ಶನಿವಾರ, ಅಕ್ಟೋಬರ್ 10, 2009

ಹೀಗೊಂದು ಗೆಳೆಯನ ಮಿಂಚಂಚೆ....

ತ್ಮೀಯ ಗೆಳೆಯನೊಬ್ಬ ಮಿಂಚಂಚೆ ಕಳುಹಿಸಿದ್ದ. ಚಿತ್ರ ನೋಡಿ ಅಶ್ಲೀಲ ವಾಗಿದೆಯಲ್ಲಾ ಅಂದುಕೊಂಡೆ. ಸಂಪೂರ್ಣ ಓದಿದಾಗ ಅಂತ ಭಾವನೆ ಬರಲಿಲ್ಲ. ಜಾಗೃತಿ ಮೂಡಿಸುವ ಲೇಖನ ಅಂದುಕೊಂಡೆ. ಪ್ರಸ್ತುತ ಸನ್ನಿವೇಶದಲ್ಲಿ ಅರ್ಥಗರ್ಭಿತ ಲೇಖನ ಎಂದು ನನಗನ್ನಿಸಿತು. ಇದರ ಮೂಲ ಕರ್ತೃ ಯಾರೆಂದು ಗೆಳೆಯನಲ್ಲಿ ವಿಚಾರಿಸಿದೆ. ಅವನಿಗೂ ಮಾಹಿತಿಇಲ್ಲ. ಯಾರಾದರೂ ಬರೆಯಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಈ ಲೇಖನವನ್ನು ಇಲ್ಲಿ ಪ್ರಕಟಿಸಿದ್ದೇನೆ. ನೀವೂ ಓದಿ...


ಹರೆಯದ ಕೊರಳಿಗೆ 'MMS' ಪಾಶ


ಮಾಯಾ ಹದಿಹರೆಯದ, ಕನಸು ಕಂಗಳ ಹುಡುಗಿ. ಗೆಳೆಯ ರಾಕೇಶ್ ಆಕೆಯ ಪಾಲಿಗೆ ಎಲ್ಲವೂ ಹೌದು. ಅರಳುಗಣ್ಣಿನ ಆ ಪೋರಿಯ ಕನಸುಗಳೆಲ್ಲಾ ಮೂರ್ತರೂಪ ಧರಿಸಿ ಬಂದಂತೆ ರಾಕೇಶ್ ಆಕೆಯ ಬದುಕನ್ನು ಪ್ರವೇಶಿಸಿದ್ದ. ತನ್ನ ಪ್ರೀತಿಯ ಇನಿಯನಿಗೋಸ್ಕರ ಏನು ಮಾಡಲೂ ಮಾಯಾ ತಯಾರಿದ್ದಳು. ಹೆತ್ತ ಅಪ್ಪ-ಅಮ್ಮನಿಗೇ ಸುಳ್ಳು ಹೇಳಲು ಹಿಂಜರಿಯಲಿಲ್ಲ, ಅವರನ್ನು ಎದುರು ಹಾಕಿಕೊಳ್ಳಲೂ ಹೆದರಲಿಲ್ಲ. ಆದರೆ ವಾಸ್ತವ ಬದುಕು ಕನಸಿನಂತಲ್ಲ ತಾನೇ? ತನ್ನ ಕನಸುಗಳಲ್ಲಿಯೇ ತೇಲಿ ಹೋಗಿದ್ದ ಆ ಮುಗ್ಧ ಹುಡುಗಿಯ ಎದುರು ವಾಸ್ತವದ ಕರಾಳತೆ ಧುತ್ತನೇ ವಿಶ್ವರೂಪ ಧರಿಸಿ ನಿಂತುಬಿಟ್ಟರೆ ಅದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ, ಹೆತ್ತವರಿಗಿಂತ ಹೆಚ್ಚು ನಂಬಿದ ತನ್ನ ಗೆಳೆಯನ ಇನ್ನೊಂದು ಮುಖ ನೋಡುವ ಹೊತ್ತಿಗೆ ಎಲ್ಲವೂ ಕೈ ಮೀರಿತ್ತು. ತಾನು ಪ್ರಿಯಕರನೊಂದಿಗೆ ಕಳೆದ ಆತ್ಮೀಯ, ಖಾಸಗಿ ಕ್ಷಣಗಳು ಮೊಬೈಲ್ ಫೋನ್ ಕ್ಯಾಮರಾಗಳಲ್ಲಿ ದಾಖಲಾಗಿದೆ ಎಂಬುದನ್ನು ಆ ಹುಡುಗಿ ಹೇಗೆ ತಾನೆ ಊಹಿಸಿಯಾಳು? ಪ್ರೀತಿಯ ಭ್ರಮೆಯ ಗುಳ್ಳೆ ಒಡೆಯಿತು. ರಾತ್ರಿ ಬೆಳಗಾಗುವುದರಲ್ಲಿ ಇನಿಯ ರಕ್ಕಸನಾಗಿ ಬದಲಾಗಿದ್ದ. ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದ ದೃಶ್ಯಗಳೇ ಸಾಕಾಗಿತ್ತು ಆತನಿಗೆ ಮಾಯಾಳನ್ನು ಹುರಿದು ಮುಕ್ಕಲು. ತನ್ನ ದುಷ್ಟ ಸ್ನೇಹಿತರ ದೈಹಿಕ ಆಸೆಯನ್ನು ತೀರಿಸದಿದ್ದರೆ ಎಂಎಂಎಸ್ ತುಣುಕು ಜಗಜ್ಜಾಹೀರಾಗುವುದು ಖಚಿತ ಎಂದು ರಾಕೇಶ್ ಬೆದರಿಸತೊಡಗಿದ. ತಾನು ಬಿದ್ದಿರುವ ಪ್ರಪಾತದ ಆಳ-ಅಗಲ ಅರ್ಥವಾಗುವುದರೊಳಗೆ ಮಾಯಾಳ ಮಾನ ಮಾರುಕಟ್ಟೆಯಲ್ಲಿ ಹರಾಜಾಗಿತ್ತು.

ಮಾಯಾಳಂತಹ ಮುಗ್ಧ ಬಾಲಕಿಯರ ದುರಂತಗಾಥೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಳ್ಳಿ ಇರಲಿ, ಪಟ್ಟಣಗಳಿರಲಿ ಕೇಳಿ ಬರುತ್ತಿರುವ ಕಥೆ ಮಾತ್ರ ಒಂದೇ. ದೆಹಲಿ, ಮುಂಬೈ, ಅಹಮದಾಬಾದ್, ಕಟಕ್ ಹಾಗೂ ಆಲಪುಳ ನಗರಗಳು ಈಗಾಗಲೇ ಈ ರೀತಿಯ ಹಲವು ನಿದರ್ಶನಗಳಿಗೆ ಸಾಕ್ಷಿಯಾಗಿವೆ. ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಹದಿಹರೆಯದವರ ಮುಕ್ತ ಮನೋಭಾವವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನರರೂಪದ ರಾಕ್ಷಸರು 'ಕನಸಿನ ಲೋಕದ ರಾಜಕುಮಾರರ' ರೂಪದಲ್ಲಿ ಮುಗ್ಧ ಹುಡುಗಿಯರ ಬೇಟೆಯಲ್ಲಿ ತೊಡಗಿದ್ದಾರೆ. ಲೈಂಗಿಕ ದೌರ್ಜನ್ಯ, ಬೆದರಿಕೆ ಕಥನಗಳು ಅಡೆ-ತಡೆ ಇಲ್ಲದೇ ಸಾಗುತ್ತಿವೆ.

ಆಧುನಿಕತೆಯ ವೈಭೋಗ

ದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುತ್ತಿರುವ ಭಾರತ ಹದಿಹರೆಯದವರ ಪಾಲಿಗೆ, ಅವರೊಳಗಿನ ಸ್ವೇಚ್ಛಾಚಾರಿ ಮನೋಭಾವದ ಅಭಿವ್ಯಕ್ತಿಗೆ ಫಲವತ್ತಾದ ರಾಷ್ಟ್ರ. ವಿರುದ್ಧ ಲಿಂಗಿಗಳೊಂದಿಗಿನ ಒಡನಾಟಕ್ಕೆ ಈಗ ಯಾವ ಅಡೆ-ತಡೆಯೂ ಇಲ್ಲ. ತಮ್ಮೊಳಗಿನ ಆಸೆ, ಆಕಾಂಕ್ಷೆಗಳ ಅಭಿವ್ಯಕ್ತಿಗೆ ಸಂಪ್ರದಾಯಗಳ ಹಂಗಿಲ್ಲ. ಬದುಕನ್ನು ಅದರ ಸಮಗ್ರತೆಯಲ್ಲಿ ಸವಿಯುವ ಉತ್ಸಾಹಕ್ಕೆ ಲಂಗು-ಲಗಾಮಿಲ್ಲ. ಯೌವನದ ಈ ತಹತಹಿಕೆಯ ಬೆನ್ನಿಗೇ ಕಹಿ ಅನುಭವಗಳ ಸರಮಾಲೆಯೂ ಇದೆ. ಅವು ಈಗ ವಿಭಿನ್ನ ರೂಪಗಳಲ್ಲಿ ಪ್ರಕಟಗೊಂಡು ನಾಗರಿಕ ಸಮಾಜದ ನಿದ್ದೆಗೆಡಿಸುತ್ತಿವೆ. ಹೀಗೆ ಯೌವನದ ರಭಸಕ್ಕೆ ಸಿಲುಕಿ ದುರಂತ ಅಂತ್ಯ ಕಂಡ ಮುಗ್ಧ ಬದುಕುಗಳಲ್ಲಿ ಕಟಕ್‌ನ ಅಸೀಮಾ ಮೊಹಾಂತಿ ಕೂಡ ಒಬ್ಬಳು.

ಅಸೀಮಾ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಆಕೆಯ ನಂಬಿಕೆದ್ರೋಹಿ ಪ್ರಿಯಕರ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯಗಳನ್ನು ಹಣಕ್ಕೋಸ್ಕರ ಮಾರಾಟ ಮಾಡುವುದರೊಂದಿಗೆ ಅಸೀಮಾಳ ದುರಂತ ಅಂತ್ಯದ ಪ್ರಥಮ ಅಧ್ಯಾಯ ಪ್ರಾರಂಭವಾಗುತ್ತದೆ. ತನ್ನ ಗೆಳೆಯನ ಮೇಲಿಟ್ಟಿದ್ದ ಅಪರಿಮಿತ ನಂಬಿಕೆಯೇ ಅಸೀಮಾಳ ಬದುಕಿಗೆ ಎರವಾಯಿತು. ತಾನು ಆರಾಧಿಸಿದ ವ್ಯಕ್ತಿ ಒಬ್ಬ 'ತಲೆ ಹಿಡುಕ' ಎಂಬ ಸಂಗತಿ ಅವಳಿಗೆ ತಿಳಿದೇ ಇರಲಿಲ್ಲ. ಆತನ ಕಸುಬೇ ಅಂಥದ್ದು. ಹೆಣ್ಣಿನ ಮನಸ್ಸು ಗೆಲ್ಲುವುದು, ದೈಹಿಕವಾಗಿ ಬಳಸಿಕೊಳ್ಳುವುದು, ಸಾಧ್ಯವಾದರೆ ಆ ಎಲ್ಲವನ್ನೂ ಚಿತ್ರೀಕರಿಸಿ ಸಿ.ಡಿ. ರೂಪದಲ್ಲಿ ಮಾರಾಟ ಮಾಡುವುದು ಆತನಿಗೆ ಕರತಲಾಮಲಕ. ದೈಹಿಕ ಅವಮಾನದ ಜೊತೆಗೆ ಮಾನಸಿಕ ಹಿಂಸೆಯನ್ನೂ ಅನುಭವಿಸಲು ಸಿದ್ಧಳಿಲ್ಲದ ಅಸೀಮಾ ಆತ್ಮಹತ್ಯೆಗೆ ಶರಣಾದಳು. ಸಮಾಜದ ಕಣ್ಣಲ್ಲಿ ಹೇಸಿಗೆಯಾಗಿ ಬದುಕುವುದಕ್ಕಿಂತ ಸಾವೇ ಅಸೀಮಾಳಿಗೆ ಆಕರ್ಷಕವಾಗಿ ಕಂಡಿರಬೇಕು.

ಅಸೀಮಾಳ ಪ್ರಕರಣದಿಂದ ಇಡೀ ಒರಿಸ್ಸಾ ರಾಜ್ಯವೇ ತಲ್ಲಣಗೊಂಡಿತ್ತು. ಅಸೀಮಾಳ ಅಪ್ಪ ನೀಡಿದ ದೂರಿನ ಅನ್ವಯ ಕಟಕ್ ನಗರದ ಪೊಲೀಸರು ಅಸೀಮಾಳ ಸ್ನೇಹಿತ ಅಸ್ತಾರಂಗ್ ಸಾಹು ಅಲಿಯಾಸ್ ಪಿಣುವ ಹಾಗೂ ಆತನ ಜೊತೆಗಾರ ಸುಬ್ರತ್ ಪ್ರಧಾನ್ ಅಲಿಯಾಸ್ ಬಾಪಿ ಇಬ್ಬರನ್ನೂ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟ ಪ್ರಕರಣದ ಅಡಿಯಲ್ಲಿ ಬಂಧಿಸಿ, ತನಿಖೆಗೊಳಪಡಿಸಿದರು. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಐದು ಮಂದಿ ಈಗ ತಲೆಮರೆಸಿಕೊಂಡಿದ್ದಾರೆ. ಪಿಣುವ ಹಾಗೂ ಆತನ ಸಹಚರರು ಕೋಣೆಯಲ್ಲಿ ಕ್ಯಾiರಾಗಳನ್ನು ಅಡಗಿಸಿಟ್ಟು ಅಸೀಮಾಳಿಗೆ ತಿಳಿಯದಂತೆ ಅಲ್ಲಿ ನಡೆಯುವ ರಾಸಲೀಲೆಗಳನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.

ನಮ್ಮಲ್ಲಿ ಬೇರು ಬಿಡುತ್ತಿರುವ ಈ ಎಂಎಂಎಸ್ ಸಂಸ್ಕೃತಿ ಮೊಟ್ಟ ಮೊದಲು ಬೆಳಕಿಗೆ ಬಂದದ್ದು ದೆಹಲಿ ಪಬ್ಲಿಕ್ ಸ್ಕೂಲ್ ಪ್ರಕರಣವೊಂದರಲ್ಲಿ. ಅಂದಿನಿಂದ ಇಂದಿನವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಫೋನ್‌ಗಳು, ಇಂಟರ್‌ನೆಟ್‌ಗಳ ಮೂಲಕ ಈ ಪಿಡುಗು ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿದೆ. ಇದಕ್ಕೆ ಯಾರನ್ನು ಹೊಣೆಯಾಗಿಸುವುದು? ಬಹುತೇಕ ಪೋಷಕರು ಹಾಗೂ ಆಪ್ತ ಸಮಾಲೋಚಕರು ಹೇಳುವಂತೆ ಇಂಥ ಸೂಕ್ಷ್ಮ ವಿಚಾರಗಳಲ್ಲಿ ಹುಡುಗಿಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. "ಇಂದಿನ ಯುವ ಸಮುದಾಯದಲ್ಲಿ ಈ ಎಂಎಂಎಸ್ ಸಂಸ್ಕೃತಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಬಗೆಯ ಗೋಮುಖ ವ್ಯಾಘ್ರಗಳು ಎಲ್ಲಡೆಯೂ ಇವೆ. ಆದ್ದರಿಂದ ಒಬ್ಬ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸುವ ಮೊದಲು ಹುಡುಗಿಯರು ಸಾಕಷ್ಟು ಎಚ್ಚರಿಕೆ ವಹಿಸಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅಹಮದಾಬಾದ್ ಮೂಲದ ಮನಶ್ಯಾಸ್ತ್ರಜ್ಞ ಡಾ. ಹನ್ಸಾಲ್ ಭಚೇಚ್.

"ಇಂದಿನ ಯುವ ಜನಾಂಗದಲ್ಲಿ ಲೈಂಗಿಕತೆಯ ಕುರಿತ ಮಡಿವಂತಿಕೆ ಕಡಿಮೆಯಾಗುತ್ತಿದೆ. ದುರಂತವೆಂದರೆ, ಹುಡುಗಿಯರೇ ಈ ಪ್ರವೃತ್ತಿಯ ಮೊದಲ ಬಲಿಪಶುಗಳು" ಎನ್ನುತ್ತಾರೆ ಒರಿಸ್ಸಾದ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲ ಪ್ರೊ. ರಬೀಂದ್ರ ಕುಮಾರ್.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? "ಒಬ್ಬ ಪೋಷಕನಾಗಿ ನಾನು ಹೇಳುವುದೆಂದರೆ, ಅಂತಹ ಅವಘಡಗಳಿಗೆ ಹುಡುಗಿಯೇ ಹೊಣೆ. ಈ ಆಧುನಿಕ ಸಮಾಜದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಎಲ್ಲಾ ಹಕ್ಕು ಹುಡುಗಿಯರಿಗಿದೆ. ಆದರೆ, ಪ್ರೀತಿಯ ನೆಪದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೈಹಿಕ ಸಂಬಂಧವಿಟ್ಟುಕೊಳ್ಳುವುದು ಆರೋಗ್ಯಕರ ಪ್ರವೃತ್ತಿಯಲ್ಲ. ಅಂತಹ ಬೇಜವಾಬ್ದಾರಿ ನಡವಳಿಕೆ ಇಡೀ ಬದುಕನ್ನೇ ನಾಶಗೊಳಿಸಬಹುದು" ಎಂದು ಕಿವಿಮಾತು ಹೇಳುತ್ತಾರೆ ರಬೀಂದ್ರ ಕುಮಾರ್.

ಆದರೆ ಈ ಮೇಲಿನ ಮಾತುಗಳಿಗೆ ನಮ್ರತಾ (ಹೆಸರು ಬದಲಾಯಿಸಲಾಗಿದೆ) ಪ್ರಕರಣ ವ್ಯತಿರಿಕ್ತವಾಗಿದೆ. ಗುಜರಾತ್‌ನ ಮೆಹಸಾನ ಜಿಲ್ಲೆಯ ಈ ಹುಡುಗಿ ವಿಷ್ಣು ಚೌಧುರಿ ಎಂಬ ಯುವಕನ ಮೋಹಪಾಶಕ್ಕೆ ಸಿಲುಕಿದಳು. ಒಮ್ಮೆ ಆಕೆಯನ್ನು ಹೊಟೇಲ್ ರೂಮಿಗೆ ಕರೆದೊಯ್ದ ವಿಷ್ಣು ಆಕೆಯ ಮೇಲೆ ಬಲಾತ್ಕಾರವೆಸಗಿದ. ತನ್ನ ಹೀನ ಕೃತ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿದು ನಮ್ರತಾಳನ್ನು ಬ್ಲ್ಯಾಕ್‌ಮೇಲ್ ಮಾಡತೊಡಗಿದ. ತೀವ್ರ ಆಘಾತಕ್ಕೊಳಗಾದ ನಮ್ರತಾ ಈ ಕುರಿತು ಪೊಲೀಸರಿಗೆ ದೂರು ನೀಡಿದಳು. ಇದರಿಂದ ಕೆರಳಿದ ವಿಷ್ಣು ಆ ಎಂಎಂಎಸ್ ತುಣುಕುಗಳನ್ನು ಬಹಿರಂಗಗೊಳಿಸಿ ಸೇಡು ತೀರಿಸಿಕೊಂಡ.

ನಮ್ಮಲ್ಲಿರುವ ಕೌಟುಂಬಿಕ ಹಾಗೂ ಸಮಾಜಿಕ ಸಂದರ್ಭಗಳು ಹೇಗಿವೆ ಎಂದರೆ ಬೆಳವಣಿಗೆಯ ಹಂತದಲ್ಲಿರುವ ಹೆಣ್ಣು ಮಗಳು ತಾವು ಪ್ರೀತಿಸುವ ವ್ಯಕ್ತಿಯನ್ನು ಪೂರ್ವಾಪರ ಯೋಚಿಸದೇ ನಂಬಿ ಬಿಡುವುದೇ ಜಾಸ್ತಿ. ಆ ನಂಬಿಕೆ ಎಷ್ಟರ ಮಟ್ಟಿಗಿರುತ್ತದೆ ಎಂದರೆ ತನ್ನ ಇನಿಯನ ಎಲ್ಲಾ ಬೇಡಿಕೆಗಳಿಗೂ ಈ ಮುಗ್ಧ ಮನಸ್ಸಿನ ಹುಡುಗಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಗೆ ನೀಡುತ್ತಾರೆ. ಅದು ಒಂದು ಹಂತದವರೆಗೆ ಆ ಹುಡುಗಿಯರಲ್ಲಿ ಸ್ವತಂತ್ರ ಭಾವನೆಯನ್ನು ಮೂಡಿಸುವುದು ನಿಜವಾದರೂ ಬಹಳಷ್ಟು ಸಂದರ್ಭಗಳಲ್ಲಿ ಈ ಹುಡುಗಿಯರು ತಮ್ಮ ಪ್ರಿಯಕರನ ಕಾಮ ಪಿಪಾಸುತನಕ್ಕೆ ಬಲಿಯಾಗುವುದೇ ಜಾಸ್ತಿ.

ಮುಂಬೈ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಪ್ರಕರಣ ಇದಕ್ಕೆ ಉತ್ತಮ ಉದಾಹರಣೆ. ಭಾಯಂದರ್‌ನ ಈ ಹುಡುಗಿ ರಿತೇಶ್ ಪಾಟೀಲ್ ಎಂಬ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿದ ಪರಾಗ್ ಮಾತ್ರೆ ಎಂಬ 'ನಾಜೂಕಯ್ಯ'ನ ಮೋಹಪಾಶಕ್ಕೆ ಸಿಲುಕಿದಾಗ ಮುಂದೇನಾಗುವುದು ಎಂಬುದರ ಪರಿವೆಯೇ ಇರಲಿಲ್ಲ.

ಪ್ರೀತಿ ಮಾಡಿದ ಅಪರಾಧಕ್ಕಾಗಿ ಆಕೆ ಮೊದಲು ತನ್ನ ಪ್ರಿಯಕರನ ಕಾಮದಾಹಕ್ಕೆ ಬಲಿಯಾಗಿದ್ದು ಸಾಲದೆಂಬಂತೆ ಆತನ ಸ್ನೇಹಿತರಿಂದಲೂ ಅತ್ಯಾಚಾರಕ್ಕೊಳಗಾಗಬೇಕಾಯಿತು. ಈ ಕರ್ಮಕಾಂಡವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ ಪರಾಗ್ ಈ ವಿಚಾರವನ್ನು ಎಲ್ಲಿಯಾದರೂ ಬಾಯಿ ಬಿಟ್ಟರೆ ಎಂಎಂಎಸ್‌ನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದ. ಕ್ರಮೇಣ ಆ ಎಂಎಂಎಸ್ ಪರಾಗ್‌ನ ಸಹೋದರ ಪಂಕಜ್ ಮೊಬೈಲ್‌ಗೆ ರವಾನೆಯಾಯಿತು. ಈಗ ಆ ಹುಡುಗಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಪಾಳಿ ಪಂಕಜ್‌ನದ್ದು.

ಆಕೆಯನ್ನು ಅದೇ ಹೊಟೇಲ್‌ಗೆ ಬರಹೇಳಲಾಯಿತು. ಎಲ್ಲಿ ಎಂಎಂಎಸ್‌ಗಳು ಬಹಿರಂಗಗೊಂಡು ತನ್ನ ಮಾನ ಹರಾಜಾಗುತ್ತದೋ ಎಂದು ಹೆದರುತ್ತಾ ಅಲ್ಲಿಗೆ ಹೋದ ಹುಡುಗಿ ಮತ್ತೊಮ್ಮೆ ಪಂಕಜ್ ಹಾಗೂ ಆತನ ಸ್ನೇಹಿತರ ಕಾಮದಾಹಕ್ಕೆ ಬಳಕೆಯಾಗಬೇಕಾಯಿತು. ಹೀಗೆ ಸರಣಿ ಅತ್ಯಾಚಾರಗಳಿಂದ ಮಾನಸಿಕವಾಗಿ ಕುಗ್ಗಿ ಹೋದ ಹುಡುಗಿ ಅಂತಿಮವಾಗಿ ಕುಟುಂಬದವರಲ್ಲಿ ತನ್ನ ಅಳಲು ತೋಡಿಕೊಂಡಳು. ಈ ಪ್ರಕರಣ ಮಿರಾ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಖ್ಯಾತ ಲೈಂಗಿಕ ವಿಜ್ಞಾನಿ (ಸೆಕ್ಸಾಲಜಿಸ್ಟ್) ಡಾ. ಪರಸ್ ಶಾ ಪ್ರಕಾರ ಇಂದು ಹುಡುಗಿಯರು ತುಂಬಾ ಸುಲಭವಾಗಿ ಕಾಮಪಿಪಾಸುಗಳ ಬಲೆಗೆ ಬೀಳುತ್ತಾರೆ. "ಎಂಎಂಎಸ್ ಸೌಲಭ್ಯವನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಹೇಗೆ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ನಿದರ್ಶನ. ಇಂತಹ ಕೃತ್ಯಗಳಿಗೆ ಕೈಹಾಕುವ ಹುಡುಗರಿಗೆ ಹಣ ಸಂಪಾದನೆಯೊಂದೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಪರಸ್ಪರ ಒಪ್ಪಿಗೆಯಿಂದಲೂ ಇದು ನಡೆಯುತ್ತದೆ. ಹುಡುಗಿಯರು ತಮ್ಮ ಗೆಳೆಯನ ಮೇಲೆ ಕುರುಡು ನಂಬಿಕೆ ಇಟ್ಟಾಗ ಇವೆಲ್ಲಾ ಘಟಿಸುತ್ತವೆ" ಎನ್ನುತ್ತಾರೆ ಡಾ. ಪರಸ್ ಶಾ.

ಎಂಎಂಎಸ್ ಬಲಿಪಶು ಅಸೀಮಾ ಮೊಹಾಂತಿ ಆತ್ಮಹತ್ಯೆ ಮಾಡಿಕೊಂಡ ನಂತರ ಅದೇ ರೀತಿಯ ಮತ್ತೊಂದು ಪ್ರಕರಣ ಕಟಕ್ ಜಿಲ್ಲೆಯಲ್ಲಿ ೨೦೦೮ ಅಕ್ಟೋಬರ್ ೧೫ರಂದು ಬೆಳಕಿಗೆ ಬಂದಿತ್ತು. ನಿಯಾಲಿ ಗ್ರಾಮದ ಅಮಿನಾ (ಹೆಸರು ಬದಲಿಸಲಾಗಿದೆ) ಕಲಪಾಂಚಣ ಗ್ರಾಮದ ಶೇಖ್ ಅಬ್ದುಲ್ ಎಂಬ ವ್ಯಕ್ತಿಯೊಬ್ಬನನ್ನು ಪ್ರೀತಿಸಿದ್ದಳು. ಎಲ್ಲಾ ತಲೆಮಾಸಿದ ಹುಡುಗರಂತೆ ಶೇಖ್ ಅಬ್ದಲ್ಲಾ ಕೂಡ ತಮ್ಮಿಬ್ಬರ ನಡುವಿನ ರಾಸಲೀಲೆಗಳನ್ನು ಸಿ.ಡಿ ಮಾಡಿ 'ಓiಚಿಟiಘಿಘಿಘಿ' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ. ಅಸೀಮಾಳಂತೆ ದುಡುಕಿನ ನಿರ್ಧಾರ ಕೈಗೊಳ್ಳದ ಅಮೀನ ಮುಂದಿನ ಪರಿಣಾಮಗಳನ್ನು ಧೈರ್ಯದಿಂದ ಎದುರಿಸಿದಳು. ಆದರೆ ಆ ಧೈರ್ಯ ಎಷ್ಟು ಜನರಿಗಿದ್ದೀತು?

ಈ ವರ್ಷದ ಪ್ರಾರಂಭದಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಾಗರಿಕರಲ್ಲಿ ಆತಂಕದ ಅಲೆ ಸೃಷ್ಟಿಸಿತ್ತು. ಆಲಪುಳ ಜಿಲ್ಲೆಯ ಅಂಬಲಪುಳ ನಗರದ ಶಾಲೆಯೊಂದರ ಮೂವರು ಹುಡುಗಿಯರು ತರಗತಿಯ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದ್ದಂತೆಯೇ ಒಂದೊಂದೇ ಸಂಗತಿ ಹೊರ ಬೀಳತೊಡಗಿದ್ದವು.

ತಮ್ಮ ಖಾಸಗಿ ಡೈರಿಯಲ್ಲಿ ಆ ಹುಡುಗಿಯರು ತಮ್ಮದೇ ತರಗತಿಯ ಕೆಲವು ಹುಡುಗರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು ಎಂಬುದನ್ನು ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಆ ಹುಡುಗಿಯರು ದೈಹಿಕ ಸಂಪರ್ಕಕ್ಕೆ ಒಳಗಾಗಿದ್ದು ಸಾಬೀತಾಗಿತ್ತು. ಆ ಡೈರಿಗಳನ್ನು ಆಧರಿಸಿಯೇ ಇಂದು ತನಿಖೆ ನಡೆಯುತ್ತಿದೆ.

ವಿಷಯ ಅಷ್ಟೇ ಆಗಿದ್ದರೆ ಇದ್ಯಾವುದೋ ವಿಫಲ ಪ್ರೇಮದ ಕತೆ ಎಂದು ಸುಮ್ಮನಿದ್ದುಬಿಡಬಹುದು. ಆದರೆ, ಆ ನಂತರ ಬೆಳಕಿಗೆ ಬಂದ ಕೆಲವು ಸಂಗತಿಗಳು ನಿಜಕ್ಕೂ ಕಳವಳಕಾರಿಯಾಗಿವೆ. ಪ್ರೀತಿಯ ನಾಟಕವಾಡಿದ್ದ ಹುಡುಗರು ಹುಡುಗಿಯರ ಗಮನಕ್ಕೆ ಬಾರದಂತೆ ಅವರ ನಡುವಿನ ಖಾಸಗಿ ಕ್ಷಣಗಳನ್ನು ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದರು. ಅದನ್ನು ಬಳಸಿಕೊಂಡೇ ಆ ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಮಾನಕ್ಕೆ ಅಂಜುವ ಮಧ್ಯಮ ವರ್ಗದಿಂದ ಬಂದ ಈ ಹುಡುಗಿಯರು ಆತ್ಮಹತ್ಯೆಗೆ ಮೊರೆ ಹೋಗುವ ಮೂಲಕ ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದರು. ಈ ಘಟನೆಯಿಂದ ಇಡೀ ಕೇರಳವೇ ತತ್ತರಿಸಿತ್ತು. ಮಾತ್ರವಲ್ಲ ಹೆಣ್ಣು ಮಕ್ಕಳ ಪೋಷಕರು ಆತಂಕದಿಂದ ನಿದ್ದೆಗೆಡುವಂತಾಗಿತ್ತು.

ಬಹುತೇಕ ಮಂದಿ ಈ ಎಲ್ಲಾ ಸಮಸ್ಯೆಗಳಿಗೆ ಹುಡುಗಿಯರ ಪೋಷಕರ ಕಡೆ ಬೊಟ್ಟು ಮಾಡುತ್ತಾರೆ. "ಮೊದಲನೆಯದಾಗಿ ಪ್ರತಿ ತಂದೆ-ತಾಯಿಯೂ ತಮ್ಮ ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಆಗ ಮಕ್ಕಳಿಗೂ ತಮ್ಮ ತವಕ-ತಲ್ಲಣಗಳನ್ನು ತಂದೆ-ತಾಯಿಗಳೊಂದಿಗೆ ಹಂಚಿಕೊಳ್ಳಲು ಅವಕಾಶವಾಗುತ್ತದೆ. ಅದರಲ್ಲೂ ಇಂತಹ ಸಂದರ್ಭಗಳಲ್ಲಿ ತಾಯಿಯ ಪಾತ್ರ ಮಹತ್ವದ್ದು" ಎಂಬ ಅಭಿಪ್ರಾಯ ಬೆಂಗಳೂರಿನ ಗೃಹಿಣಿ ಉಷಾ ಕುಮಾರಿ ಅವರದ್ದು. ಅವರ ಪುತ್ರಿ ಈಗ ಪತ್ರಿಕೋದ್ಯಮ ವಿದ್ಯಾರ್ಥಿನಿ.

ಜೊತೆಗೆ ಇಂದಿನ ಯುವ ಜನಾಂಗದ ಎದುರಿಗಿರುವ ಆಯ್ಕೆಗಳು, ಅವರ ಸುತ್ತ-ಮುತ್ತಲಿನ ವಾತಾವರಣ ಉಷಾ ರೀತಿಯ ಬಹಳಷ್ಟು ಪೋಷಕರನ್ನು ಆತಂಕದ ಮಡುವಿಗೆ ತಳ್ಳಿದೆ. "ನಿಜಕ್ಕೂ ನನಗೆ ಆತಂಕವಾಗುತ್ತದೆ. ನಮ್ಮ ಖಾಸಗಿ ಕ್ಷಣಗಳನ್ನ ಅಪಹರಿಸುತ್ತಿರುವ ಮಲ್ಟಿಮೀಡಿಯಾಗಳು, ಶಾಲೆ-ಕಾಲೇಜುಗಳಲ್ಲಿ ಅವರು ಒಡನಾಡುವ ಸ್ನೇಹಿತರು, ಆರ್ಕುಟ್, ಫೇಸ್‌ಬುಕ್ ರೀತಿಯ ಅಂತರ್ಜಾಲ ತಾಣಗಳು ಎಲ್ಲವೂ ಈ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ. ಮಕ್ಕಳ ಸ್ನೇಹಿತರ ಮೇಲೆ ಒಂದು ಕಣ್ಣಿಟ್ಟಿರುವುದು ಅತ್ಯವಶ್ಯಕ" ಎನ್ನುತ್ತಾರೆ ಉಷಾ ಕುಮಾರಿ.

ಅಹಮದಾಬಾದ್‌ನ ಹುಡುಗಿ ಬಿಜಲ್ ಜೋಷಿಗೆ ತನ್ನ ಪ್ರಿಯಕರ ಸಜಾಲ್ ಜೈನ್ ಒಬ್ಬ ವಿವಾಹಿತ ಎಂಬ ಸಂಗತಿಯೇ ತಿಳಿದಿರಲಿಲ್ಲ. ೨೦೦೩ ಡಿಸೆಂಬರ್ ೩೧ರಂದು ಹೊಸ ವರ್ಷದ ಸಂಭ್ರಮಾಚರಣೆಗೆಂದು ತನ್ನ ಗೆಳೆಯನೊಂದಿಗೆ ಹೋಗುವವರೆಗೂ ಬಿಜಲ್ ಮನದಲ್ಲಿ ತನ್ನ ಗೆಳೆಯನ ಕುರಿತು ಕಿಂಚಿತ್ತೂ ಅನುಮಾನವಿರಲಿಲ್ಲ. ಗೆಳೆಯನನ್ನು ನಂಬಿ ಸಮೀಪದ ಹೊಟೇಲ್‌ಗೆ ಹೋದ ಬಿಜಲ್ ಮೇಲೆ ಸಜಾಲ್ ಹಾಗೂ ಆತನ ಸ್ನೇಹಿತ ಪಡೆ ಅತ್ಯಂತ ಅಮಾನುಷವಾಗಿ ಅತ್ಯಾಚಾರವೆಸಗಿತು.

ಮಾತ್ರವಲ್ಲ ಚಿತ್ರ-ವಿಚಿತ್ರ ದೈಹಿಕ ಹಿಂಸೆಗಳಿಗೂ ಅವಳನ್ನು ಗುರಿ ಮಾಡಲಾಯಿತು. ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಮನನೊಂದ ಬಿಜಲ್ ೨೦೦೪ ಜನವರಿ ೭ರಂದು ಆತ್ಮಹತ್ಯೆ ಮಾಡಿಕೊಂಡಳು.

ಬೆಂಗಳೂರಿನ ನಿಮ್ಹಾನ್ಸ್‌ನ ಮನೋವೈದ್ಯ ಡಾ.ಬಿ.ಎನ್. ಗಂಗಾಧರ್ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯ ಎನ್ನುತ್ತಾರೆ. "ಹದಿಹರೆಯ ಒಂದು ರೀತಿಯಲ್ಲಿ ಸಂಕ್ರಮಣ ಕಾಲ. ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಗೊಂದಲಗಳಿಗೆ ಮಕ್ಕಳು ಪಕ್ಕಾಗುತ್ತವೆ. ಮಕ್ಕಳು ಅನುಭವಿಸುವ ಮಾನಸಿಕ ತುಮುಲ ತಂದೆ-ತಾಯಿಯರ ಗಮನಕ್ಕೆ ಬಾರದೇ ಹೋಗಬಹುದು. ಮಕ್ಕಳಿಗೆ ಯಾವಾಗ, ಎಷ್ಟು ಸ್ವಾತಂತ್ರ್ಯ ನೀಡಬೇಕು ಎಂಬ ಸಾಮಾನ್ಯ ಪ್ರಜ್ಞೆ ಕೂಡ ನಮ್ಮ ಬಹಳಷ್ಟು ಪೋಷಕರಿಗೆ ಇರುವುದಿಲ್ಲ. ಇದು ಮುಂದೆ ಮಕ್ಕಳು ಹಾಗೂ ಪೊಷಕರ ನಡುವಿನ ಶೀತಲ ಸಮರವಾಗಿ ಮಾರ್ಪಾಟಾಗುತ್ತದೆ. ಜೊತೆಗೆ ಮಕ್ಕಳು ಹಾಗೂ ಅವರ ಸ್ನೇಹಿತ ಬಳಗದ ಮೇಲೆ ಒಂದು ಕಣ್ಣಿಡುವುದು ಪೋಷಕರ ಹೊಣೆ" ಎನ್ನುತ್ತಾರೆ ಡಾ. ಗಂಗಾಧರ್.

ಆರ್ಥಿಕ ಜಾಗತೀಕರಣವೇ ಈ ಎಲ್ಲಾ ಹಳವಂಡಗಳಿಗೆ ಕಾರಣ ಎನ್ನುವುದು ಖ್ಯಾತ ಸಾಮಾಜಿಕ ಕಾರ್ಯಕರ್ತ ರಿತುಪರ್ಣ ಮೊಹಾಂತಿ ಅವರ ದೃಢ ನಿಲುವು. "ನಮ್ಮ ಪುರುಷ ಪ್ರಧಾನ ಸಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಕೇವಲ ಭೋಗದ ವಸ್ತುವಿನ ಸ್ಥಾನ. ಹೆಣ್ಣು ಅಂದರೆ ಮನಸ್ಸು ಬಂದಾಗ ಬಳಸಿಕೊಂಡು ಬಿಸಾಡುವ ಪದಾರ್ಥಗಳೆಂದೇ ಬಹುತೇಕ ಮಂದಿಯ ಭಾವನೆ. ಇಂಥ ಸನ್ನಿವೇಶದಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳು ಒಂದೊಂದು ಹೆಜ್ಜೆ ಇಡುವಾಗಲೂ ಸಾವಿರ ಬಾರಿ ಚಿಂತಿಸಬೇಕಾಗುತ್ತದೆ" ಎನ್ನುತ್ತಾರೆ ರಿತುಪರ್ಣ ಮೊಹಾಂತಿ.

ಹೌದು, ಈಗ ಕಾಲ ಸಾಕಷ್ಟು ಬದಲಾಗಿದೆ. ನಮ್ಮ ಪೋಷಕರು ಇದ್ದ ಕಾಲಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ಇದೆ. ನಿವೃತ್ತ ಶಾಲಾ ಶಿಕ್ಷಕಿ ಹಾಗೂ ದೆಹಲಿ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಕಿರಣ್ ಮೆಹ್ತಾ, "ನನ್ನ ಪ್ರಕಾರ ಇಂದಿನ ಸಂಬಂಧಗಳಲ್ಲಿ ಅಂತಹ ಬದಲಾವಣೆ ಆಗಿಲ್ಲ. ಆದರೆ ಪ್ರೌಢಾವಸ್ಥೆಗೆ ಬಂದ ಮಕ್ಕಳು ಹಾಗೂ ಶಿಕ್ಷಕರ ದೃಷ್ಟಿಕೋನದಲ್ಲಿ ಬಹಳ ವ್ಯತ್ಯಾಸವಿದೆ. ಏಕೆಂದರೆ, ಶಿಕ್ಷಕರು ಹದಿಹರೆಯದಲ್ಲಿ ತಾವು ಹೇಗಿದ್ದೆವು ಎಂಬುದನ್ನೇ ಮರೆತುಬಿಡುತ್ತಾರೆ. ಈಗಿನ ಮಕ್ಕಳು ತುಸು ವಿಭಿನ್ನ ಮನೋವೃತ್ತಿ ತೋರುತ್ತಿರುವುದು ಬಿಟ್ಟರೆ ಹಿಂದಿನವರಿಗಿಂತಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಹಿಂದಿನ ಕಾಲದಲ್ಲೂ ಹುಡುಗಿಯರು ಇದೇ ರೀತಿಯಲ್ಲಿ ಮೋಸ ಹೋದ ನಿದರ್ಶನಗಳಿವೆ. ಈಗ ಈ ಕುರಿತು ಬಹಿರಂಗವಾಗಿ ಚರ್ಚೆಗಳಾಗುತ್ತಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ ಅಷ್ಟೇ" ಎನ್ನುತ್ತಾರೆ.

"ಮಾಧ್ಯಮಗಳಿಗೂ ಈ ವಿಚಾರಗಳ ಕುರಿತು ಇನ್ನಿಲ್ಲದ ಕುತೂಹಲ ಹಾಗೂ ಆಸಕ್ತಿ. ಆದರೆ, ಹುಡುಗ ಹಾಗೂ ಹುಡುಗಿಯರನ್ನು ಮುಕ್ತವಾಗಿ ಬೆರೆಯಲು ಬಿಟ್ಟು, ಅವರಲ್ಲಾಗುವ ದೈಹಿಕ ಹಾಗೂ ಮಾನಸಿಕ ಗೊಂದಲಗಳನ್ನು ಒಪ್ಪಿಕೊಳ್ಳದಿರುವುದು ಸರಿಯಲ್ಲ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಹಂಚಿಕೊಳ್ಳುವ ಅವಕಾಶ ಪ್ರತಿಯೊಬ್ಬ ಹುಡುಗಿಗೂ, ಹುಡುಗನಿಗೂ ಇರಬೇಕು. ಆಗ ಮಾತ್ರ ಈ ರೀತಿಯ ಪ್ರಕರಣಗಳು ತಹಬಂದಿಗೆ ಬರುತ್ತವೆ" ಎನ್ನುತ್ತಾರೆ ಕಿರಣ್ ಮೆಹ್ತಾ.

ನಮ್ಮ ಸಮಾಜದ ದುರಂತವೆಂದರೆ, ಯುವ ಮನಸ್ಸುಗಳು ಸಮಸ್ಯೆಗಳ ಕೂಪಕ್ಕೆ ಬಿದ್ದು ಬಳಲಿ, ಇಂತಹ ಅನಾಹುತಗಳಾದಾಗ ಮಾತ್ರವೇ ನಮಗೆ ಜ್ಞಾನೋದಯವಾಗುವುದು. ಆದ್ದರಿಂದಲೇ ಇಂತಹ ಬಹಳಷ್ಟು ಸಮಸ್ಯೆಗಳಿಗೆ ನಮ್ಮಲ್ಲಿ ಇನ್ನೂ ಉತ್ತರ ದೊರೆಕಿಲ್ಲ.

7 ಕಾಮೆಂಟ್‌ಗಳು:

Karnataka Best ಹೇಳಿದರು...

lekana super ide alva.

ಗೌತಮ್ ಹೆಗಡೆ ಹೇಳಿದರು...

ಸರಿಯಾಗಿ ಬರದ್ದೆ . ಎಲ್ಲ ಹುಡುಗಿಯರು ಹಾಗು ಹುಡುಗರೂ ಓದಲೇ ಬೇಕು ಇದನ್ನ ...

Karnataka Best ಹೇಳಿದರು...

boss matte nidra lokake jaridra hege. enadru baita iru.

Unknown ಹೇಳಿದರು...

ಲಾಯ್ಕಾದು ಮಿನಿಯಾ...!!

Unknown ಹೇಳಿದರು...

ಲಾಯ್ಕಾದು ಮಿನಿಯಾ........!!!

Suvarnini Konale ಹೇಳಿದರು...

ಬರೆದವರು ಯಾರೇ ಇರಲಿ. ಒಳ್ಳೆಯ ಸಾಂದರ್ಭಿಕ ಲೇಖನ. ಇದನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ನಮ್ಮಲ್ಲಿ ಇಂದು ತುಂಬಾ ಕಡಿಮೆ ಆಗಿದೆ. ಯಾವುದನ್ನೇ ಆದರೂ ವ್ಯವಹಾರ, ಲಾಭ-ನಷ್ಟಗಳ ದೃಷ್ಟಿಯಿಂದ ನೋಡುವ ಮನೋಭಾವ. ಜೀವನದ ಮೌಲ್ಯಗಳಿಗೆ ಎಲ್ಲಿದೆ ಬೆಲೆ? ಹದಿಹರೆಯದ ಹುಡುಗಿಯರು ಎಚ್ಚರವಹಿಸಬೇಕಾದ್ದು ಅಗತ್ಯ. ಆದರೆ ಇಂತಹ ಕೃತ್ಯ ಎಸಗುವಂತಹವರಿಗೆ ಸರಿದಾರಿಯ ಪಾಠ ಹೇಳುವುದೂ ಅತ್ಯಗತ್ಯ, ಅಲ್ಲವೇ? ಈ ಜವಾಬ್ದಾರಿ ತಂದೆ-ತಾಯಿ ಮತ್ತು ಸಣ್ಣ ವಯಸ್ಸಿನಿಂದ ಮನಸ್ಸಿನ ಮೇಲೆ ಪ್ರಭಾವ ಬೀರುವ ಶಿಕ್ಷಕರ ಮೇಲಿದೆ. ಜೊತೆಗೇ ಮಾಧ್ಯಮಗಳು ಕೂಡ ಈ ಎಲ್ಲಾ ಸಮಸ್ಯೆಗಳಿಗೆ ಒಂದು ರೀತಿಯಿಂದ ಕಾರಣ, ಆದ್ದರಿಂದ ಎಲ್ಲಾ ಮಾಧ್ಯಮಗಳೂ ಸಮಾಜದ ಸ್ವಾಸ್ಥ್ಯದ ಬಗ್ಗೆ ಹೆಚ್ಚು ಗಮನಕೊಡಬೇಕಾದ್ದು ಅಗತ್ಯ. ಇದು ನನ್ನ ಅಭಿಪ್ರಾಯ, ಬಹುಶಃ ಬಹುತೇಕರ ಅಭಿಪ್ರಾಯವೂ ಇದೇ ಇರಬಹುದು :)

avinash ಹೇಳಿದರು...

really every young people has to get the awarness about misuse of technolodgy and parents has to think twice while affording such kind of things to their children. Eye opening blog.............