣ ಇದೆ. ಕೊರಟಗೆರೆಯಿಂದ ೧೮ ಕಿ.ಮಿ ದೂರದಲ್ಲಿ ಮಧುಗಿರಿ ಇದೆ).
 ~

ಕೋಟೆಯ ಇತಿಹಾಸ...

ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಬೆಟ್ಟದ ಇತಿಹಾಸ ಪ್ರಕಾರ, ಕೋಟೆಯನ್ನು ನಿರ್ಮಿಸಿದ ಕೀರ್ತಿ ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹೀರೇ ಗೌಡ ಅವರಿಗೆ ಸಲ್ಲುತ್ತದೆ. ೧೬೭೦ರ ಸುಮಾರಿನಲ್ಲಿ ಮಣ್ಣನಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ನಂತರದಲ್ಲಿ ಹೈದರ್ ಅಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಕೋಟೆಯನ್ನು ಪುನರುಜ್ಜೀವನಗೊಳಿಸಲಾಯಿತು. ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರಗಳೂ ಇಲ್ಲಿವೆ.
 ~

ನಿರ್ವಹಣೆ ಕೊರತೆ...

ಇಡೀ ಬೆಟ್ಟ ಹಾಗೂ ಕೋಟೆಯು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಕೋಟೆ ಪ್ರವೇಶಿಸುವರೆಗಿನ ದಾರಿ ಉತ್ತಮವಾಗಿದ್ದರೂ, ನಂತರದ ಹಾದಿ ಅಷ್ಟು ಚೆನ್ನಾಗಿಲ್ಲ. ಬಂಡೆಗಳಲ್ಲಿ ಸರಿಯಾಗಿ ಮೆಟ್ಟಿಲುಗಳನ್ನು
ಕೊರೆಯಲಾಗಿಲ್ಲ. ಕೋಟೆಯ ಗೋಡೆಗಳಲ್ಲಿ, ಬಂಡೆಗಳಲ್ಲಿ ಪಡ್ಡೆ ಹುಡುಗರು ಬರೆದಿರುವ, ಕೆತ್ತಿರುವ ಪ್ರೇಮ ನಿವೇದನಾ ಬರಹಗಳು ಕೋಟೆ ಮತ್ತು ಬೆಟ್ಟದ ಸೌಂದರ್ಯವನ್ನು ಹಾಳುಗೆಡಹಿವೆ. ಅಪರೂಪದ ಬೆಟ್ಟಕ್ಕೆ ನಿರ್ವಹಣೆ ಕೊರತೆ ಒಂದು ಕಪ್ಪು ಚುಕ್ಕೆ
 ~

ಚಾರಣಿಗರಿಗೆ ಒಂದಷ್ಟು ಸಲಹೆ...

ಮಳೆಗಾಲದಲ್ಲಿ ಚಾರಣಕ್ಕೆ ಹೋಗದಿರುವುದು ಒಳಿತು. ಬಂಡೆ ಜಾರುವ ಸಂಭವವೇ ಹೆಚ್ಚಿರುವುದರಿಂದ ಚಾರಣ ಅಪಾಯಕಾರಿ. ಕಡು ಬೇಸಿಗೆಯಲ್ಲೂ ಬೇಡ, ಚಳಿಗಾಲದ ಆರಂಭದ ಸಮಯ ಹೆಚ್ಚು ಸೂಕ್ತ. ಆದಷ್ಟೂ ಬೆಳಿಗ್ಗೆ ಬೇಗ ಚಾರಣ ಆರಂಭಿಸುವುದು ಉತ್ತಮ. ಸಮಯ ಕಳೆದಂತೆ ಬಿಸಿಲಿನ ಧಗೆ ಹೆಚ್ಚಾಗುವುದರಿಂದ, ಅದಕ್ಕಿಂತ ಮೊದಲೇ ಬೆಟ್ಟದ ತುದಿಗೆ ತಲುಪುವುದು ಹಿತ. ಬಿಸಿಲಿನಿಂದ ಚರ್ಮ, ದೇಹವನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ವಸ್ತುಗಳು ಚೀಲದಲ್ಲಿರಲಿ. ಸಾಕಷ್ಟು ನೀರು, ಹಣ್ಣು ಹಂಪಲು, ಲಘು ಉಪಹಾರವನ್ನು ಹೊತ್ತೊಯ್ಯಿರಿ. ಎತ್ತರವಾದ ಜಾಗದಿಂದ ಆಳ ಪ್ರದೇಶವನ್ನು ನೋಡುವಾಗ ತಲೆಸುತ್ತು ಬರುವವರು/ ಆಕ್ರೋಫೋಬಿಯಾದಿಂದ ಬಳಲುತ್ತಿರುವವರು ಈ ಸಾಹಸದಿಂದ ದೂರ ಇರುವುದು ಒಳ್ಳೆಯದು. ಚಾರಣದ ವೇಳೆ ಧರಿಸುವ ಶೂ ಬಗ್ಗೆ ವಿಶೇಷ ಗಮನ ಅಗತ್ಯ. ಹೆಚ್ಚು ಹಿಡಿತ (ಗ್ರಿಪ್) ಇರುವ ಶೂ ಧರಿಸುವುದು ಸುರಕ್ಷಿತ.
 ~
ನೆನಪು ತರುವ ಒಂದಷ್ಟು ಚಿತ್ರಗಳು....
ತಳದಿಂದ ಮಧುಗಿರಿ ಬೆಟ್ಟದ ನೋಟ

ಬೆಟ್ಟದಿಂದ....


ಹೀಗಿದೆ ನೋಡಿ ಮಧುಗಿರಿ ಬೆಟ್ಟ

ಹಲವು ಬುರುಜುಗಳಲ್ಲಿ ಇದೊಂದು...

ಇಳಿ ಹಾದಿ...

ಹಸುರು ಹೊದ್ದ ಭೂರಮೆ

ಕಠಿಣ ಏರು ಹಾದಿ...

ಕಡಿದಾದ ದಾರಿ

ಬುರುಜು

ಏರುವ ಹಾದಿ... ಇಲ್ಲಿ ಸೋಲುತ್ತದೆ ಕಾಲು

ಮಧುಗಿರಿ ಪಟ್ಟಣದ ಸುಂದರ ನೋಟ

ಬೆಟ್ಟದ ಮೇಲಿಂದ

ಗೋಪಾಲಕೃಷ್ಣ ದೇವಾಲಯದ ಹಿಂಭಾಗ

ಬೆಟ್ಟಗಳ ಸಾಲು ಸಾಲು


ಸಾಲು ಬೆಟ್ಟಗಳು

ಒಂದು ಕಾಲದ ಗೋಪಾಲಕೃಷ್ಣ ದೇವಾಲಯ

ಮಧುಗಿರಿ ಪಟ್ಟಣ

ಮೇಲಿನ ನೋಟ = ಮೇಲ್ನೋಟ....

ಅಪರೂಪದ ಬೆಟ್ಟಕ್ಕೆ ಕಪ್ಪುಚುಕ್ಕೆ...

ಬಂಡೆಗಳನ್ನೂ ಬಿಡದ ಪಡ್ಡೆ ಹೈಕಳು


ಭಲೇ ಜೋಡಿ: ಪ್ರದೀಪ ಸರಳಿಮೂಲೆ, ಈಶ್ವರ ಚಂದ್ರ

ಪ್ರವೇಶ ಧ್ವಾರ

ಮೊದಲ ಹೆಜ್ಜೆ...

        
 ~




ಶುಕ್ರವಾರ, ಜುಲೈ 27, 2012

ಗೆಳೆಯನ ವೃತ್ತಾಂತವು...

ಗುರುವಾರ. ನನಗೆ ವಾರದ ರಜಾ. ಮರೆಯ ಬೇಡಿ ಅದು ರಾಯರ ದಿನ! ನಾಲ್ಕು ವರ್ಷದಿಂದ ಅದೇ ದಿನದ ರಜೆಗೆ ಒಗ್ಗಿ ಹೋಗಿದ್ದೇನೆ. ಅಪ್ಪಿ ತಪ್ಪಿ ಬೇರೆ ದಿನ ರಜೆ ತೆಗೆದುಕೊಂಡನೆಂದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ವಾರವಿಡೀ ಮನಸ್ಸು ಗೊಂದಲದ ಗೂಡಾಗುತ್ತದೆ. ಕಂಫರ್ಟ್‌ ಅನ್ನುವುದೇ ಇರುವುದಿಲ್ಲ. ಕಳೆದ ಒಂದೆರಡು ತಿಂಗಳಿನಿಂದ ಬೇರೆ ಬೇರೆ ಕಾರಣಕ್ಕೆ ಗುರುವಾರ  ರಜೆ ತೆಗೆದುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಆದರೆ ಎರಡು ವಾರಗಳಿಂದ ಮತ್ತೆ ಗುರುವಾರವೇ ವಾರದ ರಜೆ ಸಿಗುತ್ತಿದೆ. ಹಾಗಾಗಿ ಮನಸ್ಸು ಉಲ್ಲಸಿತದಿಂದಲೇ ಇದೆ.

ಒಂದು ವಾರದ ಕಚೇರಿಯ ಸುಸ್ತನ್ನು ಆ ದಿನವಿಡೀ ರೂಮಲ್ಲಿ ಕುಳಿತು ನಿವಾರಿಸುವುದು ನನ್ನ ರೂಢಿ. ರಾಯರ ದಿನ ಬಂತೆಂದರೆ ನನ್ನ ರೂಮಿನ ಹುಡುಗರು ಮುಸಿ ಮುಸಿ ನಗುತ್ತಾರೆ. ರೂಮಲ್ಲೇ ಸ್ವ ಪ್ರತಿಷ್ಠಾಪನೆಗೊಳ್ಳುತ್ತಾನೆ. ಕನಿಷ್ಠ ಪಕ್ಷ  ಸಂಜೆ ಹೊತ್ತಾದರೂ ಹೊರಗಡೆ ಹೋಗಿ ಸುತ್ತಾಡಿ ಬರುವುದಿಲ್ಲ. ಮಂತ್ರಿಮಾಲ್‌ ಅಷ್ಟು ಸನಿಹದಲ್ಲೇ ಇದ್ದರೂ ಅದಕ್ಕೆ ಒಂದು ವಿಸಿಟ್‌ಕೊಡುವುದಿಲ್ಲ. ಶಾಪಿಂಗ್‌ಮಾಡುವುದು ಬೇಡಪ್ಪ, ವಿಂಡೋ ಶಾಪಿಂಗ್‌ಮಾಡುವುಕ್ಕೆ ಏನು ದಾಡಿ ಅಂತ ನನಗೆ ಕೇಳಿಸುವಂತೆ ಪರಸ್ಪರ ಮಾತನಾಡುತ್ತಾ ಜಾಡಿಸುತ್ತಾ ಇರುತ್ತಾರೆ. ಮತ್ತೊಬ್ಬನಂತು  ಏ.... ಅಟ್‌ಲಿಸ್ಟ್‌ ಸ್ಯಾಂಕಿ ಟ್ಯಾಂಕಿ ಹತ್ತಿರ ಸುಳಿದಾಡಿ ಕಣ್ಣನ್ನಾದರೂ ತಂಪು ಮಾಡಿಕೊಂಡು ಬಾ ... ವೇಸ್ಟ್ ಬಾಡಿ ಟೇಸ್ಟೇ ಇಲ್ಲ ನಿನಗೆ ಅಂತ ಕಾಲೆಳೆಯುತ್ತಿರುತ್ತಾನೆ. ಎಲ್ಲದಕ್ಕೂ ನನ್ನ ಉತ್ತರ ನಗುವೇ. ಅವರೂ ನಗುತ್ತಲೇ ಮಾತಿಗೆ ಪೂರ್ಣ ವಿರಾಮ ಇಡುತ್ತಾರೆ.
ಮೊನ್ನೆ ಗುರುವಾರ ಸಂತೋಷದಿಂದಲೇ ರೂಮಲ್ಲಿ ಕೂತು ದಿನಕಳೆದೆ. ಯಾವತ್ತೂ ರಾತ್ರಿ ೧.೩೦ ಬಳಿಕವಷ್ಟೇ ನಿದ್ರಾ ದೇವಿಯ ಆಹ್ವಾನೆಗೆ ತೊಡಗುವವನು ಅಂದು ೧೧ ಗಂಟೆಗೆ ಆ ಕಾರ್ಯಕ್ಕೆ ಕೈ ಹಾಕಿದೆ. ನಿದ್ರಾ ದೇವಿ ಶರಣಾಗುವ ಯೋಚನೆಯಲ್ಲಿ ಇರಲಿಲ್ಲ. ತಲೆಯಲ್ಲಿ ಹರಿದಾಡುತ್ತಿದ್ದ ಹಲವು ಆಲೋಚನೆಗಳು ನಿದ್ರಾ ದೇವತೆಯನ್ನು ಹತ್ತಿರಕ್ಕೂ ಬಿಟ್ಟು ಕೊಡಲಿಲ್ಲ. ಮಲಗಿದವ ಎದ್ದು ಮತ್ತೆ  ಟಿವಿ ನೋಡುತ್ತಾ ಯಾ ಪುಸ್ತಕ ಓದುತ್ತಾ ಕೂರುವುದು ದೂರದ ಮಾತು. ಇಯರ್‌ಫೋನ್‌ ಕಿವಿಗಿಟ್ಟು ಮೊಬೈಲ್‌ನಲ್ಲಿ ಎಫ್‌ಎಂ ಚಾಲೂ ಮಾಡಿದೆ. ಒಂದಷ್ಟು ಎಫ್ಎಂ ಚಾನೆಲ್‌ಗಳು ಠೇಂಕರಿಸುತ್ತಿದ್ದವು.
ರಾತ್ರಿ ೧೧ರ ನಂತರ ನೀವು ಎಫ್‌ಎಂ ಕೇಳಬೇಕು... ಕೆಲವು ಚಾನೆಲ್‌ಗಳು ಓತಪ್ರೋತವಾಗಿ ಹಾಡುಗಳನ್ನು ಪ್ರಸಾರ ಮಾಡಿದರೆ,  ಇನ್ನು ಕೆಲವು ಚಾನೆಲ್‌ಗಳಲ್ಲಿ ಮುಸ್ಸಂಜೆ ಮಾತು ಚಿತ್ರದಲ್ಲಿ ಸುದೀಪ್‌ ನಡೆಸಿಕೊಡುತ್ತಿದ್ದ ಮುಸ್ಸಂಜೆ ಮಾತು ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದು ರೂಪುಗೊಂಡ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅವುಗಳ ಹೆಸರುಗಳೆಲ್ಲಾ ಆಕರ್ಷಕವಾಗಿವೆ. ಪ್ರೇಮಿಗಳಿಗೆ/ ನೊಂದವರಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ ಅದು. ಹಗಲು ಹೊತ್ತಿನಲ್ಲಿ ಕಿವಿ ತಮಟೆ ಹರಿದು ಹೋಗುವಂತೆ ಕಿರುಚಾಡುವ ರೇಡಿಯೊ ಜಾಕಿಗಳು ಆ ಕಾರ್ಯಕ್ರಮದಲ್ಲಿ ಬಹಳ ನಾಜೂಕಾಗಿ, ಮನಸ್ಸಿಗೆ ತಾಕುವಂತೆ (?!) ಮಾತಾಡುತ್ತಾರೆ.
ಆ ಕಾರ್ಯಕ್ರಮಗಳ ವಿಶ್ವಾಸಾರ್ಹತೆಯ ಬಗ್ಗೆ ನೀವು ಪ್ರಶ್ನಿಸಿದರೆ ನನ್ನಲ್ಲಿ ಉತ್ತರ ಇಲ್ಲ. ಅಂದ ಮಾತ್ರಕ್ಕೆ ಆ ಕಾರ್ಯಕ್ರಮಗಳಿಗೆ ದೂರವಾಣಿ ಕರೆ ಮಾಡಿ ಯುವಕ ಯುವತಿಯರು ನೋವನ್ನು ತೋಡಿಕೊಳ್ಳುವುದು ಸುಳ್ಳೇ? ಆರ್‌ಜೆ ಒಂದಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಶೋತೃಗಳ ಕಣ್ಣೀರು ಬರಿಸುವಂತಹ ಹಾಡನ್ನು ಕೇಳಿಸುವುದು ಕೇವಲ ತೋರ್ಪಡಿಕೆಗಾಗಿಯೇ? ಹೇಳಲು ಸಾಧ್ಯವಿಲ್ಲ. ಪ್ರೀತಿ ಪ್ರೇಮ ವಿಷಯದಲ್ಲಿ ಮೋಸ ಹೋದವರು ನೊಂದವರು ನಮ್ಮ ಸುತ್ತ ಹಲವು ಜನರು ಇರುವಾಗ, ಆ ಕಾರ್ಯಕ್ರಮಗಳು ಸುಳ್ಳಿನ ಕಂತೆಗಳು ಎಂದು ಹೇಳಲು ಸಾಧ್ಯವಿಲ್ಲ. ಇರಲಿ. ನಾನು ಹಾದಿ ತಪ್ಪುತ್ತಿದ್ದೇನೆ ಅನಿಸುತ್ತಿದೆ. ಮತ್ತೆ ಟ್ರ‍್ಯಾಕ್‌ಗೆ ಮರಳುತ್ತೇನೆ.
ಮೊನ್ನೆ ಇದೇ ಕಾರ್ಯಕ್ರಮವನ್ನು ಎಫ್‌ಎಂ ಒಂದರಲ್ಲಿ ಕೇಳುತ್ತಿದ್ದೆ. ಆರ್‌ಜೆ ಹಲೋ ಅಂದ. ಆ ಕಡೆಯಿಂದ ಒಬ್ಬಳು ಹುಡುಗಿ ಮಾತಾಡುತ್ತಿದ್ದಳು. ಹೆಸರು ಚೆನ್ನಾಗಿಯೇ ಇತ್ತು ಆಕೆಯದ್ದು. ಆರ್‌ಜೆ ಹೇಳಿದ... ನಿನ್ನ ಕತೆ ಹೇಳು... ಹೇಳಿದ್ದೇ ತಡ ಅವಳ ದುಃಖ ಕಟ್ಟೆಯೊಡೆದಿತ್ತು. ಬಿಕ್ಕಳಿಸುತ್ತಲೇ ತನ್ನ ಕತೆ ಆರಂಭಿಸಿದಳು. ಆಕೆ ಕಾಲೇಜಿನಲ್ಲಿ ಒಬ್ಬನನ್ನು ಪ್ರೀತಿಸಿದ್ದಳಂತೆ. ಇಬ್ಬರೂ ಮೂರು ವರ್ಷಗಳ ಕಾಲ ಅನ್ಯೋನ್ಯವಾಗಿದ್ದರಂತೆ. ಯಾಕೋ ಏನೋ ಒಂದು ದಿನ ಆತ ಕೈಕೊಟ್ಟನಂತೆ. ಪ್ರೀತಿಸಿದ ಹುಡುಗನೇ ದೂರವಾದ ಮೇಲೆ ಬದುಕಿದ್ದು ಏನು ಪ್ರಯೋಜನ ಅಂದುಕೊಂಡು ಕೈಯನ್ನೇ ಕುಯ್ದು ಕೊಂಡಳಂತೆ... ಒಎಂಜಿ...! ಆರ್‌ಜೆ ಬಾಯಿಂದ ನಿಟ್ಟುಸಿರು ಬಿಡುತ್ತಾ ತೆಗೆದ ಉದ್ಗಾರ ನನ್ನ ಕಿವಿಗೆ ತಾಕಿತು. ಹುಡುಗಿ ಬಿಕ್ಕಳಿಸತ್ತಾ ಮುಂದುವರಿಸಿದಳು. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಬದುಕಿಕೊಂಡಳಂತೆ. ಆ ಮೇಲೆ ಆ ಘಟನೆಯನ್ನು, ಹುಡುಗನನ್ನು ಮರೆಯಲು ಯಶಸ್ವಿಯಾದಳೆನ್ನಿ.
ಕತೆ ಮುಗಿದಿಲ್ಲ! ಹೀಗೆ ಮುಂದುವರೆಯುತ್ತದೆ... ಅಷ್ಟೆಲ್ಲ ನೋವು ಮರೆತು ಒಂದು ಕೆಲಸಕ್ಕೆ ಸೇರಿದಳಂತೆ. ಅದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇವಳಿಗೆ ಪ್ರೊಪೋಸ್‌ ಮಾಡಿದನಂತೆ. ಸ್ವಲ್ಪ ಟೈಮ್‌ಕೊಡಿ ಆ ಮೇಲೆ ನಿರ್ಧಾರ ತಿಳಿಸುತ್ತೇನೆ ಅಂತ ಹೇಳಿದ್ದಳಂತೆ. ಹುಡುಗ ತುಂಬಾ ಒಳ್ಳೆಯವನು ಎಂಬುದು ದೃಢಪಟ್ಟ ನಂತರ ಆತನ ಪ್ರೊಪೋಸ್‌ನ್ನು ಎಕ್ಸೆಪ್ಟ್‌ಮಾಡಿದಳಂತೆ. ಮತ್ತೆ ಆರು ತಿಂಗಳು ಪ್ರೀತಿಯೇ ಜೀವನ ಎನ್ನುತ್ತಾ ಇಬ್ಬರು ಸುತ್ತಾಡಿದರಂತೆ. ಆದರೆ ಆಕೆಗೆ ಮತ್ತೊಮ್ಮೆ ಕೈಯನ್ನು ಕುಯ್ದುಕೊಳ್ಳುವ ಪ್ರಸಂಗ ಬಂತು; ಆ ಹುಡುಗನ ಮನೆಯವರು ಇವರ ಪ್ರೀತಿಗೆ ಸಮ್ಮತಿಸದೇ ಇದ್ದಾಗ. ನನಗೇ ಯಾಕೆ ಹೀಗೆ ಆಗುತ್ತಿದೆ ಎಂದು ಅಳುತ್ತಾ ಆರ್‌ಜೆ ಮುಂದೆ ಪ್ರಶ್ನೆಯನ್ನಿಟ್ಟಳು ಆ ಯುವತಿ. ಆರ್‌ಜೆಯ ಧ್ವನಿಯೂ ಆಕೆಯ ಕತೆ ಕೇಳಿ ಕ್ಷೀಣಿಸಿತ್ತು. ಒಂದಷ್ಟು ಸಮಾಧಾನದ ಮಾತುಗಳನ್ನಾಡಿ ಆಕೆಯ ಕರೆಯನ್ನು ಕಟ್‌ಮಾಡಿ ಒಂದು ಭಾವನಾತ್ಮಕ ಗೀತೆಯನ್ನು ಪ್ಲೇ ಮಾಡಿದ ಆರ್‌ಜೆ.
ನಿದ್ರೆ ಬರದೆ ತೊಳಲಾಡುತ್ತಿದ್ದ ನನಗೆ ಈ ಕತೆಯನ್ನು ಕೇಳಿದಾಗ ಆತ್ಮೀಯ ಸ್ನೇಹಿತ ನೆನಪಾದ. ಹಾಗಿದ್ದರೆ ಅವನೆಷ್ಟು ಬಾರಿ ಕೈಯನ್ನು ಕುಯ್ದುಕೊಳ್ಳಬೇಕಿತ್ತು ಅಂದುಕೊಂಡೆ. ನೀವು ಅವನನ್ನು ನೋಡಬೇಕು. ಅವನ ಜೀವನೋತ್ಸಾಹವನ್ನು ಕಂಡು ನಾನೇ ಅದೆಷ್ಟು ಬಾರಿ ಕರುಬಿದ್ದೇನೆ ಗೊತ್ತಾ? ಒಂದೇ ಮಾತಿನಲ್ಲಿ ಹೇಳುವುದಾದರೆ ಹಿ ಇಸ್ ಸಿಂಪ್ಲಿ ಅಮೇಜಿಂಗ್‌!
~
ಅವನದು ಬಡ ಅವಿಭಕ್ತ ಕುಟುಂಬ. ಮನೆಯಲ್ಲಿ ೧೨ ಜನ. ಒಬ್ಬೊಬ್ಬರ ಗುಣ, ವರ್ತನೆ ಒಂದೊಂದು ರೀತಿ. ಹಾಗಾಗಿ ಜನರೊಂದಿಗೆ ಆಪ್ತವಾಗಿ ಬೆರೆಯುವ ಗುಣ ಬಾಲ್ಯದಿಂದಲೇ ಉಡುಗೊರೆಯಾಗಿ ಬಂದಿತ್ತು. ಅವನ ದೊಡ್ಡ ಶಕ್ತಿಯೇ ಅದು. ತನ್ನ ಸುತ್ತಲೂ ಎಷ್ಟೇ ಜನರಿರಲಿ, ಎಲ್ಲರೂ ಆತನಿಗೆ ಪರಿಚಯ. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ದ. ಅವನ ಆತ್ಮೀಯ ನಡವಳಿಕೆ ಹೇಗಿತ್ತೆಂದರೆ, ಅವನಾಗಿ ಬಂದು ಮಾತನಾಡದಿದ್ದರೂ ಉಳಿದವರೇ ಆತನ ಬಳಿ ತೆರಳಿ ಹರಟುತ್ತಿದ್ದರು. ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದುದು ಬಲು ಅಪರೂಪ!
ಹೃದಯ ವೈಶಾಲ್ಯತೆಯಲ್ಲಿ ಆತ ಶ್ರೀಮಂತ. ಆದರೆ ದುಡ್ಡಿನ ವಿಚಾರದಲ್ಲಿ ಅವನಿಗೆ ಈ ಮಾತು ಅನ್ವಯವಾಗದು. ಬಡತನ ಆತನ ಬೆನ್ನಿಗೆ ಅಂಟಿ ಕೊಂಡ ಶಾಪ. ವರ್ಷಗಳ ಕೆಳಗೆ ಕೆಲಸ ಸಿಗುವವರೆಗೇ ಆತ ಬಡವನೇ. ಈಗ ಪರವಾಗಿಲ್ಲ. ಸುಧಾರಿಸಿದ್ದಾನೆ. ಈಗ ನಾನು ಮಧ್ಯಮ ವರ್ಗದ ಬಡವ ಎಂದು ಆತ ತನ್ನನ್ನೇ ತಾನು ವ್ಯಂಗ್ಯವಾಗಿ ಹೇಳುವುದುಂಟು ನಗು ಬೀರುತ್ತಾ. ಆ ನಗುವಿನಲ್ಲಿ ಅದೆಷ್ಟು ವಿಷಾದವಿದೆ ಎಂಬುದನ್ನು ನಾನು ಅರ್ಥೈಸಬಲ್ಲೆ.
ಪ್ರಾಥಮಿಕ ಶಾಲೆಯಿಂದಲೇ ಆತನನ್ನು ನಾನು ಬಲ್ಲೆ. ಮನೆಗೆ ತುಂಬಾ ಹತ್ತಿರದಲ್ಲಿ ಸರ್ಕಾರಿ ಶಾಲೆ. ಗೆಳೆಯ ಸೇರಿದ ಎರಡು ದಿನಗಳ ಬಳಿಕ ನಾನು ಅದೇ ಶಾಲೆಗೆ ಸೇರಿದೆ. ಅಕ್ಕ ಪಕ್ಕದಲ್ಲಿ ನಾವು ಕೂರುತ್ತಿದ್ದೆವು. ಮೊದಲ ದಿನದಿಂದಲೇ ನಾವು ಸ್ನೇಹಿತರಾಗಿದ್ದೆವು. ಅಲ್ಲಿಂದ ಇಂದಿನವರೆಗೆ ನಮ್ಮ ಗೆಳೆತನ ಮುಂದುವರಿದಿದೆ. ಭವಿಷ್ಯದ ಶಿಕ್ಷಣದ ಬಗ್ಗೆ ಆತನಿಗೆ ವಿಶೇಷ ಕಲ್ಪನೆಗಳಿರಲಿಲ್ಲ. ಮನೆಯಲ್ಲಿ ಸೂಕ್ತ ಮಾರ್ಗದರ್ಶಕರ ಇಲ್ಲದೇ ಇದ್ದುದು ಅದಕ್ಕೆ ಕಾರಣವಾಗಿರಬಹುದು. ಅವನ ಮನೆಯಲ್ಲಿ ಯಾರೂ ಉತ್ತಮ ಶಿಕ್ಷಣ ಪಡೆದಿರಲಿಲ್ಲ. ಮೊದಲ ಏಳು ವರ್ಷ ತುಂಟಾಟ ಮಾಡುತ್ತಾ ಕಳೆದು ಹೋಯ್ತು.
ಹೈಸ್ಕೂಲ್‌ ಸೇರುವ ಹೊತ್ತಿಗೆ ಶಿಕ್ಷಣದ ಮಟ್ಟುಗಳು ಅರ್ಥವಾಗಲು ಆರಂಭವಾಗಿದ್ದವು. ಮುಂದೇನಾಗಬೇಕು, ಏನು ಮಾಡಬೇಕು, ಶಿಕ್ಷಣದ ಯಾವ ದಿಕ್ಕಿನಲ್ಲಿ ಸಾಗಿದರೆ ಉತ್ತಮ ಎಂಬಿತ್ಯಾದಿ ಪ್ರಶ್ನೆಗಳು ಕಾಡಲು ಆರಂಭಿಸಿದ್ದವು. ಭವಿಷ್ಯದ ದೃಷ್ಟಿಯಿಂದ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್‌ ಮಾಧ್ಯಮ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಹರಡಲು ಆರಂಭಿಸಿದ್ದ ಕಾಲ ಅದು. ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಬೇಕು ಎಂಬ ಆಸೆ ಗೆಳೆಯನಲ್ಲಿ ಮೊಳಕೆ ಒಡೆದಿತ್ತು. ಇಂಗ್ಲಿಷ್‌ ಶಿಕ್ಷಣ ಸ್ವಲ್ಪ ದುಬಾರಿ. ಅದಕ್ಕಾಗಿ ೧೦ ಕಿ.ಮೀ ದೂರ ಸಾಗಬೇಕು. ಮನೆಯ ಆರ್ಥಿಕ ಪರಿಸ್ಥಿತಿ ಆತನ ಆಸೆಯ ಚಿಗುರನ್ನು ಚಿವುಟಿ ಹಾಕಿತ್ತು. ತನ್ನ ಆಸೆಯನ್ನು ಮನೆಯಲ್ಲಿ ಪ್ರಸ್ತಾಪಿಸನಾದರೂ ಸೂಕ್ತ ಪ್ರತಿಕ್ರಿಯೆ ಬಂದಿರಲಿಲ್ಲ. ಪಾಪ ಮನೆಯವರು ಏನು ಮಾಡುತ್ತಾರೆ?  ಅಷ್ಟು ಫೀಸ್‌ ಕೊಟ್ಟು ಇಂಗ್ಲಿಂಷ್‌ ಶಾಲೆಗೆ ಸೇರಿಸುವ ತಾಕತ್ತು  ಅವರಿಗೆಲ್ಲಿ ಇತ್ತು.? ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದುದೇ ಬಹಳ ಕಷ್ಟದಲ್ಲಿ. ಈ ಸತ್ಯ ನನ್ನ ಗೆಳೆಯನಿಗೆ ಬಲು ಬೇಗ ಅರ್ಥವಾಗಿತ್ತು. ಮೊದಲ ಬಾರಿ ಅವನು, ಪಾಲಿಗೆ  ಬಂದದ್ದೇ ಪಂಚಾಮೃತ ಎಂಬ ತತ್ವ ಪದವನ್ನು ನಗುವುನಿಂದಲೇ ಅನುಮೋದಿಸಿದ್ದ. ಜೊತೆಗೆ ಅವನ ಅಜ್ಜಿ ಆಗಾಗ ಹೇಳುತ್ತಿದ್ದ ‘ಆಗುವುದೆಲ್ಲಾ ಒಳ್ಳೆಯದಕ್ಕೆ’ ಎಂಬ ಪದವನ್ನು ಗುನುಗಲು ಆರಂಭಿಸಿದ್ದ.
ಪ್ರೌಢ ಶಾಲೆ ಸೇರಿದ ಮೊದಲ ಒಂದು ವಾರ ಖಿನ್ನನಾಗಿದ್ದ. ಆಸೆ ಈಡೇರಲಿಲ್ಲ ಎಂಬ ಸಹಜ ದುಃಖ ಅವನಲ್ಲಿ ಇತ್ತು. ಒಂದೇ ವಾರ, ನಂತರ ಅವನು ಎಂದಿನಂತೆ ಎಲ್ಲರನ್ನೂ ನಗಿಸಲು ಆರಂಭಿಸಿದ್ದ, ಸ್ವಯಂ ನಗಲು ಶುರು ಹತ್ತಿದ್ದ. ಮತ್ತೆ ಮೂರು ವರ್ಷ ಹಾಗೆ ಕಳೆದು ಹೋಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳು ಬಂದಿತ್ತು. ಇನ್ನು ಪದವಿ ಪೂರ್ವ ಶಿಕ್ಷಣ. ಪಿಯುಸಿಗೆ ಹೋಗುತ್ತೇನೆ ಇಲ್ಲವೋ ಎಂಬ ಅಳುಕು ಆತನಿಗೆ. ಕಾರಣ ಮತ್ತೆ ಮನೆಯ ಸ್ಥಿತಿ. ಆದರೆ ಅದೃಷ್ಟವಶಾತ್‌ ಆತನ ಮನೆಯವರಿಗೆ, ಎಷ್ಟು ಕಷ್ಟವಾದರೂ ಪರವಾಗಿಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಮನೋಭಾವ ಇದ್ದುದರಿಂದ ಪಿಯುಸಿಗೆ ಸೇರಲು ಅಡ್ಡಿ ಆತಂಕಗಳು ಇರಲಿಲ್ಲ. ಆದರೆ ಖಾಸಗಿ ಶಾಲೆಗೆ ಸೇರುವ ಪ್ರಸ್ತಾವವನ್ನು ಮನೆಯಲ್ಲಿ ಇಡುವ ಹಾಗಿರಲಿಲ್ಲ. ಮನೆಯಿಂದ ೧೦ ಕಿ.ಮೀ ದೂರದಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು. ಇದ್ದುದು ಮೂರು ವಿಭಾಗ. ವಿಜ್ಞಾನ, ಕಲಾ, ವಾಣಿಜ್ಯ. ವಿಜ್ಞಾನದಲ್ಲಿ ಪಿಸಿಎಂಬಿ ಮಾತ್ರ.
ಕಂಪ್ಯೂಟರ್‌ಗಳು ಪ್ರವರ್ಧಮಾನಕ್ಕೆ ಬಂದಂತಹ ಸಮಯ. ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಮನೆಗೊಬ್ಬರಂತೆ ತಯಾರಾಗುತ್ತಿದ್ದ ಕಾಲ ಅದು. ಇವನಿಗೆ ಕಂಪ್ಯೂಟರ್‌ ಕ್ಷೇತ್ರದೊಳಕ್ಕೆ ಪ್ರವೇಶಿಸುವ ಆಕಾಂಕ್ಷೆ. ಅದಕ್ಕೆ ಪಿಸಿಎಂಸಿ ಸೇರಿದರೆ ಒಳ್ಳೆದು. ಮುಂದೆ ಸಿಇಟಿ ಬರೆದು ಎಂಜಿನಿಯರಿಂಗ್‌ ಮಾಡೋಣ ಎಂಬ ಕನಸೂ ಆತನಲ್ಲಿತ್ತು. ಆದರೆ ಆ ಕಾಲೇಜಿನಲ್ಲಿ ಪಿಸಿಎಂಬಿ ಬಿಟ್ಟರೆ ಬೇರೇನೂ ಇರಲಿಲ್ಲ. ಹಾಗಾಗಿ ಆಯ್ಕೆಗಳೇ ಇಲ್ಲದೆ ಅದಕ್ಕೆ ಸೇರಿದ. ತನ್ನ ಕನಸು ನೆರವೇರುವುದಿಲ್ಲ ಎಂಬುದು ಸ್ನೇಹಿತನಿಗೆ ಮೊದಲನೇ ವರ್ಷದಲ್ಲಿ ಅರ್ಥವಾಗಿತ್ತು. ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕವನ್ನು ಕೇಳಿ ಅವನು ಹೌಹಾರಿದ್ದ. ಇದು ಆಗುವುದಲ್ಲ ಎಂಬುದನ್ನು ಆತ ಮನಗಂಡಿದ್ದ. ಹಾಗಾಗಿ ಸಿಇಟಿ ಬರೆಯುವ ಆಸೆಗೆ ತಿಲಾಂಜಲಿ ಬಿಟ್ಟು ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮತ್ತೊಮ್ಮೆ ಉದ್ಗರಿಸಿದ್ದ!
ಎರಡನೇ ವರ್ಷ ಆತನ ಸಹಪಾಠಿಗಳೆಲ್ಲರೂ ಸಿಇಟಿ ಬರೆಯುತ್ತಿದ್ದರೆ, ಇವನು ಮನೆಯ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ. ಸಿಇಟಿ ಬರೆಯದಿದ್ದರೂ ಡಿಗ್ರಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದು, ಎಂಸಿಎ ಅಥವಾ ಎಂಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಮಾಡಿಯಾದರೂ ಸಾಫ್ಟ್‌ವೇರ್‌ ವಲಯ ಪ್ರವೇಶಿಸಬಹುದು ಎಂಬ ಹೊಸ ಕನಸು ಆತನಲ್ಲಿ ಚಿಗುರಿತ್ತು. ಆ ಕನಸಿಗೂ ಬಿದ್ದದ್ದು ತಣ್ಣೀರೇ. ಅದೇ ಪಟ್ಟಣದಲ್ಲಿದ್ದ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇರಲಿಲ್ಲ. ಅಲ್ಲಿಂದ ಮತ್ತೆ ೧೫ ಕಿ.ಮೀ ದೂರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಪದವಿ ವಿಭಾಗ ಇತ್ತು. ಆದರೆ ಗೊತ್ತಲ್ಲ... ದುಬಾರಿ. ಈ ನಡುವೆ ಮನೆಯ ಆರ್ಥಿಕ ಸ್ಥಿತಿ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿತ್ತು. ಹಾಗಾಗಿ ವಿಜ್ಞಾನ ಪದವಿ ಪಡೆಯುವುದಕ್ಕೆ ಪೋಷಕರ ಒಪ್ಪಿಗೆ ಇತ್ತು. ಆದರೆ ಐಚ್ಛಿಕ ವಿಷಯಗಳದ್ದೇ ತಕರಾರು. ಕಂಪ್ಯೂಟರ್‌ ಸೈನ್ಸ್‌ ವಿಷಯಕ್ಕೆ ಫೀಸು ಜಾಸ್ತಿ. ಹಾಗಾಗಿ ಅದು ಬೇಡ. ಪಿಸಿಎಂ ಆದೀತು. ಅದಕ್ಕೆ ಸ್ವಲ್ಪ ಫೀಸು ಕಡಿಮೆ ಎಂಬ ಮಾತು ಬಂತು. ಅಸಲಿಗೆ ಪಿಸಿಎಂ, ಸಿಬಿಝಡ್‌, ಪಿಎಂಸಿಎಸ್‌ ಅಂದರೆ ಏನೂ ಎಂಬುದೇ ಮನೆಯವರಿಗೆ ಗೊತ್ತಿರಲಿಲ್ಲ. ಯಾವುದಕ್ಕೆ ಫೀಸು ಕಡಿಮೆ ಅದಕ್ಕೆ ಸೇರೋಣ. ಯಾವುದಾದರೂ ಏನು? ಎಂಬ ಮನೋಭಾವ. ಗೆಳೆಯನ ಕನಸಿನ ಗೋಪುರದ ಇಟ್ಟಿಗೆ ಕುಸಿಯಲು ಆರಂಭಿಸಿತ್ತು. ನನ್ನ ಗೆಳೆಯ ಕೈ ಕುಯ್ದುಕೊಳ್ಳಬೇಕಿತ್ತು ಅಲ್ವಾ? ಉಹ್ಞುಂ ಅವನು ಹಾಗೆ ಮಾಡಲಿಲ್ಲ. ಮತ್ತೆ ಪಾಲಿಗೆ ಬಂದಿದ್ದು....., ಎಲ್ಲವೂ ಒಳ್ಳೆಯದಕ್ಕೆ ಆಗುತ್ತಿರುವುದು ಅಂದು ಕೊಂಡು ಪಿಸಿಎಂಗೆ ಸೇರಿದ.
ಮೂರು ವರ್ಷ ಪದವಿ ತರಗತಿಯಲ್ಲಿ ಅವನಿಗೆ ಒಂದಷ್ಟು ಹೊಸ ಗೆಳೆಯರು ಸಿಕ್ಕಿದರು. ಜೀವನ ಎಂದರೆ ಏನು ಎನ್ನುವುದು ಅರ್ಥವಾಗುತ್ತಾ  ಹೋಯಿತು. ಪಿಸಿಎಂ ಮಾಡುತ್ತಿದ್ದರೂ ಎಂಸಿಎ ಮಾಡುವ ಆಸೆಯನ್ನು ಆತ ಬಿಟ್ಟಿರಲಿಲ್ಲ. ಮನೆಯಲ್ಲಿ ದುಡ್ಡುಕೊಡದಿದ್ದರೆ ಪರವಾಗಿಲ್ಲ ಬ್ಯಾಂಕ್‌ ಸಾಲ ಮಾಡಿ ಸ್ನಾತಕೋತ್ತರ ಮಾಡಬಹುದು ಎಂದು ಅಂದು ಕೊಂಡಿದ್ದ. ಆದರೆ ಡಿಗ್ರಿ ಕೊನೆ ವರ್ಷಕ್ಕೆ ಬರುವಾಗ ಆತ ಆ ಕನಸನ್ನು ಕೈ ಬಿಟ್ಟಿದ್ದ. ಕನಿಷ್ಠ ತನಗೆ ಇಷ್ಟಾದರೂ ಶಿಕ್ಷಣ ದೊರಕಿತು, ಬಡತನದ ಕಾರಣದಿಂದ ಶಿಕ್ಷಣ ಪಡೆಯದೇ ಇರುವ ಅದೆಷ್ಟು ಜನರಿದ್ದಾರೆ ಅಂದುಕೊಂಡ. ಕಷ್ಟದ ನಡುವೆ ಇಷ್ಟು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರಲ್ಲಾ ಮನೆಯವರು? ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಕಳಕಳಿಯನ್ನು ಕಂಡು ಆತನಿಗೆ ಕಣ್ತುಂಬಿ ಬಂತು. ಇನ್ನು ಮನೆಯವರಿಗೆ ಹೊರೆ ಆಗಬಾರದು. ಕೆಲಸಕ್ಕೆ ಸೇರಬೇಕು ಎಂದು ತೀರ್ಮಾನಿಸಿದ್ದ. ಮನೆಯವರಿಗೂ ನಿರ್ಧಾರ ತಿಳಿಸಿದ್ದ. ಎಂಎಸ್‌ಸಿ ಮಾಡುತ್ತಿದ್ದರೆ ಮಾಡು ಎಂದು ಮನೆಯಲ್ಲಿ ಹೇಳಿದ್ದರು. ಆದರೆ ಅದು ಅವನಿಗೆ ಇಷ್ಟವಿರಲಿಲ್ಲ. ಎಂಸಿಎಗೆ ಕಳುಹಿಸುವ ತಾಕತ್ತು ಮತ್ತು ಒಂದು ವೇಳೆ ಸಾಲ ಮಾಡಿದರೆ ಇವನು ಮುಂದೆ ಕಟ್ಟುತ್ತಾನೆ ಎಂಬ ಧೈರ್ಯವೂ ಮನೆಯವರಿಗೆ ಇರಲಿಲ್ಲ. ಇದನ್ನು ಅರಿತಿದ್ದ ಮಿತ್ರ, ಆ ಬಗ್ಗೆ ಪ್ರಸ್ತಾಪಿಸಿಯೇ ಇರಲಿಲ್ಲ. ಡಿಗ್ರಿ ಪರೀಕ್ಷೆ ಮುಗಿದು ಫಲಿತಾಂಶ ಬರುವುದಕ್ಕೂ ಮುನ್ನ ಬೆಂಗಳೂರಿಗೆ ಹೊರಟಿದ್ದ ಎಂದಿನಂತೆ ನಗುತ್ತಾ.
ಉತ್ತಮ ಕೆಲಸ ಸಿಗುತ್ತದೆ ಎಂಬ ನಿರೀಕ್ಷೆ ಅವನಿಗಿರಲಿಲ್ಲ. ಒಟ್ಟಿನಲ್ಲಿ ಒಂದು ಕೆಲಸ ಸಿಕ್ಕಿದರೆ ಸಾಕು. ಎಲ್ಲಾ ಆಮೇಲೆ ನೋಡೋಣ. ಗಾಳಿ ಬೀಸಿದೆಡೆಗೆ ಸಾಗುವ ನೀತಿಯನ್ನು ಅವನು ಜೀವನದಲ್ಲಿ ಅಳವಡಿಸಿಕೊಂಡಿದ್ದ. ಎರಡು ಮೂರು ಸಂದರ್ಶನಕ್ಕೆ ಹಾಜರಾದ. ಒಂದು ಪುಟ್ಟ ಕಂಪೆನಿ ಸಣ್ಣ ಕೆಲಸ ಕೊಟ್ಟಿತು. ದೊಡ್ಡ ಸಂಬಳ ಅಲ್ಲ. ಆದರೆ ಡಿಗ್ರಿಗೆ ಕಟ್ಟಿದ ಫೀಸಿಗಿಂತ ದುಪ್ಪಟ್ಟು ನೀಡಲು ಕಂಪೆನಿ ಮುಂದೆ ಬಂದಿತ್ತು. ಮಿತ್ರನಿಗೆ ಅದುವೇ ಸಾಕಾಯ್ತು. ತುಂಬಾ ಖುಷಿ ಪಟ್ಟಿದ್ದ. ಮನೆಯವರೂ ಸಂತಸ ಪಟ್ಟಿದ್ದರು. ಇವನಿಂದ ಪ್ರತಿ ತಿಂಗಳೂ ಸ್ವಲ್ಪ ಮಟ್ಟಿನ ಆರ್ಥಿಕ ನೆರವನ್ನು ಅವರೂ ಬಯಸಿದ್ದರು. ಮನೆಯ ಕಷ್ಟ ಗೊತ್ತಿದ್ದರಿಂದ ಅವರ ನಿರೀಕ್ಷೆಗೆ ಸೂಕ್ತವಾಗಿ ಸ್ಪಂದಿಸಿದ್ದ.
ತಾನು ಸಣ್ಣ ಕಂಪೆನಿಯಲ್ಲಿರುವುದು, ಕಡಿಮೆ ಸಂಬಳ ಎಂಬ ಕೀಳರಿಮೆ ಅವನಿಗೆ ಇರಲಿಲ್ಲ. ನಾನು ಶಿಕ್ಷಣ ಪಡೆಯಲು ಹೂಡಿದ ಬಂಡವಾಳಕ್ಕಿಂತ ಹೆಚ್ಚು ಸಂಬಳ ಸಿಗುತ್ತಿದೆ. ಸಿಕ್ಕಿದ್ದರಲ್ಲೇ ತೃಪ್ತ ಎಂಬ ಸಮಾಧಾನ ಆತನಲ್ಲಿತ್ತು. ಇವನ ಕೆಲಸವನ್ನು ಕಂಪೆನಿ ಮಾಲೀಕರು ಮೆಚ್ಚಿಕೊಂಡಿದ್ದರು. ಅವರಷ್ಟೇ ಅಲ್ಲ; ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸುಂದರ ತರುಣಿ ಕೆಲಸವನ್ನಷ್ಟೇ ಅಲ್ಲ ಇವನನ್ನೂ ಮೆಚ್ಚಿಕೊಂಡಿದ್ದಳು ಸ್ನೇಹಿತೆಯಾಗಿ! ಇವನು ಕೆಲಸಕ್ಕೆ ಸೇರಿದ ಮರು ವರ್ಷ ಆಕೆ ಕಂಪೆನಿ ಸೇರಿದ್ದಳು.
ಹುಡುಗಿಯರ ವಿಷಯದಲ್ಲಿ ನನ್ನ ಗೆಳೆಯ ಸ್ವಲ್ಪ ದೂರವೇ. ವಿದ್ಯಾರ್ಥಿ ಜೀವನದಲ್ಲಿ ಎಂದೂ ಹುಡುಗಿಯರ ಹಿಂದೆ ಬಿದ್ದವನಲ್ಲ. ಸಹಪಾಠಿ ಮಿತ್ರೆಯರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದ. ಆವಾಗೆಲ್ಲ ಆತನಿಗೆ ಜೀವನದಲ್ಲಿ ನೆಲೆ ಕಂಡುಕೊಳ್ಳುವುದೇ ಮುಖ್ಯವಾಗಿತ್ತು. ಪ್ರೀತಿ ಪ್ರೇಮದ ಬಗ್ಗೆ ತಲೆಕೆಡಿಕೊಂಡವನಲ್ಲ. ವೃತ್ತಿಗೆ ಸೇರಿದ ನಂತರ ಆತನ ಮನಸ್ಸಲ್ಲಿ ಪ್ರೀತಿ ಎಂಬ ಮಾಯಾವಿ ತಂಗಾಳಿಯಂತೆ ಬೀಸಿರಬೇಕು. ಪ್ರೀತಿಯಲ್ಲಿ ಬಿದ್ದಿದ್ದ.
ಕಚೇರಿಯಲ್ಲಿ ಈತನೇ ಅನುಭವಿ. ಹಾಗಾಗಿ ಹೊಸದಾಗಿ ಸೇರಿದ್ದ ಅವಳಿಗೆ ಕೆಲಸವನ್ನು ಹೇಳಿಕೊಡುವ ಜವಾಬ್ದಾರಿ ಇವನಿಗೆ ವಹಿಸಿದ್ದರು ಮ್ಯಾನೇಜರ್‌. ಇವನ ಆಂತರ್ಯವನ್ನು ಸರಿಯಾಗಿ ಅರ್ಥೈಸಿಕೊಂಡ ಆಕೆ, ಇವನೊಂದಿಗೆ ಆತ್ಮೀಯವಾಗಿ ಇದ್ದಳು. ಕೆಲವು ದಿನಗಳಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು ಅವರಿಬ್ಬರು. ಹುಡುಗಿಯ ಆತ್ಮೀಯತೆಯನ್ನು ಗೆಳೆಯ ತಪ್ಪಾಗಿ ಅರ್ಥೈಸಿಕೊಂಡ. ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂದುಕೊಂಡಿದ್ದ. ಇವನು ಅವಳನ್ನು ಆರಾಧಿಸಲು ಆರಂಭಿಸಿದ್ದ. ಮೊದಲ ಪ್ರೀತಿ ನೋಡಿ! ಆಕೆಯ ಬಗ್ಗೆ ನನ್ನಲ್ಲಿ ಪ್ರಸ್ತಾಪಿಸಿದಾಗ ನೇರವಾಗಿ ನಿನ್ನ ಭಾವನೆಗಳನ್ನು ಹೇಳು ಅಂದಿದ್ದೆ. ಒಂದು ದಿನ ನೇರವಾಗಿ ಕೇಳಿಬಿಟ್ಟ. ಕೈ ಕುಯ್ದು ಕೊಳ್ಳಬೇಕಾದ ಸ್ಥಿತಿ ಆ ದಿನ ಸೃಷ್ಟಿಯಾಗಿತ್ತು. ಇವನ ಪ್ರೀತಿಯನ್ನು ಆಕೆ ತಿರಸ್ಕರಿಸಿದ್ದಳು. ಗೆಳೆತನ ಬಿಟ್ಟರೆ ಮತ್ತೇನಿಲ್ಲ ಎಂದು ನೇರವಾಗಿ ಹೇಳಿದ್ದಳು. ನೀನು ಹೀಗೆಲ್ಲಾ ಕಲ್ಪಿಸಿಕೊಳ್ಳುತ್ತೀಯ ಅಂದುಕೊಂಡಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ ಜಾಡಿಸಿದ್ದಳು.
‘ಅಂದುಕೊಂಡಿದ್ದು ಒಂದೂ ನಡೀತಿಲ್ವಲ್ಲಾ’ ಎಂದು ನನಗೆ ದೂರವಾಣಿ ಕರೆ ಮಾಡಿ ಅತ್ತಿದ್ದ. ಆ ಆರ್‌ಜೆಯಂತೆ ನಾನೂ ಸಾಂತ್ವನ ಮಾಡಿದ್ದೆ. ಹೋಗ್ಲಿ ಬಿಡು ಅಂದಿದ್ದೆ. ‘ಪ್ರೀತಿ ಸಿಗದಿದ್ದರೆ ಹೋಗಲಿ ಮಾರಾಯ, ಇನ್ನು ಆಫೀಸಲ್ಲಿ ಆಕೆ ಮುಖ ತೋರಿಸುವುದಾದರೂ ಹೇಗೆ’ ಎಂದು ಕೇಳಿದ್ದ. ಅದರೆಲ್ಲೇನಿದೆ? ಎಂದು ನಿನ್ನ ಮನವಿಯನ್ನು ಸ್ವೀಕರಿಸುವುದಕ್ಕೂ, ನಿರಾಕರಿಸುವುದಕ್ಕೂ ಅವಳಿಗೆ ಸ್ವಾತಂತ್ರ‍್ಯ ಇದೆ ಎಂದು ವಿವರಿಸಿದ್ದೆ. ಆದರೆ ಯಾಕೋ ಏನೋ ಅಪರಾಧ ಮನೋಭಾವದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಮಾಲೀಕರು ಕಾರಣ ಕೇಳಿದಾಗ ಹೇಳಲಾಗದೇ ತಡವರಿಸಿದ್ದ. ಹುಡುಗಿಗೆ ಮುಖ ತೋರಿಸದೇ ಅಲ್ಲಿಂದ ಕಾಲ್ಕಿತ್ತಿದ್ದ.  
ಬೆಂಗಳೂರಿನಲ್ಲಿ ಅವಕಾಶಗಳಿಗೆ ದಾರಿದ್ರ‍್ಯವೇ? ಅಲ್ಲಿ ಕೆಲಸ ಬಿಟ್ಟ ಒಂದು ವಾರದಲ್ಲಿ ಮತ್ತೊಂದು ಕಂಪೆನಿಯಲ್ಲಿ ಇನ್ನೂ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಮೊದಲ ಪ್ರೀತಿ ಒಂದು ವಾರಗಳ ಕಾಲ ಆತನನ್ನು ದುಃಖಿಸುವಂತೆ ಮಾಡಿತ್ತು. ಹೊಸ ಕೆಲಸದಲ್ಲಿ ತೊಡಗಿಕೊಂಡ ನಂತರ ಆ ಘಟನೆಗಳನ್ನು ಮರೆಯಲು ಆರಂಭಿಸಿದ್ದ. ಕನಸುಗಳು ನನಸಾಗದೇ ಇರುವುದು ಅವನಿಗೆ ಹೊಸದಲ್ಲ ನೋಡಿ! ನನಸಾಗದ ಕನಸಗಳು ಅವನ ಜೀವನದ ಹಾಸುಹೊಕ್ಕು!
ನಾನು ಕೋರ್ಸ್‌ ಮುಗಿಸಿ ಬೆಂಗಳೂರಿಗೆ ಕಾಲಿಟ್ಟಿದ್ದಾಗ ಖುದ್ದು ಗೆಳೆಯನೇ ನನ್ನನ್ನು ಅದೇ ನಗು ಮುಖದಲ್ಲಿ ಸ್ವಾಗತಿಸಿ ತನ್ನ ರೂಮಿಗೆ ಕರೆದೊಯ್ದಿದ್ದ. ಹಿ ವಾಸ್‌  ವೆಲ್‌ ಸೆಟಲ್ಡ್‌! ಮದುವೆ ಒಂದು ಆದರಾಯಿತು. ಕೆಲಸಕ್ಕೆ ಸೇರಿದ ಎರಡು ಮೂರು ವರ್ಷದಲ್ಲಿ ತನ್ನ ಕಾಲ ಮೇಲೆ ಸ್ವತಂತ್ರವಾಗಿ ನಿಂತಿದ್ದಾನೆ. ನನಗೂ ಖುಷಿಯಾಯಿತು. ಅತ್ತ ಮನೆಯಲ್ಲಿ ಆತನ ಬಗ್ಗೆ ಪೋಷಕರೂ  ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.
~
ಮರುದಿನ ಶುಕ್ರವಾರ ಬೆಳಿಗ್ಗೆ ೧೧ರ ಸುಮಾರು. ನೈನ್‌ ಫೋರ್‌ ಏಯ್ಟ್ ಡಬಲ್‌ ಒನ್‌ ಫೋರ್‌ ಏಯ್ಟ್‌ ತ್ರೀ ಫೋರ್‌ ಟು... ಹೊಸ ನಂಬರಿನಿಂದ ಫೋನ್‌ ಬಂತು. ಯಾರಪ್ಪಾ ಅಂದುಕೊಂಡೇ ರಿಸೀವ್‌ ಮಾಡಿದೆ. ಆ ಕಡೆಯಿಂದ ಗೆಳೆಯನ ಧ್ವನಿ. ನಗುತ್ತಿದ್ದ. ‘ಯಾವುದೋ ಇದು ಹೊಸ ನಂಬರ್‌’ ಅಂತ ಕೇಳಿದೆ. ‘ಹೊಸ ಸೆಟ್‌ ತೆಗೆದೆ, ಅದಕ್ಕೆ ಹೊಸ ಸಿಮ್‌ ಹಾಕಿದ್ದೀನಿ’ ಅಂದ. ‘ಏನೋ ವಿಷಯ’ ಅಂದೆ. ‘ಒಂದು ಮೇಲ್‌ ಬಂದಿದೆ. ಅದೇ ಹಳೇ ಕಂಪೆನಿಯಲ್ಲಿ ಇದ್ಳಲ್ಲಾ, ಮುಂದಿನ ತಿಂಗಳು ಅವಳ ಮದುವೆ ಅಂತೆ ಇನ್‌ವೈಟ್‌ ಮಾಡಿದ್ದಾಳೆ. ಹೋಗ್ಲೇನೋ’ ಎಂದು ಕೇಳಿದ. ‘ನಿನ್ನಿಷ್ಟ’ ಎಂದೆ. ‘ಏನು ಮಾಡೋದು ಅಂತ ಗೋತ್ತಾಗ್ತಾ ಇಲ್ಲ ಕಣೋ. ಆಮೇಲೆ ಮಾತಾಡ್ತೀನಿ’ ಅಂದವನೇ ಫೋನ್‌ ಕಟ್‌ ಮಾಡಿದ.

ಗುರುವಾರ, ಜೂನ್ 28, 2012

ಅಮ್ಮ- ಅಪ್ಪನ ಸೇವೆಯ ನೆನೆಯುತ್ತಾ...


 ಗ ತಾನೇ ಹೊಸ ಬೈಕ್‌ ಕೊಂಡಿದ್ದೆ. ಬಹು ದಿನಗಳ ಕನಸು ಅದು. ಕೊನೆಗೂ ನನಸಾಗಿತ್ತು. ಬೈಕ್‌ನಲ್ಲಿ ೩೦೦ ಕಿ.ಮೀ ದೂರದಲ್ಲಿ ಇರುವ ನನ್ನ ಊರಿಗೆ ಹೋಗುವ ಮೋಹ ನನ್ನಲ್ಲಿ ಇರದಿದ್ದರೂ, ಊರಿನ ಸಮೀಪದಲ್ಲೇ ಬಯಲನ್ನೇ ಆಲಯವನ್ನಾಗಿ ಮಾಡಿಕೊಂಡಿರುವ ಸೌತಡ್ಕ ಮಹಾಗಣಪತಿಯ ಸನ್ನಿಧಿಯಲ್ಲಿ ಬೈಕಿಗೆ ಪೂಜೆ ಮಾಡಿಸಬೇಕು  ಎಂಬುದು ಮನಸ್ಸಲ್ಲಿ ತನ್ನಂತಾನೆ ಮೂಡಿದ ಆಲೋಚನೆ. ಯಾರಿಗ್ಗೊತ್ತು? ಆ ಗಣಪತಿಯೇ ಆ ಅಭಿಲಾಷೆ ಬಿತ್ತಿರಬಹುದು!  ಹಾಗಾಗಿ, ಬೆಂಗಳೂರಿನಲ್ಲಿ ಬೈಕ್‌ ಖರೀದಿಸಿಯೂ ಅದಕ್ಕೆ ದೇವಸ್ಥಾನದಲ್ಲಿ ಅರ್ಚಕರಿಂದ ಪೂಜೆ ಮಾಡಿಸಿರಲಿಲ್ಲ. ನಾನೇ ಅಗರಬತ್ತಿ ಹಚ್ಚಿ ಎರಡು ಬಾರಿ ಸುರುಳಿ ಸುತ್ತಿದ್ದೆ.
   ಹೊಸ ಬೈಕನ್ನು  ಆರಂಭದಲ್ಲಿ ಇಂತಿಷ್ಟೇ ವೇಗದಲ್ಲಿ ಓಡಿಸಬೇಕು ಎಂಬ ನಿಯಮ ಇರುವುದರಿಂದ ಮತ್ತು ಒಂದು ಸರ್ವೀಸ್‌ ಆದ ಮೇಲೆ  ಊರ ಕಡೆ ಹೊಡೆಯುವುದೆಂದು ತೀರ್ಮಾನಿಸಿದೆ. ಮೊದಲ ಸರ್ವೀಸ್‌ಗೆ ಎರಡು ತಿಂಗಳು ಕಾಯಬೇಕು. ಅಷ್ಟರವರೆಗೆ ಬೈಕಿಗೆ ದೇವರ ದರ್ಶನ ಇಲ್ಲ. ಆಫೀಸ್‌- ರೂಮ್‌- ಆಫೀಸ್‌ ಮಾತ್ರ ಸುತ್ತಾಟ... ಬೆಂಗಳೂರಿನ ಟ್ರಾಫಿಕ್‌ನಲ್ಲಿ ಮೊದಲ ವಾರ ಅಳುಕಿನಲ್ಲೇ ಬೈಕ್‌ ಓಡಿಸಿದೆ.
  ಹೈವೇ  ಬದಿಯಲ್ಲಿ ಊರಿಗೆ ಹೊರಟ ಪಯಣದ ಮಧ್ಯೆ...
  ಎರಡು ತಿಂಗಳಾಯ್ತು. ಸರ್ವೀಸ್‌ ಮಾಡುವ ಸಮಯವೂ ಬಂತು. ಎಲ್ಲಾ ಮುಗಿದ ಮೇಲೆ ಒಂದು ಶುಭದಿನ ಊರಿಗೆ, ಅಲ್ಲಲ್ಲ ಸೌತಡ್ಕ ಗಣಪನ ಸನ್ನಿಧಿಗೆ ಬೈಕ್‌ ತೆಗೆದುಕೊಂಡು ಹೊರಟೆ. ಆಫೀಸ್‌ನಲ್ಲಿ ಎಲ್ಲರೂ ‘ಹುಷಾರು ಗುರುವೇ’ ಎಂದು ಎಚ್ಚರಿಸಿಯೇ ಕಳುಹಿಸಿ ಕೊಟ್ಟಿದ್ದರು. ಮೇ ೧೭ ಬೆಳಿಗ್ಗೆ ಸಮಯ ೬.೧೫ ನನ್ನ ಬೈಕ್‌ ನೆಲಮಂಗಲದತ್ತ ಮುಖಮಾಡಿತ್ತು. ೪೦ ಕಿ.ಮೀ ಹೋಗುವಷ್ಟರಲ್ಲೇ ತಪ್ಪು ನಿರ್ಧಾರ ತೆಗೆದುಕೊಂಡೆನಾ ಎನಿಸಿತು. ಅಗಲವಾದ ಹೈವೇನಲ್ಲಿ ಎಲ್ಲಾ ವಾಹನಗಳೂ ನನ್ನ ಎದುರು, ಇನ್ನು ಕೆಲವು ಹಿಂದಿಕ್ಕಿ ಹಾದು ಹೋಗುತ್ತಿರುವಾಗ ನಾನು ಮತ್ತು ಬೈಕ್‌ ರಸ್ತೆಯ ಅಂಚಿನಲ್ಲಿ ಬಳಿದಿರುವ ಬಿಳಿ ಪಟ್ಟಿಯ ಬದಿಯಲ್ಲೇ ಸಾಗುತ್ತಿದ್ದೆವು. ಇನ್ನೂ ಹೊಸ ಬೈಕ್‌, ಈಗಷ್ಟೇ ರೈಡಿಂಗ್‌ ಕಲಿತಿದ್ದರಿಂದ ಹೆಚ್ಚೇ ಜಾಗರೂಕನಾಗಿದ್ದೆ. ನೆನಪಿಡಿ. ನಾನು ಮೊದಲ ಬಾರಿ ಹೈವೇನಲ್ಲಿ ಬೈಕ್ ಸವಾರಿ ಮಾಡುತ್ತಿರುವುದು.    ಅಂದ ಹಾಗೆ ಮರೆತಿದ್ದೆ. ನಾನು ಊರಿಗೆ ಬೈಕಲ್ಲಿ ಬರುವುದಕ್ಕೆ ಮನೆಯಲ್ಲಿ ಎಲ್ಲರಿಂದಲೂ ಬಂದ ವಿರೋಧವನ್ನು ಸೌತಡ್ಕ ಮಹಾಗಣಪತಿಯ ಹೆಸರು ಹೇಳಿ ಹತ್ತಿಕ್ಕಿದ್ದೆ!
  ನಿರ್ಧಾರ ತಪ್ಪಾಯಿತೇನೋ ಅಂದುಕೊಂಡು ೫ ಕಿ.ಮೀ ಕಳೆಯುವಷ್ಟರಲ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಮನಸು ಶುರು ಹಚ್ಚಿತು. ಆಮೇಲೆ ಅಂತಹ ಯೋಚನೆ ಹೊಳೆಯಲಿಲ್ಲ. ಬೈಕಿಂದ ಬೀಳುವವರೆಗೂ! ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ...ಬೈಕ್‌ ಖುಷಿಯಿಂದ ಓಡುತ್ತಲೇ ಇತ್ತು. ನನ್ನ ಮನಸು ಕೂಡ ಸೌತಡ್ಕ ಗಣಪನ ಬಳಿಗೆ ಧಾವಿಸುತ್ತಿತ್ತು. ಅತ್ಯಂತ ರಮಣೀಯ ಶಿರಾಡಿ ಘಾಟಿಯ ದೃಶ್ಯ ಸೊಬಗನ್ನು ನನ್ನ ಬೈಕ್‌  ನೋಡುತ್ತಿರುವುದು ಮೊದಲ ಬಾರಿ. ಹಳ್ಳ ಬಿದ್ದ ಘಾಟಿಯ ರಸ್ತೆಯಲ್ಲಿ ನಾನು ಬೈಕನ್ನು ಕೈ ಹಿಡಿದು ನಡೆಸುತ್ತಿದ್ದರೆ, ಬೈಕು ಸ್ವಚ್ಛಂದವಾಗಿ ಘಾಟಿಯ ತಿರುವುಗಳಲ್ಲಿ ಪ್ರಯಾಣದ ಸುಖವನ್ನು ಸವಿಯುತ್ತಿತ್ತು. ಮಧ್ಯಾಹ್ನದ ಹೊತ್ತು ಘಾಟಿ ಇಳಿಯುತ್ತಿರುವಾಗ ಬೀಸುತ್ತಿದ್ದ ಹದ ಬಿಸಿ ಗಾಳಿ ಮನಸ್ಸನ್ನು ಇನ್ನಷ್ಟು ಉಲ್ಲಸಿತವನ್ನಾಗಿ ಮಾಡಿತ್ತು, ಸೌತಡ್ಕ ಗೆಣಪನ ಪಾದದ ಸಮೀಪಕ್ಕೆ ತಲುಪುತ್ತಿರುವ ಖುಷಿ ಮನಸ್ಸಿಗೆ. ಅಂದು ಮಧ್ಯಾಹ್ನ ೧.೨೫ಕ್ಕೆ ನಾನು ಮತ್ತು ಬೈಕು ಸೌತಡ್ಕ ಗಣಪನ ಎದುರು ನಿಂತಿದ್ದೆವು ಧನ್ಯತೆಯಲ್ಲಿ!
  ಒಂದಿಷ್ಟು ರೂಪಾಯಿಗಳನ್ನು ದೇವರಿಗೆ ಕಾಣಿಕೆ ಹಾಕಿ, ಒಂದಷ್ಟು ನೋಟುಗಳನ್ನು ಅರ್ಚಕರಿಗೆ ನೀಡಿ (!) ಬೈಕಿಗೆ ಪೂಜೆ ಮಾಡಿಸಿದೆ. ಅರ್ಚಕರು ಬೈಕಿಗೆ ಮೂರು ಸುತ್ತು ಬಂದು ತೆಂಗಿನಕಾಯಿಗೆ ಜಲಪಾತ್ರೆಯ ನೀರನ್ನು ಪ್ರೋಕ್ಷಿಸಿ ನೆಲಕ್ಕೆ ಒಡೆದ ಕಾಯಿಯ ತುಂಡುಗಳು ಮಗುಚಿ ಬಿದ್ದಾಗಲೇ ಮನಸ್ಸಿಗೆ ಸಮಾಧಾನವಾಗಿದ್ದು. ಮತ್ತೆ ವಿಘ್ನ ನಿವಾರಕನಿಗೆ ಕೈ ಮುಗಿದು ಅಲ್ಲಿಂದ ಮನೆ ಕಡೆಗೆ ಹೊರಟೆ.
  ಮನೆಯಲ್ಲಿ ಹೊಸ ಬೈಕನ್ನು ನೋಡಿ ಖುಷಿ ಆಗಿರಲಿಲ್ಲ. ಸುರಕ್ಷಿತವಾಗಿ ತಲುಪಿದ್ದಕ್ಕೆ ತುಂಬಾ ಖುಷಿ ಪಟ್ಟಿದ್ದರು! ಊರಿನ ಏರು ತಗ್ಗಿನ ಮಣ್ಣಿನ ರಸ್ತೆಯಲ್ಲಿ ಆರಂಭದಲ್ಲಿ ನಡೆದಾಡಲು ಬೈಕು ಕಷ್ಟ ಪಟ್ಟರೂ ಆಮೇಲೆ ಸಲೀಸಾಗಿ ನನ್ನನ್ನು ಹೊತ್ತುಕೊಂಡು ಹೋಗಿತ್ತು.  ಎರಡೇ ದಿನಗಳ ಅವಧಿಗೆ ನಾನು ಊರಿಗೆ ಬಂದಿದ್ದೆ. ಮರುದಿನ ಮಾತ್ರ ಬಿಡುವು. ಮಾರನೇ ದಿನ  ಬೆಂಗಳೂರಿಗೆ ಹೊರಡಬೇಕಿತ್ತು. ಮರುದಿನ ಬೆಳಗ್ಗೆಯೇ ನಮ್ಮೂರನ್ನು ಬೈಕಿನಲ್ಲಿ ಸುತ್ತುವುದಕ್ಕೆ ಹೊರಟೆ, ನನ್ನ ಶಾಲೆ, ನಾನು ಓದಿದ ಪದವಿಪೂರ್ವ ಕಾಲೇಜು, ಪುತ್ತೂರಿನ ಡಿಗ್ರಿ ಕಾಲೇಜು... ಹೀಗೆ ನನ್ನ ವಿದ್ಯಾರ್ಥಿ ಜೀವನವನ್ನು ಕಳೆದ ಜಾಗಗಳ ದರ್ಶನವನ್ನು ಬೈಕಿಗೆ ಮಾಡಿಸಿದೆ. ಉಪ್ಪಿನಂಗಡಿಯಲ್ಲಿರುವ ಇತಿಹಾಸ ಪ್ರಸಿದ್ಧ ಸಹಸ್ರಲಿಂಗೇಶ್ವರನಿಗೆ ನಮಸ್ಕರಿಸಲೂ ಮರೆಯಲಿಲ್ಲ.
   ಮೇ ೧೯  ಬೆಳಿಗ್ಗೆ  ೬ಗಂಟೆಗೆ ಮನೆಯಿಂದ ಉದ್ಯಾನ ನಗರಿಗೆ ಹೊರಟೆ. ನನ್ನಲ್ಲಿ ಬರುವಾಗಿದ್ದ ಉತ್ಸಾಹ ಹೋಗುವಾಗ ಇದ್ದಿರಲಿಲ್ಲವೇನೋ ಎಂದು ಈಗ ಅನ್ನಿಸುತ್ತಿದೆ. ಆದರೆ ತೀರಾ ಆಲಸ್ಯ ಸೋಕಿರಲಿಲ್ಲ. ಹುಷಾರಾಗಿ ಹೋಗು, ನಿಧಾನವಾಗಿಯೇ ರೈಡ್‌ ಮಾಡು..ತಲುಪಿದ ಕೂಡಲೇ ಫೋನು ಮಾಡು.. ಕಾಳಜಿ ತೋರುತ್ತಲೇ ಅಪ್ಪ, ಅಮ್ಮ ಸೇರಿದಂತೆ ಮನೆಯವರೆಲ್ಲರೂ ಬೀಳ್ಕೊಟ್ಟರು. ಆಗ ತಾನೆ ಸೂರ್ಯ ಮೂಡಿದ್ದ. ಕೆಂಬಣ್ಣದ ಆಕಾಶ, ಹದವಾಗಿ ಬೀಸುತ್ತಿದ್ದ ತಂಗಾಳಿ ರೈಡಿಂಗ್‌ಗೆ ಹೇಳಿ ಮಾಡಿಸಿದಂತಿತ್ತು. ಮತ್ತೊಮ್ಮೆ ಸೌತಡ್ಕ ಗಣಪನಿಗೆ ಮನಸ್ಸಲ್ಲಿ ನಮಸ್ಕರಿಸಿ ಬೈಕ್‌ ಚಾಲೂ ಮಾಡಿದೆ.
ಗಂಟೆ ಏಳು ಆಗುವಷ್ಟರಲ್ಲಿ ಶಿರಾಡಿ ಘಾಟಿ ಬುಡದಲ್ಲಿದ್ದೆ. ಅಲ್ಲಿಂದ ೩೬ ಕಿ.ಮೀ ಏರು-ತಿರುವು ರಸ್ತೆ; ನಿಧಾನವಾಗಿಯೇ ಹೋಗಬೇಕಿತ್ತು. ಘಾಟಿ ಮಧ್ಯೆ, ಅಲ್ಲಲ್ಲಿ ನಿತ್ತು ಬೆಳಗಿನ ವಾತಾವರಣದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮುನ್ನಡೆದೆ. ೮.೩೫ಕ್ಕೆ ಸಕಲೇಶಪುರ ದಾಟಿ ಬೈಕು ಸಾಗಿತ್ತು. ಅಲ್ಲಿಂದ ೧೫ ಕಿ.ಮೀ ದೂರ. ಪಾಳ್ಯ ಎಂಬ ಪ್ರದೇಶ. ಅಲ್ಲಿ ರಸ್ತೆ ಎಷ್ಟು ನೇರವಾಗಿ/ಚೆನ್ನಾಗಿದೆ ಎಂದರೆ, ನೀವು ಬೀಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರು ಅಥವಾ ಸ್ವತಃ ಬೀಳಲು ಯತ್ನಿಸಿದರೂ ಬೀಳಲು ಸಾಧ್ಯವಿಲ್ಲ! ಅಂಥದ್ದರಲ್ಲಿ ನಾನು ಮತ್ತು ಬೈಕು ಬಿದ್ದೆವು.
ಬಾಗಿದ ಬೈಕಿನ ಎಡ ಕೈ (ಹ್ಯಾಂಡಲ್‌ ಬಾರ್‌)
   ಏನಾಯ್ತೊ ಏನೋ ಸರಿಯಾಗಿಯೇ ಚಲಿಸುತ್ತಿದ್ದ ಬೈಕು ಟಾರು ರಸ್ತೆ ಬಿಟ್ಟು ಪಕ್ಕಕ್ಕೆ ಚಲಿಸಿತು. ಪಕ್ಕದಲ್ಲೇ ಇದ್ದ ಅಂಗಡಿ ಬಳಿಯಲ್ಲಿ ಲಾರಿಯೊಂದು ನಿಂತಿತ್ತು. ಅದಕ್ಕೆ ಡಿಕ್ಕಿ ಹೊಡೆಯುತ್ತದೆ  ಅಂದು ಕೊಂಡು ಜೋರಾಗಿ ಬ್ರೇಕ್‌ ಒತ್ತಿದೆ. ಪರಿಣಾಮ ನನ್ನೊಂದಿಗೆ ಬೈಕ್‌ ಧರೆಗೆ. ನನ್ನ ಎಡ ಭುಜದ ಕೀಲು ಜಾರಿತು. ಬೈಕಿನ ಎಡ ಕೈಯೂ (ಹ್ಯಾಂಡಲ್‌ ಬಾರ್‌) ಬಾಗಿತು. ಐದು ನಿಮಿಷ ಮಿದುಳು ಕಾರ್ಯ ಸ್ಥಗಿತಗೊಳಿಸಿತು. ಏನಾಯ್ತು ಎಂದು ತೋಚಲೇ ಇಲ್ಲ. ಹೇಗಪ್ಪಾ ಬೆಂಗ್ಳೂರಿಗೆ ಹೋಗುವುದು ಅನ್ನುವುದೇ ಚಿಂತೆ, ಅದರ ನಡುವೆ ತಡೆಯಲಸಾಧ್ಯವಾದ ಕೈ ನೋವು ನೆತ್ತಿಗೆ ಏರುತ್ತಿತ್ತು. ಬೈಕಲ್ಲಿ ಬರಲೇ ಬಾರದಿತ್ತು  ಎಂದು ಅಂದುಕೊಂಡೆ. ನಿನ್ನ ದರ್ಶನಕ್ಕೆ ಅಂತ ಬಂದು ಹೀಗಾಗಬಹುದೇ ಎಂದು ಸೌತಡ್ಕ ಗಣಪನನ್ನೇ ಮನಸ್ಸಲ್ಲಿ ಕೇಳಿದೆ...
  ಇನ್ನು ಮಾಡುವುದೇನು?  ಮನೆಗೊಂದು ಫೋನು. ಅವರ ಬಳಿ ಹೇಳುವುದಾದರೂ ಏನು? ದೊಡ್ಡ ಮಟ್ಟಿನ ಏಟಾಗದಿದ್ದರೂ, ಆ ನೋವಿನ ನಡುವೆ ಮನೆಯವರನ್ನು ಕನ್‌ವಿನ್ಸ್‌ ಮಾಡುವುದು ಹೇಗೆ ಅಂದುಕೊಂಡೇ ಮಾಡಿದೆ ಫೋನು. ನಾನೇ ಖುದ್ದಾಗಿ ಮಾತಾಡಿದ್ದರಿಂದ ಅಪ್ಪ ಅಮ್ಮ ಗಾಬರಿ ಬೀಳಲಿಲ್ಲ ಅಷ್ಟೇನು.  ಬಿದ್ದರೂ ತೀವ್ರ ಗಂಭೀರವಾದ ಏಟು ಆಗಿರಲಿಲ್ಲವಲ್ಲಾ.. ಅದೇ ಸಮಾದಾನ.  ಗಣಪತಿಯೇ ಕಾದಿರಬೇಕು  ಎಂದುಕೊಂಡೆ. ಪಕ್ಕದಲ್ಲಿ ನಿಂತಿದ್ದ ಲಾರಿ ಊರಿನದವರಾಗಿತ್ತು. ( ಆ ಲಾರಿ ಇಲ್ಲದಿದ್ದರೆ ನಾನು ಬೀಳುತ್ತಿರಲಿಲ್ಲವೇನೋ?) ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದವರು ಅದೇ ಲಾರಿಯ ಸಿಬ್ಬಂದಿ. ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ. ನನ್ನ ಅದೃಷ್ಟ; ಅಲ್ಲಿ ಎಲುಬು ತಜ್ಞರಿದ್ದರು. ಎಕ್ಸ್‌ರೇ ತೆಗೆದು ಪರೀಕ್ಷಿಸಿ ಜಾರಿದ ಭುಜವನ್ನು ಕೂರಿಸಿ, ಚೀಲವೊಂದರಲ್ಲಿ ಕೈಯನ್ನು ನೇತು ಹಾಕಿ ಬೀಳ್ಕೊಟ್ಟರು. ಆ ದಿನ ಸಂಜೆಯ ಹೊತ್ತಿಗೆ ಬೆಂಗಳೂರು ತಲುಪಬೇಕಿದ್ದ ನಾನು ಮತ್ತು ಬೈಕ್‌ ಪುನಃ ಮನೆಗೆ ತಲುಪಿದ್ದೆವು ಕೈ ಮುರಿದುಕೊಂಡು!
~
ಮುಂದಿನ ೨೧ ದಿನಗಳ ಕಾಲ ನಾನು ಅನುಭವಿಸಿದ್ದು ಯಾತನೆ. ಮೂರು ವಾರಗಳ ಕಾಲ ನಾನು ಅಕ್ಷರಶಃ ಅಂಗವಿಕಲನಾಗಿದ್ದೆ. ಅಂಗವೈಕಲ್ಯತೆ, ಅಂಗವಿಕಲರ ಕಷ್ಟಗಳೇನು ಎಂಬುದು ಅರಿವಿಗೇ ಬಂದಿದ್ದು ಆಗಲೇ. ಪ್ರತಿಯೊಂದು ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕಾಗಿತ್ತು. ಅಮ್ಮ-ಅಪ್ಪ ಹೊರತಾಗಿ ಬೇರೆ ಯಾರನ್ನು ಅವಲಂಬಿಸಲು ಸಾಧ್ಯ. ೨೧ ದಿನಗಳ ಕಾಲ ನನ್ನ ಚಾಕರಿ ಮಾಡಿದವರು ಅವರೇ. ಎಡ ಕೈಗೆ ಏಟಾಗಿದ್ದರಿಂದ ಸ್ನಾನಾದಿಯಾಗಿ ಯಾವುದೇ ಶೌಚ ಕಾರ್ಯವನ್ನು ನಾನೇ ಮಾಡುವಂತಿರಲಿಲ್ಲ. ಅದಕ್ಕೂ ಅವರನ್ನೇ ನೆಚ್ಚಿಕೊಳ್ಳಬೇಕಾಯಿತು. ಅವರ ಪಾಲಿಗೆ ಮತ್ತೆ ನಾನು ಪುಟ್ಟ ಮಗುವಾಗಿದ್ದೆ. ನನ್ನ ಮೇಲೆ ಸಿಟ್ಟು ಬರುತ್ತಿದ್ದರೂ ಇಬ್ಬರೂ ತೋರಿಸುತ್ತಿರಲಿಲ್ಲ, ನೋವು ಆಗುವಾಗುವಾಗ, ರಾತ್ರಿ ನಿದ್ದೆ ಬಾರದೇ ಇದ್ದಾಗ ನಾನು ಅವರ ಮೇಲೆ ತೋರುತ್ತಿದ್ದ ಸಿಟ್ಟನ್ನು ಲೆಕ್ಕಿಸದೇ ನನ್ನನ್ನೇ ಸಮಾಧಾನಿಸಿ ಮಾಡಿದ ಸೇವೆಯನ್ನು ನೆನೆಯುವಾಗ ತಪ್ಪು ಮಾಡಿದೆ ಎಂದೆನಿಸುತ್ತದೆ. ಹೆತ್ತವರು ಎಂದರೆ ಹಾಗಲ್ಲವೇ? ಮಕ್ಕಳು ಕೋಪ ಮಾಡಿದರೂ, ಬೈದರೂ ಕ್ಷಮಿಸುವುದು ಅವರ ದೊಡ್ಡ ಗುಣ.
  ನಾನು ಆರಂಭದಲ್ಲಿ ಆಲೋಪಥಿ ಚಿಕಿತ್ಸೆ ಪಡೆದಿದ್ದರೂ ಆಮೇಲೆ ಮೊರೆ ಹೋಗಿದ್ದು ನಾಟಿ ಚಿಕಿತ್ಸೆಗೆ. ಅದರ ಪ್ರಕಾರ, ನಾಟಿ ಕೋಳಿ ಮೊಟ್ಟೆಯ ಬಿಳಿ ದ್ರವದಲ್ಲಿ  ‘ಮರ್ಮಾಣಿ’  ಮಾತ್ರೆ ಎಂದು ಕರೆಯಲಾಗುವುವ ಆಯುರ್ವೇದದ ಮಾತ್ರೆಯನ್ನು ಅರೆದು ರಾತ್ರಿ ಭುಜಕ್ಕೆ ಹಚ್ಚಬೇಕಿತ್ತು. ಬೆಳಿಗ್ಗೆ ಹಚ್ಚಲಾಗಿದ್ದ ಔಷಧವನ್ನು ತೊಳೆದು ಜಾಗಕ್ಕೆ ಬಿಸಿ  ಶಾಖ ನೀಡಬೇಕಿತ್ತು. ಹೀಗೆ ೨೧ ದಿನಗಳ ಕಾಲ ಮಾಡಬೇಕಿತ್ತು. ಮಾತ್ರೆ ಅಂದೆನಲ್ಲಾ... ಅದು ಕಲ್ಲಿನಷ್ಟೇ ಗಟ್ಟಿ; ಅದನ್ನು ಅರೆಯಬೇಕಿದ್ದರೆ ಸುಮಾರು ಸಮಯ ಹಿಡಿಯುತ್ತಿತ್ತು. ಸಂಜೆ ಹೊತ್ತು ಅದನ್ನು ಅರೆದು ಭುಜಕ್ಕೆ ಹಚ್ಚುವುದು ನನ್ನಮ್ಮನಿಗೆ ಅಷ್ಟು ದಿನಗಳ ಕಾಲ ದೊಡ್ಡ ಕೆಲಸವಾಗಿತ್ತು. ಮರುದಿನ ಬೆಳಿಗ್ಗೆ ಅದನ್ನು ತೊಳೆದು ಬಿಸಿ ನೀರಿನ ಶಾಖ ಕೊಡುವುದು ಅಪ್ಪನ ಪಾಲಿಗೆ ಮೀಸಲಾಗಿದ್ದ ಕೆಲಸವಾಗಿತ್ತು. ನಿರಂತರ ೨೧ ದಿನಗಳ ಆರೈಕೆಯಲ್ಲಿ ನನ್ನ ಕೈ ಸುಧಾರಿಸಿತ್ತು. ಆದರೆ ಅವರಿಬ್ಬರು ಬಡವಾಗಿದ್ದರು. ಮೂರು ವಾರದ ನಂತರ ಚೀಲದಲ್ಲಿ ನೇತು ಹಾಕಿದ್ದ ಕೈಯನ್ನು ಹೊರ ತೆಗೆದಾಗ ಅವರು ಪಟ್ಟ ಆನಂದ ಅಷ್ಟಿಷ್ಟಲ್ಲ. ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟುತ್ತದೆ. ಮುಂದೆಯೂ ಕೂಡ.
~
  ಐವತ್ತು- ಅರುವತ್ತರ ಆಸುಪಾಸಿನಲ್ಲಿರುವ ಅವರ ಆರೈಕೆ ನಾನು ಮಾಡಬೇಕಿತ್ತು. ಆದರೆ ದುರದೃಷ್ಟ ನನ್ನ ಆರೈಕೆಯನ್ನೇ ಅವರು ಮಾಡುವಂತಾಯಿತು. ನಾನು ಬೈಕ್‌ ತೆಗಿಯಲೇ ಬಾರದಿತ್ತು, ಇಲ್ಲಿಗೆ ತರಲೇ ಬಾರದಿತ್ತು ಎಂದು ಆ ೨೧ ದಿನಗಳ ಅವಧಿಯಲ್ಲಿ ಹೇಳಿದಾಗಲೆಲ್ಲಾ.. ಏನೋ ಸಣ್ಣದರಲ್ಲಿ ಆಗಿ ಹೋಯ್ತು, ಒಂದು ವೇಳೆ ಸೊಂಟ ಮುರಿದಿದ್ದರೆ, ತಲೆಗೆ ಏಟಾಗಿದ್ದರೆ ಜೀವಮಾನ ಪೂರ್ತಿ ನರಕ ಯಾತನೆ ಅನುಭವಿಸಬೇಕಾಗಿತ್ತು ಎನ್ನುತ್ತಾ ಸಮಾಧಾನ ಮಾಡಿದ ಅಪ್ಪ-ಅಮ್ಮ ಯಾಕೋ ಮೊನ್ನೆ ಕಾಡ ತೊಡಗಿದರು.
 ಆಫೀಸ್‌ಗೆ ಒಂದು ವಾರ ರಜೆ ಹಾಕಿ ಊರಿಗೆ ಹೋದೆ. ನಾನು ಬೈಕಿಂದ ಬಿದ್ದು ವರ್ಷ ಆಗಿತ್ತು. ಅಮ್ಮನಿಗೆ ನೆನಪಿಸಿದೆ. ಸುಮ್ಮನೆ ನಕ್ಕರು. ಕಳೆದ ವರ್ಷ ನೀನು ಈ ಹೊತ್ತಲ್ಲಿ  ಮದ್ದು ಅರೆಯುತ್ತಿದ್ದೆ ಎಂದು ಒಂದು ಸಂಜೆ ಅಮ್ಮನಿಗೆ ಹೇಳಿದೆ. ಹಳೆಯದನ್ನೆಲ್ಲಾ ಮತ್ತೆ ಮತ್ತೆ ಯಾಕೆ ನೆನಪಿಸುತ್ತೀಯಾ ಎಂದು ಪ್ರೀತಿಯಲ್ಲೇ ಬೈದರು. ಆಗ ನಗುವ ಸರದಿ ನನ್ನದಾಗಿತ್ತು!
ಮರುದಿನ ನನ್ನ ಹೈಸ್ಕೂಲ್‌ಗೆ ಹೋಗಬೇಕಾಗಿತ್ತು. ಅಣ್ಣನ ಬೈಕನ್ನು ಹಿಡಿದು ಹೊರಟೆ. ಊಟ ಮಾಡುತ್ತಿದ್ದ ಅಮ್ಮ, `ಸೂರ್ಯ... ಜಾಗ್ರತೆ ಮಣ್ಣಿನ ರಸ್ತೆ`  ಎಂದರು. ಪಕ್ಕದಲ್ಲೇ ಇದ್ದ ಅತ್ತಿಗೆ, `ಬೆಂಗಳೂರು ಟ್ರಾಫಿಕ್‌ನಲ್ಲಿ ಬೈಕು ಓಡಿಸುವವನಿಗೆ ಇಲ್ಲಿ ಓಡಿಸಲು ಆಗುವುದಿಲ್ಲವೇ` ಎಂದು ಹೇಳಿದರು. ಅಮ್ಮನಿಗೆ ಕಳೆದ ವರ್ಷದ ಘಟನೆಗಳು ನೆನಪಾಗಿರಬೇಕು, ಅತ್ತಿಗೆ ಅಷ್ಟು ಹೇಳಿದ್ದೆ ನನ್ನ ಕಡೆ ನಕ್ಕು ಸುಮ್ಮನಾದರು. ನಾನು ಅಮ್ಮನನ್ನೇ ದಿಟ್ಟಿಸುತ್ತಾ ನಗು ಬೀರಿದೆ. `ಆಯಿತು ಹುಷಾರಾಗಿ ಹೋಗಿ ಬಾ’ ಎಂಬ ಹೆತ್ತ ಕರುಳಿನ ಆಶಯವನ್ನು ಅಮ್ಮನ ಕಣ್ಣಲ್ಲಿ ಆ ಕ್ಷಣ ಕಂಡೆ!
 ~
ಮೊನ್ನೆ `ಪಾ` ಚಿತ್ರ ನೋಡುತ್ತಿದ್ದೆ. ಚಿತ್ರ ನೋಡಿದ ಬಳಿಕ ನನ್ನ ಅಮ್ಮ-ಅಪ್ಪನ ಬಗ್ಗೆ ಯಾಕೋ ಬರೆಯಲೇ ಬೇಕೆನಿಸಿತು.

ಕೊನೆಗೆ: ನಾನು ವರ್ಷಕ್ಕೊಮ್ಮೆ ‘ಅಮ್ಮಂದಿರ/ಅಪ್ಪಂದಿರ’ ದಿನ ಆಚರಿಸುವುದಿಲ್ಲ. ನನ್ನ ಪಾಲಿಗೆ ಪ್ರತಿ ದಿನವೂ ಅಮ್ಮಂದಿರ/ ಅಪ್ಪಂದಿರ ದಿನವೇ.