ಭಾನುವಾರ, ಸೆಪ್ಟೆಂಬರ್ 6, 2009

'ಪ್ರಕೃತಿ'ಯೊಂದಿಗೆ ಬೆರೆತ ಆ ದಿನಗಳು..

ತುಳು ಭಾಷೆಯಲ್ಲಿ ಒಂದು ಗಾದೆಯಿದೆ 'ಅಮಾಸ್ಯೆಗೊರ ಪುಣ್ಣಮೆಗೊರ......' ಅಂದರೆ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ .. ಅಂಥ.
ಆತ್ಮೀಯ ಮಿತ್ರನೊಬ್ಬ ಕೆಲ ದಿನಗಳ ಹಿಂದೆ ಫೋನ್ ಮಾಡಿದ್ದ. 'ಏನು ಮಾರಾಯ ನಿನ್ನ ಬ್ಲಾಗ್ ಅಪ್ಡೇಟ್ ಆಗ್ತಾ ಇಲ್ವಲ್ಲಾ ಅಂತ ಬೈಯ್ಯಲು ಶುರು ಹಚ್ಚಿದ. ಅದಕ್ಕೆ ಕಾರಣವೂ ಇತ್ತು. ಕಳೆದ ಒಂದು ತಿಂಗಳಿನಿಂದ ಹಲವು ಬಾರಿ ನನ್ನ ಬ್ಲಾಗಿಗೆ ಆತ ಇಣುಕಿ ನೋಡಿದ್ದಾನೆ. ಹೊಸ ಬರಹಗಳೇನು ಕಾಣಲಿಲ್ಲ. ಯಾವುದೇ ಬರಹಕ್ಕೆ ಒಂದು ಕಾಮೆಂಟನ್ನೂ ಆತ ಇದುವರೆಗೆ ಬರೆದಿಲ್ಲ. ಆದರೆ ಲೇಖನಗಳನ್ನು ಓದುತ್ತಾನೆ. ದೂರವಾಣಿಯ ಮೂಲಕ ಮುಖತಃ ಕಾಮೆಂಟ್ ನೀಡುತ್ತಾನೆ.
ಭಾರಿ ಉತ್ಸಾಹದಲ್ಲಿ ಬ್ಲಾಗ್ ಆರಂಭಿಸಿದ್ದೆ. ಹಲವು ವೃತ್ತಿ ಸ್ನೇಹಿತರು ಆಗಾಗ ಅಪ್ಡೇಟ್ ಮಾಡುತ್ತಿರಬೇಕು, ರಾಯರ ಕುದುರೆ ಕತ್ತೆ ಆಗಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದರು. ಆರಂಭದಲ್ಲಿ ಅಗಸ ಬಟ್ಟೆ ಎತ್ತಿ ಎತ್ತಿ ಒಗೆದ ಎಂಬ ಗಾದೆ ಮಾತಿನಂತೆ ಪ್ರಾರಂಭದಲ್ಲಿ ವಾರಕ್ಕೊಂದು ಲೇಖನ ಬರೆಯುತ್ತಿದ್ದೆ. ಈಗ ಬರೆಯದೆ ಒಂದು ತಿಂಗಳಾಯಿತು.
ತಿಂಗಳಿಗೊಮ್ಮೆ ಹುಣ್ಣಿಮೆ ಬರುವಾಗ ನಾನು ಬರೆಯದೇ ಇರುವುದಾದರೂ ಹೇಗೆ....

ಎರಡು ವಾರಗಳ ಹಿಂದೆ ಊರಿಗೆ ಹೋಗಿದ್ದೆ. ಮಳೆಗಾಲವನ್ನು ಸವಿಯುವುದಕ್ಕಾಗಿ!. ಕಾಂಕ್ರೀಟ್ ಕಾಡಾದ ಬೆಂಗಳೂರಲ್ಲಿ ನಾಲ್ಕು ಹನಿ ನೀರು ಭೂಮಿಗೆ ಬಿದ್ದರೆ ಭಾರಿ ಮಳೆಯಾದಂತೆ ಭಾಸವಾಗುತ್ತದೆ. ಆಗ ಉಂಟಾಗುವ ಟ್ರಾಫಿಕ್ಜಾಮ್ ಏನು?, ನೀರು ರಸ್ತ್ತೆ ಮೇಲೆ ಹರಿದು ಸೃಷ್ಟಿಸುವ ಅವಾಂತರಗಳೇನು? ಮರ ಮುರಿದು ಬೀಳುವುದೇನು? ಗೋಡೆ ಕುಸಿವುದೇನು? ಕೊನೆಗೆ ಮೋರಿ ನೀರಿನಲ್ಲಿ ನಾಗರಿಕರು ಕೊಚ್ಚಿ ಹೋಗುವುದೇನು? ಹೀಗೆ ಬೆಂಗಳೂರಿನಲ್ಲಿ ಧೋ... ಎಂದು ಸುರಿಯುವ ಮಳೆ ಸಂತಸ ತರುವುದಕ್ಕಿಂತ ಜನರಲ್ಲಿ ಅಸಹನೆಯನ್ನೇ ಉಂಟುಮಾಡುತ್ತಿರುವಾಗ ಹಲವಾರು ಬಾರಿ ಇಲ್ಲಿ ಯಾಕಾದರೋ ಮಳೆ ಬರುತ್ತದೋ ಎಂದು ಯೋಚಿಸಿದ್ದೇನೆ. ಇದೇ ಯೋಚನೆ ಮೊನ್ನೆ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲೂ ಮನಸಿನ ಹಾದಿಯಲ್ಲೊಮ್ಮೆ ನಡೆದಾಡಿತು.

ಬೆಳ್ಳಂಬೆಳಗ್ಗೆ ಬೆಂದಕಾಳೂರಿನಿಂದ ಬಸ್ಸಲ್ಲಿ ಹೊರಟವನಿಗೆ ಮಳೆ ಸ್ವಾಗತಕೋರಿದ್ದು ಶಿರಾಡಿಘಾಟ್ನಲ್ಲಿ, ಹಚ್ಚ ಹಸಿರ ಹಾಸಿನಲ್ಲಿ ಮಳೆಯ ನೃತ್ಯವನ್ನು ನೋಡಿ ಆಸ್ವಾದಿಸುತ್ತಿದ್ದ ನನಗೆ ಗಬ್ಬೆದ್ದು ಹೋಗಿದ್ದ ಶಿರಾಡ್ ಘಾಟ್ ರಸ್ತೆಯಲ್ಲಿ ಬಸ್ಸು ನೃತ್ಯ ಮಾಡುತ್ತಿದ್ದುದು ಗಮನಕ್ಕೇ ಬರಲಿಲ್ಲ!.

ಅಲ್ಲಲ್ಲಿ ಕಾಣುತ್ತಿದ್ದ ಕೃತಕ ಜಲಪಾತಗಳು, ಹರಿಯುವ ತೊರೆಗಳು, ಪಟ್ ಪಟ್ ಎಂದು ಸ್ವರ ಹೊರಡಿಸಿ ಬೀಳುತ್ತಿದ್ದ ಮಳೆ ಹನಿಗಳನ್ನು ಬಸ್ಸಿನ ಕಿಟಕಿ ಗಾಜುಗಳನ್ನು ಸರಿಸಿ ನೋಡುತ್ತಿದ್ದಾಗಲೇ ಎದುರಿನ ಸೀಟಿನಲ್ಲಿದ್ದ ಎಲೆ ಅಡಿಕೆ ಮೆಲ್ಲುತ್ತಿದ್ದ ವೃದ್ಧೆಯೊಬ್ಬರು ಉಗಿದ ಎಲೆ ಅಡಿಕೆ ರಸ ಮಳೆ ನೀರಿನ ಜೊತೆ ಬೆರೆತು ಹೋಯಿತು.
ಮನೆ ತಲುಪವವರೆಗೂ ಮಳೆಯ ಸಿಂಚನ ಮುಂದುವರೆದಿತ್ತು. ಆ ದೃಶ್ಯ ವೈಭವವನ್ನು ಸವಿಯುತ್ತಿರುವಾಗ ಮನಸ್ಸಿನ ಮೂಲೆಯಲ್ಲಿ

.....ಬೆಚ್ಚಗೆ ಕುಳಿತಿದ್ದ ಬಾಲ್ಯದ ನವಿರಾದ ನೆನಪುಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದವು.
ಮಳೆಗಾಲ ಅಂದರೆ ಆದೇನೋ ಖುಷಿ. ಮಳೆಗಾಲ ಆರಂಭವಾದಗಲೇ ಶಾಲೆ ಆರಂಭಗೊಳ್ಳುತ್ತಿದ್ದುದು ನನಗಂತೂ ಖುಷಿ ನೀಡುತ್ತಿತ್ತು.

ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗಿರುತ್ತಿದ್ದ ಮರ ಗಿಡಗಳು ಮಳೆ ಹನಿಯ ಸ್ಪರ್ಶಕ್ಕೆ, ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು. ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಲದಲ್ಲಿ ಹಾವಸೆಯ ಸ್ಪರ್ಶದ ಹಿತವನ್ನು ಅನುಭವಿಸುತ್ತಿದ್ದವು. ಪಕ್ಷಿಗಳು, ಪ್ರಾಣಿಗಳು ಕೂಡ ಮಳೆಗಾಲದ ಸವಿ ಅನುಭವಿಸುವುದನ್ನು ಕಣ್ಣಾರೆ ಕಾಣಬಹುದಿತ್ತು. ಶಾಲೆಯಿಂದ ಮನೆಗೆ ಬರವ ಹೊತ್ತು ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಆಟವಾಡುತ್ತಿದ್ದ ಸಂಭ್ರಮ ಒಂದೆಡೆಯಾದರೆ, ನೆನೆದು ಬಂದಾಗ ವಸ್ತ್ರದಲ್ಲಿ ತಲೆ ಒರಸುತ್ತಿದ್ದ ಸಂದರ್ಭದಲ್ಲಿ ಪ್ರೀತಿಯ ಬೈಗುಳದ ಜೊತೆಗೆ ಅಮ್ಮನ ಬೆಚ್ಚಗಿನ ಅಪ್ಪುಗೆ ಎಂದೆಂದಿಗೂ ಮರೆಯಲಾಗದ್ದು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆಂಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ.

ಆಷಾಢದಲ್ಲಿ ಜಡಿ ಮಳೆ ಸುರಿಯುತ್ತಿದ್ದರೆ ಇತ್ತ ಮನೆಯೊಳಗೆ ಮಕ್ಕಳಿಗೆ(ನನಗಂತು) ಸಂಭ್ರಮ. ಕಪ್ಪಿಟ್ಟ ವಾತಾವರಣದಲ್ಲಿ ಮನೆಯೊಳಗೆ ಎಣ್ಣೆ ಕಜ್ಜಾಯದ ಪರಿಮಳ ಮೂಗಿಗೆ ಬಡಿಯುತ್ತಿತ್ತು. ಮಳೆಗಾಲಕ್ಕೂ ಹಲಸಿನ ಹಣ್ಣಿಗೂ ಎಲ್ಲಿಲ್ಲದ ನಂಟು ಮಳೆ. ಆರಂಭಗೊಳ್ಳುವುದಕ್ಕೆ ಮುನ್ನ ಹಲಸಿನ ಕಾಯಿಯಿಂದ ತಯಾರಿಸಿದ ಆಹಾರ ಉತ್ಪನ್ನಗಳು (ಈ ಬಗ್ಗೆ ಹಲವು ಲೇಖನಗಳು ಭಾಗಶಃ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ) ಮಳೆಗಾಲದಲ್ಲಿ ನಮ್ಮ ನಾಲಗೆಗೆ ರುಚಿ ಹತ್ತಿಸುತ್ತಿದ್ದವು. ಮಳೆಗಾಲದಲ್ಲಿ ಮಾತ್ರ ಹಲಸಿನ ಹಣ್ಣು ದೊರೆಯುತ್ತಿದ್ದರಿಂದ ಹಣ್ಣಿನಿಂದ ತಾಯಾರಿಸಿದ ತಿಂಡಿ ಕೂಡ ಮಳೆಗಾಲಕ್ಕೆ ಮಾತ್ರ ಮೀಸಲು. ಮತ್ತೆ ಅದರ ಸವಿ ಆಸ್ವಾದಿಸಲು ಮುಂದಿನ ವರ್ಷಗಾಲ ಬರಬೇಕು.....
ಇನ್ನೆಲ್ಲಿ ಆ ಬಾಲ್ಯ....ಇನ್ನೆಲ್ಲಿ ಆ ಸಂತಸ, ಆ ಉಲ್ಲಾಸ ಉತ್ಸಾಹ....

ಜೋರಾಗಿ ಬೀಸಿದ ಗಾಳಿಗೆ ಬಸ್ಸಿನ ಕಿಟಕಿಯ ಮೂಲಕ ಒಳಬಂದ ನೀರು ನನ್ನ ಮುಖದ ಮೇಲೆ ಬಿದ್ದು, ನೆನಪುಗಳ ನೃತ್ಯವನ್ನು ನಿಲ್ಲಿಸಿದವು. ಮಂದಹಾಸದಿಂದ ಕಣ್ಣೆತ್ತಿ ನೋಡಿದರೆ ನನ್ನೂರಲ್ಲಿ ನೀರು ನಿಂತ ನಿಲ್ದಾಣದಲ್ಲಿ ಬಸ್ ನಿಂತಿತ್ತು.
ಹ್ಞಾಂ.. ಈ ಲೇಖನ ಬರೆಯುವ ಹೊತ್ತಿಗೆ ಮಳೆಗಾಲ ಮುಗಿಯುತ್ತೆ ಅಂಥ ನನ್ನ ಗೆಳೆಯ ಚುಚ್ಚಿದ್ದ. ಆದರೆ ದೇವರು ದೊಡ್ಡವನು... ಮತ್ತೆ ಧೋ ಎಂದು ಮಳೆರಾಯ ಅರ್ಭಟಿಸುತ್ತಿದ್ದಾನೆ..
ಕೊನೆ ಮಾತು: ಉದ್ಯಾನನಗರಿಯಲ್ಲಿ ಜೀನ್ಸ್, ಟೀ-ಶರ್ಟ್, ಕೃತಕತೆಯನ್ನು ಕಂಡು ಕಂಡು ಕೆಂಪಾಗಿದ್ದ ನನ್ನ ಕಣ್ಣುಗಳು ಆ ಎರಡು ದಿನಗಳಲ್ಲಿ ಪ್ರಾಕೃತಿಕ ಸಹಜ ಸೌಂದರ್ಯವನ್ನು ಕಂಡು ತಂಪಾಗಿದ್ದವು!....

4 ಕಾಮೆಂಟ್‌ಗಳು:

vidya s ಹೇಳಿದರು...

supper......ati sheegradalli innondu lekhanada nireeksheyalli...............

jomon varghese ಹೇಳಿದರು...

ಕೊನೆಯ ಮಾತು ಸತ್ಯವಾಗಿದೆ.. ಮತ್ತೆ ಮತ್ತೆ ಮಳೆ ನೆಪದಲ್ಲಿ ಈ ಕಾರಣಕ್ಕಾದರೂ ಊರಿಗೆ ಹೋಗುವಂತಾಗಲಿ.. ಲೇಖನ ಚೆನ್ನಾಗಿದೆ.

ಸೂರ್ಯ ವಜ್ರಾಂಗಿ ಹೇಳಿದರು...

@ ವಿದ್ಯಾ
ಧನ್ಯವಾದಗಳು...ನಿಮ್ಮ ಪ್ರತಿಕ್ರಿಯೆಗೆ...

@ ಜೋಮನ್‌
ಸ್ವಾಗತ ನನ್ನ ಮಾತಿಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆ ಬಂದು ಹೋಗುತ್ತಿರಿ....

nagu ಹೇಳಿದರು...

ಲೇಖನದ ಶೈಲಿ ತುಂಬಾ ಚೆನ್ನಾಗಿದೆ.