ಈಗ ನೋಡು, ಮತ್ತೆ ಫೇಸ್ಬುಕ್ನಲ್ಲಿ ಮ್ಯಾರಿಟಲ್ ಸ್ಟೇಟಸನ್ನು ’ಸಿಂಗಲ್’ ಅಂತ ಬದಲಾಯಿಸಬೇಕು...
ಗುರುವಾರ, ಏಪ್ರಿಲ್ 5, 2012
ಬಂದಳು, ಕಾಡಿದಳು.. ಅವಳೇ ಜೀವನವಾದಾಗ ಹೊರಟು ಹೋದಳು…
ಈಗ ನೋಡು, ಮತ್ತೆ ಫೇಸ್ಬುಕ್ನಲ್ಲಿ ಮ್ಯಾರಿಟಲ್ ಸ್ಟೇಟಸನ್ನು ’ಸಿಂಗಲ್’ ಅಂತ ಬದಲಾಯಿಸಬೇಕು...
ಭಾನುವಾರ, ಫೆಬ್ರವರಿ 26, 2012
ಬದುಕು ಕೇರ್ ಆಫ್ ಫುಟ್ಪಾತ್...
ನಾವು ಬಯಸಿ ಇಲ್ಲಿಗೆ ಬಂದಿದ್ದಲ್ಲ. ನಸೀಬು ನಮ್ಮನ್ನು ಕರೆ ತಂದಿತು. ಒಬ್ಬ ವ್ಯಕ್ತಿ ಫುಟ್ಪಾತ್ನಲ್ಲಿ ನಿಂತು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾನೆ ಅಂದರೆ ನೀವು ಯೋಚನೆ ಮಾಡಿ. ಅದು ಆ ವ್ಯಕ್ತಿಯ ಜೀವನದ ಕೊನೆಯ ಘಟ್ಟ. ಅದರಿಂದ ಕೆಳಗಡೆ ಇಳಿಯಲು ಸಾಧ್ಯವಿಲ್ಲ`
-ಅಲ್ತಾಫ್ ಮಾತಿನಲ್ಲಿ ನೋವು. ಕಣ್ಣಂಚಿನಲ್ಲಿ ವಿಷಾದದ ಭಾವ. ತಾವು ಮಾಡುತ್ತಿರುವ ಕೆಲಸದ ಬಗ್ಗೆ ಪ್ರೀತಿಗಿಂತ ಅನಿವಾರ್ಯತೆಯೇ ಹೆಚ್ಚಾಗಿದೆಯೇನೋ ಎನಿಸುತ್ತಿತ್ತು. ನಿಧಾನವಾಗಿ ಪ್ರಶ್ನೆಗಳಿಗೆ ತೆರೆದುಕೊಂಡರು ಅಲ್ತಾಫ್.
ಅಲ್ತಾಫ್ ಅವರ ಕಾರ್ಯಕ್ಷೇತ್ರ ಫುಟ್ಪಾತ್. ಬೆಂಗಳೂರಿನ ಖ್ಯಾತ ಬ್ರಿಗೇಡ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಒಂದು ಕಡೆ ಕುಳಿತು ಟೈಗಳು, ಪರ್ಸುಗಳನ್ನು ಮಾರುವುದು ಅವರ ಕಾಯಕ. ಕಳೆದ 8-10 ವರ್ಷಗಳಿಂದ ಅವರು ಈ ಕೆಲಸವನ್ನು ಮಾಡುತ್ತಿದ್ದಾರೆ.
ಬೆಂಗಳೂರಿನ ನೀಲಸಂದ್ರದ ನಿವಾಸಿಯಾದ ಅವರಿಗಿನ್ನೂ 28ರ ಹರೆಯ. ಎಂಟನೇ ತರಗತಿವರೆಗೆ ಓದಿದ್ದಾರೆ. ಮನೆಯಲ್ಲಿ ಕಡು ಬಡತನ. ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ. ಕಿರಿಯವಯಸ್ಸಿನಲ್ಲೇ ಮನೆಯ ನಿರ್ವಹಣೆ ಜವಾಬ್ದಾರಿ. ದುಡಿಯುವುದು ಅನಿವಾರ್ಯವಾದಾಗ ಫುಟ್ಪಾತ್ ಆಯ್ಕೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಮೊದಲ ಬಾರಿ ಅಂದರೆ ಕಳೆದ ಏಪ್ರಿಲ್ನಲ್ಲಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಇರ್ಷಾದ್ಗೆ ಭರ್ಜರಿಯಾಗಿಯೇ ವ್ಯಾಪಾರ ಆಗಿತ್ತು. ಅಣ್ಣಾ ನವದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ನಡೆಸುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಸಾವಿರಾರು ಜನರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿ ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಆ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲೂ ರಾಷ್ಟ್ರ ಧ್ವಜ, ಐ ಯಾಮ್ ಅಣ್ಣಾ, ಐ ಸಪೋರ್ಟ್ ಅಣ್ಣಾ ಎಂಬ ಘೋಷಣೆಗಳನ್ನೊಳಗೊಂಡ ಕರ ಪತ್ರಗಳು, ಭಿತ್ತಿ ಪತ್ರಗಳು ರಾರಾಜಿಸಿದ್ದವು. ಅಣ್ಣಾ ಅವರು ಉಪವಾಸ ನಡೆಸಿದ ಒಟ್ಟು 13 ದಿನಗಳೂ ಇರ್ಷಾದ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೀಡು ಬಿಟ್ಟಿದ್ದರು. ಆ ಸಂದರ್ಭದಲ್ಲಿ ಒಂದಿಷ್ಟು ದುಡ್ಡನ್ನೂ ಸಂಪಾದಿಸಿದ್ದಾಗಿ ಇರ್ಷಾದ್ ಹೇಳುತ್ತಾರೆ. ಆದರೆ, ಎರಡನೇ ಬಾರಿ ಡಿಸೆಂಬರ್ನಲ್ಲಿ ಮುಂಬೈನಲ್ಲಿ ಅಣ್ಣಾ ನಡೆಸಿದ ಉಪವಾಸ ಸತ್ಯಾಗ್ರಹ ಯಶಸ್ವಿಯಾಗದ್ದಕ್ಕೆ ಇರ್ಷಾದ್ಗೆ ಬೇಸರವಿದೆ. ಈ ಸಂದರ್ಭದಲ್ಲೂ ಸ್ವಾತಂತ್ರ್ಯ ಉದ್ಯಾನದಲ್ಲಿ ಜನರು ಸೇರಿದ್ದರಾದರೂ ಮೊದಲ ಸಲ ಇದ್ದಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಹಾಗಾಗಿ ಇರ್ಷಾದ್ಗೆ ಆದ ವ್ಯಾಪಾರವೂ ಅಷ್ಟಕಷ್ಟೇ. |
`ನಾವು ಓದಿಲ್ಲ. ಮತ್ತೆಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ ಸಾರ್? ಹೊಟ್ಟೆಪಾಡು. ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಬೇಕು. ಅಲ್ಲೂ ಹೆಚ್ಚು ಸಂಬಳ ಏನೂ ಕೊಡುವುದಿಲ್ಲ. 3,000 ದಿಂದ 4,000 ಸಿಕ್ಕಿದರೆ ಹೆಚ್ಚು. ಅಷ್ಟು ಸಂಬಳಕ್ಕೆ ಕೆಲಸ ಮಾಡುವುದಕ್ಕಿಂತ ಫುಟ್ಪಾತ್ ವ್ಯಾಪಾರ ಮಾಡುವುದೇ ಲೇಸು.
ಬದುಕು ಕೇರ್ ಆಫ್ ಫುಟ್ಪಾತ್ ಆದರೂ ದಿನಕ್ಕೆ 250ರಿಂದ 300 ರೂಪಾಯಿ ದುಡಿಯುತ್ತೇನೆ. ಬರುವ ದುಡ್ಡಲ್ಲಿ ಸಂಸಾರ ಸಾಗುತ್ತದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹೀಗೆ ಹೇಳುವ ಅಲ್ತಾಫ್ ಜನದಟ್ಟಣೆಯ ನಡುವೆ ತಮ್ಮ ವ್ಯಾಪಾರದಲ್ಲಿ ಕರಗಿ ಹೋಗುತ್ತಾರೆ...
ಅಲ್ತಾಫ್ ಒಬ್ಬರೇ ಅಲ್ಲ. ಜೀವನಕ್ಕಾಗಿ ಫುಟ್ಪಾತ್ ವ್ಯಾಪಾರವನ್ನೇ ನೆಚ್ಚಿಕೊಂಡ ನೂರಾರು ಯುವಕರು ಬೆಂಗಳೂರಿನಲ್ಲಿದ್ದಾರೆ. ಒಬ್ಬೊಬ್ಬರದು ಒಂದೊಂದು ಕಥೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ನಿಂತ ಕೂಡಲೇ ತಂಪು ಕನ್ನಡಕ, ಟೋಪಿಗಳು, ಆಕರ್ಷಕವಾಗಿ ಕಾಣುವ ಕೈ ಗೈಡಿಯಾರಗಳನ್ನು ಹಿಡಿದುಕೊಂಡು ಬರುವವರನ್ನೂ ನೀವು ಗಮನಿಸಿರಬಹುದು.
ಬೆಂಗಳೂರಿನ ಬ್ಯಾಟರಾಯನಪುರದ ನಿವಾಸಿಯಾಗಿರುವ ಇರ್ಷಾದ್ ಕಥೆಗೆ ಹೊರಳೋಣ. `ನನ್ನ ಮುಂದೆ ಬೇರೆ ಆಯ್ಕೆಗಳೇ ಇರಲಿಲ್ಲ. ಉತ್ತಮ ನೌಕರಿ ಹಿಡಿಯೋಣ ಅಂದರೆ ಶಿಕ್ಷಣ ಪಡೆದಿಲ್ಲ. ಎಲ್ಲಿ ಸಿಗತ್ತೆ ಸರ್ ಕೆಲಸ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ. 15 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ಇದು ಬಿಟ್ಟು ಬೇರೆ ಯಾವ ಕೆಲಸವೂ ಗೊತ್ತಿಲ್ಲ.
ಮೊದಲು ಸಂಡೇ ಬಜಾರ್ನಲ್ಲಿ ವ್ಯಾಪಾರ ಮಾಡುತ್ತಿದ್ದೆ. ಅಲ್ಲಿನ ಅಂಗಡಿಗಳವರು ಇಲ್ಲಿ ಕೆಲಸ ಮಾಡಬೇಡ ಅಂದರು. ಹಾಗಾಗಿ ಈಗ ಎಂಜಿ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ನಾನು ಯಾವಾಗಲೂ ಇಲ್ಲಿ ಇರುವುದಿಲ್ಲ. ಬೇರೆ ಬೇರೆ ಕಡೆ ವ್ಯಾಪಾರ ಮಾಡುತ್ತೇನೆ. ಯಾವತ್ತೂ ಕೈಗಡಿಯಾರವನ್ನೇ ಮಾರುವುದಿಲ್ಲ. ಬೇರೆ ಬೇರೆ ಐಟಮ್ಗಳನ್ನು ಮಾರುತ್ತೇನೆ. ಉದಾಹರಣೆಗೆ ಐಪಿಎಲ್ ಸೀಸನ್ನಲ್ಲಿ ಅಥವಾ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಧ್ವಜ, ಟೀ-ಶರ್ಟ್ ಮುಂತಾದ ವಸ್ತುಗಳನ್ನು ಮಾರುತ್ತೇನೆ. ಉರುಸ್ ಸಂದರ್ಭದಲ್ಲಿ ಮಸೀದಿಯ ಆವರಣ ನನ್ನ ಕಾರ್ಯಕ್ಷೇತ್ರ. ಸೀಸನ್ ಬದಲಾದ ಹಾಗೆ ನಾನು ಮಾರುವ ವಸ್ತುಗಳೂ ಬದಲಾಗುತ್ತವೆ` ಎನ್ನುತ್ತಾರೆ ಇರ್ಷಾದ್.
ಒಂದೊಂದು ದಿನ ಒಂದು ರೀತಿ ವ್ಯಾಪಾರ ಆಗುತ್ತದೆ. ಕೆಲವು ದಿನ 500 ರೂಪಾಯಿ ವ್ಯಾಪಾರ ಆಗಿದ್ದೂ ಇದೆ. ಕೆಲವು ದಿನ ಕೇವಲ 100 ರೂಪಾಯಿ ಆಗಿದ್ದೂ ಇದೆ. ಹೆಚ್ಚು ವ್ಯಾಪಾರ ಆದರೆ ಸಂತೋಷ ಆಗುತ್ತದೆ. ಕಡಿಮೆ ವ್ಯಾಪಾರ ಆದರೆ ಸಹಜವಾಗಿ ದುಃಖ. ಯಾರಾ ಹತ್ತಿರವೂ ಹೇಳಿಕೊಳ್ಳುವ ಹಾಗಿಲ್ಲ ಎಂದು ಇರ್ಷಾದ್ ನೋವು ತೋಡಿಕೊಳ್ಳುತ್ತಾರೆ.
ಅಂದ ಹಾಗೆ, 26ರ ಹರೆಯದ ಇರ್ಷಾದ್ಗೆ ಮದುವೆಯಾಗಿದೆ. ಇಬ್ಬರು ಮಕ್ಕಳೂ ಇದ್ದಾರೆ. ಪೋಷಕರು ಜೊತೆಯಲ್ಲಿರುವ ತುಂಬು ಸಂಸಾರವನ್ನು ತಮ್ಮ ಸಂಪಾದನೆಯಿಂದಲೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ಎಂಬುದಿಲ್ಲ. ನಿರ್ದಿಷ್ಟ ವಸ್ತುಗಳನ್ನೂ ಇವರು ಮಾರುವುದಿಲ್ಲ. ದಿನಕ್ಕೆ ಒಂದೊಂದು ಸ್ಥಳದಲ್ಲಿ ಇವರ ಕಾಯಕ. ಒಂದಷ್ಟು ಜನ ಕೈಗಡಿಯಾರಗಳನ್ನು ಕೈಯಲ್ಲಿ ಹೊತ್ತು ತಿರುಗಿದರೆ, ಇನ್ನೊಂದಷ್ಟು ಜನರು ಆಕರ್ಷಕ ತಂಪು ಕನ್ನಡಕಗಳನ್ನು ಕೈಯಲ್ಲಿ, ಮೈಯಲ್ಲಿ ಹೊತ್ತುಕೊಂಡು ಪಾದಚಾರಿಗಳ ಹಿಂದೆ ಮುಂದೆ ನಡೆದುಕೊಂಡು ಹೋಗುತ್ತಾ ವ್ಯಾಪಾರ ಮಾಡುತ್ತಿರುತ್ತಾರೆ. ಇನ್ನು ಕೆಲವರು ಟೈ, ಬೆಲ್ಟ್, ಕಾಲು ಚೀಲ (ಸಾಕ್ಸ್), ಟೋಪಿಗಳು, ಹುಡುಗಿಯರು ಧರಿಸುವ ಅಲಂಕಾರಿಕ ವಸ್ತುಗಳನ್ನು ಮಾರುತ್ತಿರುತ್ತಾರೆ.
ಪುಟ್ಪಾತ್ನಲ್ಲಿ ವ್ಯಾಪಾರ ಮಾಡುವ ವೃತ್ತಿಯನ್ನು ಆಯ್ದುಕೊಂಡವರಲ್ಲಿ ಹೆಚ್ಚಿನವರು ಯುವಕರು ಎಂಬುದು ಗಮನಿಸಬೇಕಾದ ಅಂಶ. ಇವರಲ್ಲಿ ಹೆಚ್ಚಿನವರು ಪ್ರಾಥಮಿಕ ಶಿಕ್ಷಣವನ್ನು ಪಡೆದಿಲ್ಲ. ಇವರ ಮನೆಯ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ಮನೆಯಲ್ಲಿ ಸಮಸ್ಯೆಗಳೂ ಹಲವು. ಅನಿವಾರ್ಯವಾಗಿ ಈ ಕಸುಬಿಗೆ ಕೈ ಹಾಕಿದ್ದಾರೆಯೇ ವಿನಃ ಇಷ್ಟ ಪಟ್ಟು ಅಪ್ಪಿಕೊಂಡದ್ದಲ್ಲ ಎನ್ನುವುದು ಸ್ಪಷ್ಟ.
ಈ ವ್ಯಾಪಾರಿಗಳು ಎದುರಿಸುತ್ತಿರುವ ಸವಾಲುಗಳು ಸಾಕಷ್ಟು. ಪೊಲೀಸರ ಕಿರಿ ಕಿರಿ ಅಂತು ಇದ್ದೇ ಇರುತ್ತದೆ. ಅವರಿಗೆ ಊಟಕ್ಕೋ, ಕಾಫಿಗೋ ಆಗುವಷ್ಟು ಇನಾಮು ಕೊಡಲೇ ಬೇಕು. ಇಲ್ಲದಿದ್ದರೆ ಅವರನ್ನು ಆ ಪ್ರದೇಶದಿಂದ ಎತ್ತಂಗಡಿ ಮಾಡುತ್ತಾರೆ. ಅಲ್ಲದೇ ಅಕ್ಕ ಪಕ್ಕದ ಅಂಗಡಿಯವರು ಇವರನ್ನು ತಮ್ಮ ಅಂಗಡಿ ಎದುರು ವ್ಯಾಪಾರ ನಡೆಸಲು ಅವಕಾಶ ಕೊಡುವುದಿಲ್ಲ. ಇವರಿಂದಾಗಿ ಗ್ರಾಹಕರು ತಮ್ಮಿಂದ ದೂರ ಹೋಗುತ್ತಾರೆ ಎಂಬುದು ಅವರ ಆರೋಪ.
ಇವರು ಮಾರುವ ವಸ್ತುಗಳು ಅಸಲಿಯಂತೆ ಕಂಡರೂ ಅವು ನಕಲಿಗಳೇ. ಕೆಲವರಲ್ಲಿ ಸಾಕಷ್ಟು ದುಡ್ಡು ಇರುತ್ತದೆ. ಆದರೆ ಅಸಲಿಗೆ ಯಾಕೆ ಅಷ್ಟು ದುಡ್ಡು ಕೊಡಬೇಕು. ನಕಲಿಯನ್ನೇ ಕೊಳ್ಳೋಣ ಎನ್ನುವ ಮನಸ್ಥಿತಿಯವರು ಇರುತ್ತಾರೆ. ಇಂತಹ ಸ್ಥಿತಿಯಲ್ಲಿ ಈ ವ್ಯಾಪಾರಿಗಳ ಮೇಲೆ ಅಸಲಿ ವಸ್ತುಗಳ ಮಾರಾಟಗಾರರ ಕೆಂಗಣ್ಣೂ ಇರುತ್ತದೆ.
ಈ ಎಲ್ಲಾ ಸವಾಲುಗಳ ಮಧ್ಯೆ ಇವರು ವ್ಯಾಪಾರ ಮಾಡಬೇಕು. ಗ್ರಾಹಕರನ್ನು ಒಲಿಸಿಕೊಳ್ಳಬೇಕು. ಗ್ರಾಹಕರೇ ರಾಜರು ಎನ್ನುವ ಕಾಲ ಇದು. ಅಂತಹುದರಲ್ಲಿ ಇವರು ಅವರ ಗಮನ ಸೆಳೆದು, ಅವರಿಗೆ ತಮ್ಮಲ್ಲಿರುವ ವಸ್ತುವಿನ ಮೇಲೆ ಆಕರ್ಷಣೆಯಾಗುವಂತೆ ಮಾಡಿ, ಆ ಬಳಿಕ ಆ ವಸ್ತುವನ್ನು ಕೊಂಡುಕೊಳ್ಳುವಂತೆ ಮಾಡುವುದು ಇದೆಯಲ್ಲಾ ಅದು ಸುಲಭದ ಕೆಲಸವಲ್ಲ. ಆದರೆ ಆ ಕೆಲಸದಲ್ಲಿ ನಿಷ್ಣಾತರಿವರು. ಆ ಕಲೆಯೂ ಅವರಿಗೆ ಒಲಿದಿದೆ. ಹೆಚ್ಚು ಓದದಿದ್ದರೂ ಮಾತೃಭಾಷೆ ಮತ್ತು ನಾಡಿನ ಭಾಷೆ ಅಲ್ಲದೇ ಇತರ ಭಾಷೆಗಳಲ್ಲೂ ಇವರು ಪರಿಣತಿ ಸಾಧಿಸಿದ್ದಾರೆ.
ಗ್ರಾಹಕರ ಮಾತೃ ಭಾಷೆಯಲ್ಲಿಯೇ ಮಾತನಾಡಿ ವ್ಯಾಪಾರದ ಅಖಾಡಕ್ಕೆ ಅವರನ್ನು ಎಳೆಯುತ್ತಾರೆ. ಗ್ರಾಹಕರು ವಸ್ತುಗಳ ದರ ಕೇಳಿ ತಿಳಿದುಕೊಂಡ ಕೂಡಲೇ ಖರೀದಿಸುತ್ತಾರೆ ಎಂಬ ಗ್ಯಾರಂಟಿ ಏನೂ ಇಲ್ಲ.
ಈ ವ್ಯಾಪಾರಿಗಳಿಗೆ ಜೀವನ ಭದ್ರತೆ ಎಂಬುದಿಲ್ಲ. ಅಭದ್ರತೆ ಇವರ ಜೀವನದ ಹಾಸುಹೊಕ್ಕು. ಇಂದು ವ್ಯಾಪಾರ ಆದರೆ ಆಯಿತು. ನಾಳೆ ಏನಾಗುವುದೋ ಹೇಳಲು ಆಗುವುದಿಲ್ಲ. ಹಾಗಿದ್ದರೂ ಜೀವನ ಪ್ರೀತಿ ಮತ್ತು ಬದುಕಬೇಕೆಂಬ ಛಲ ಇವರಿಂದ ಈ ಕಸುಬನ್ನು ಮಾಡಿಸುತ್ತಿದೆ.
-ಸೂರ್ಯ ವಜ್ರಾಂಗಿ
ಕೃಪೆ: ಪ್ರಜಾವಾಣಿ
ಶುಕ್ರವಾರ, ನವೆಂಬರ್ 4, 2011
ಸ್ನೇಹಿತನಿಗೊಂದು ಪತ್ರ
ಪ್ರಿಯ ಸ್ನೇಹಿತ,
ನಿನ್ನ ಹುಟ್ಟುಹಬ್ಬ, ಜೊತೆಗೆ ಸ್ನೇಹಿತರ ದಿನಾಚರಣೆಯೂ ಕಳೆಯಿತು. ಕ್ಷಮಿಸು.. ನಿನಗೆ ಶುಭಾಶಯ ತಿಳಿಸಲು ಸಾಧ್ಯವಾಗಲಿಲ್ಲ.ಬೇಜಾರುಪಟ್ಟುಕೊಂಡೆಯಾ ಹೇಗೆ? ಖಂಡಿತಾ ನಿನಗೆ ಬೇಸರವಾಗಿರಲಿಕ್ಕಿಲ್ಲ. ಅದಕ್ಕೆ ನಿನಗೆ ಸಮಯವೆಲ್ಲಿದೆ? ಉದ್ಯೋಗ, ಸಂಬಳ, ಅಂತಸ್ತು, ಮನೆ, ಕಾರು.. ಹೀಗೆ ನಿನ್ನ ತಲೆಯಲ್ಲಿ ಹಲವು ಯೋಚನೆಗಳೇ ತುಂಬಿರುವಾಗ ಹುಟ್ಟಿದ ದಿನ, ಗೆಳೆಯರ ದಿನ, ಸ್ನೇಹಿತರು ಹೋಗಲಿ ಕೊನೆಗೆ ಆತ್ಮೀಯ ಗೆಳತಿಯಾದ ನನ್ನ ಬಗ್ಗೆ ಯೋಚಿಸಲು ಆ ತಲೆಯಲ್ಲಿ ಜಾಗವೆಲ್ಲಿದೆ?
ಯಾಕೆ ನೀನು ಹೀಗಾದೆ ಎಂದು ಅರ್ಥವಾಗುತ್ತಿಲ್ಲ. ಕಾಲೇಜಿನಲ್ಲಿ ನನ್ನ ಜೀವದ ಗೆಳೆಯನಾಗಿದ್ದವನು ಇವನೇನಾ ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡುವಷ್ಟರ ಮಟ್ಟಿಗೆ ನೀನು ಬದಲಾಗಿದ್ದಿ. ಇದರ ಹಿಂದಿನ ಕಾರಣ ನಿಗೂಢ. ಹಾಗಾದರೆ ನೀನು ಕಾಲೇಜಿನಲ್ಲಿ ಆಡಿದ್ದೆಲ್ಲಾ ನಾಟಕವೇ? ನನಗಂತು ತಿಳಿಯುತ್ತಿಲ್ಲ.
ಇಷ್ಟು ಕಡಿಮೆ ಅವಧಿಯಲ್ಲಿ ಮನುಷ್ಯನ ವರ್ತನೆಯಲ್ಲಿ ಇಷ್ಟೊಂದು ಬದಲಾವಣೆಯೇ? ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ನಂಬಲೇ ಬೇಕಾಗಿದೆ. ನನಗೆ ಇನ್ನೂ ನೆನಪಿದೆ. ನಾವಿಬ್ಬರೂ ಕಾಲೇಜಿನಲ್ಲಿ ಭೇಟಿಯಾದ ದಿನ. ಕಾಲೇಜಿಗೆ ನಾನು ಹೊಸಬಳು, ನೀನು ಕೂಡ. ನೀನು ಹಳಬ ಅಂತ ತಿಳಿದು ತರಗತಿಯ ಬಗ್ಗೆ ನಿನ್ನಲ್ಲಿ ವಿಚಾರಿಸಿದೆ. ಅದು ನಮ್ಮ ನಡುವೆ ನಡೆದ ಮೊದಲ ಭೇಟಿ ಮತ್ತು ಸಂಭಾಷಣೆ.
`ನಾನು ಕೂಡ ಈಗಷ್ಟೆ ಕಾಲೇಜಿಗೆ ಸೇರಿದ್ದೇನೆ. ನನಗೂ ಗೊತ್ತಿಲ್ಲ. ನಡೀರಿ.. ಜೊತೆಗೆ ತರಗತಿ ಹುಡುಕೋಣ` ಅಂತ ನೀನು ಹೇಳಿದ್ದೆ. ನಮ್ಮಿಬ್ಬರ ನಡುವೆ ಸ್ನೇಹ ಚಿಗುರಿದ್ದು ಆಗಲೇ. ಇಡೀ ವಿದ್ಯಾರ್ಥಿಗಳ ಸಮೂಹ ನಮ್ಮ ಸ್ನೇಹವನ್ನು ಗುರುತಿಸಿತ್ತು.
ಕೆಲವು ವಿದ್ಯಾರ್ಥಿಗಳು ನಮ್ಮ ಸ್ನೇಹವನ್ನು ಅಪಾರ್ಥ ಮಾಡಿಕೊಂಡು, ಅಪಪ್ರಚಾರ ಮಾಡಿದರೂ ನಾವೇನು ತಲೆಕೆಡಿಸಿಕೊಂಡಿರಲಿಲ್ಲ. ಸತ್ಯ ಹೇಳಬೇಕೆಂದರೆ ನಮ್ಮ ನಡುವೆ ನಿಷ್ಕಲ್ಮಶ ಸ್ನೇಹ ಹೊರತಾಗಿ ಬೇರೇನೂ ಇರಲಿಲ್ಲ. ಅದನ್ನು ನಾವು ಹಲವು ಬಾರಿ ಮಾತನಾಡಿಕೊಂಡಿದ್ದೇವೆ ಕೂಡ.
ಅಲ್ಲಿಂದ ಮೂರು ವರ್ಷಗಳ ಕಾಲ ಜೊತೆಯಾಗಿ ಆತ್ಮೀಯವಾಗಿ ಕಾಲ ಕಳೆದಿದ್ದೆವು. ಆಗ ಈಗಿನಂತೆ ಮೊಬೈಲ್, ಎಸ್ಎಂಎಸ್,ಫೇಸ್ಬುಕ್, ಆರ್ಕುಟ್ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಆದರೂ ನಮ್ಮ ಗೆಳೆತನ ಮುಂದುವರಿದೇ ಇತ್ತು. ಆದರೆ, ಕಾಲೇಜು ಮುಗಿಯುವ ದಿನಗಳಲ್ಲಿ ನಿನಗೇನಾಯಿತೋ ತಿಳಿಯದು. ನನ್ನಿಂದ ದೂರವಾಗುತ್ತಾ ಹೋದೆ. ಯಾವತ್ತೂ ಮನಸ್ಸು ಬಿಚ್ಚಿ ನಗುತ್ತಿದ್ದವನು ಕೃತಕವಾಗಿ ನಗಲು ಆರಂಭಿಸಿದೆ. ನಿನ್ನ ಹತ್ತಿರ ಬರುವಾಗಲೆಲ್ಲಾ ಅಂತರ ಕಾಪಾಡುತ್ತಾ ಬಂದೆ.
ಒಂದು ದಿನ, ನಿನ್ನನ್ನು ತಡೆದು ಯಾಕೆ ಈ ರೀತಿ ವರ್ತಿಸುತ್ತಿದ್ದೀಯಾ ಅಂತ ಕೇಳಿದಾಗ ಏನೇನೋ ಕಾರಣಗಳನ್ನು ಹೇಳಿ ತಪ್ಪಿಸಿಕೊಂಡೆ. ನಿನ್ನ ವರ್ತನೆಗೆ ಕಾರಣಗಳೇನಿರಬಹುದು ಎಂದು ನಾನೇ ಚಿಂತಿಸತೊಡಗಿದೆ. ಇನ್ನು ಮುಂದೆ ನಾವು ದೂರವಾಗುತ್ತಿವಲ್ಲಾ ಎಂಬ ಬೇಜಾರು ಕಾರಣವಿರಬಹುದು ಎಂದುಕೊಂಡೆ.
ಅದಾಗಿದ್ದರೆ ನೀನೇ ಹೇಳುತ್ತಿದ್ದೆಯಲ್ಲಾ ಎಂದೂ ಯೋಚಿಸಿದೆ.
ಕಾಲೇಜಿನಲ್ಲಿ ಕೊನೆಯ ದಿನ ಆ ದಿನ ನೀನು ಪರವಾಗಿಲ್ಲ ಅನ್ನುವಷ್ಟು ಮಾತನಾಡಿದೆ. ನಿನ್ನ ಮಹತ್ವಾಕಾಂಕ್ಷೆಗಳನ್ನೆಲ್ಲಾ ಬಿಚ್ಚಿಟ್ಟೆ. ಆದರೆ, ನನ್ನ ಜೊತೆ ಆತ್ಮೀಯವಾಗಿ ಮಾತನಾಡಲು, ನಿನ್ನ ವರ್ತನೆಯ ಕಾರಣಗಳನ್ನು ಹೇಳಲು ಮರೆತೆ. ಅಂದಿನಿಂದ ಇಂದಿನವರೆಗೂ ನಮ್ಮಿಬ್ಬರ ನಡುವೆ ಭೇಟಿ ನಡೆದೇ ಇಲ್ಲ ನೋಡು.
ನಮ್ಮ ಸಹಪಾಠಿಗಳೆಲ್ಲಾ ಸಿಕ್ಕಾಗ ನಿನ್ನ ಬಗ್ಗೆಯೇ ವಿಚಾರಿಸುತ್ತಾರೆ. ನೀನು ಎಲ್ಲಿದ್ದೀಯಾ ಎಂಬುದೇ ನನಗೆ ತಿಳಿದಿಲ್ಲ. ಇನ್ನು ಅವರಿಗೆ ಏನೂ ಅಂತ ಹೇಳುವುದು. ಗೊತ್ತಿಲ್ಲ ಎನ್ನುವುದೇ ಉತ್ತರ. ಈಗ ನೋಡು, ಪ್ರತಿದಿನ ಫೇಸ್ಬುಕ್, ಟ್ವಿಟರ್, ಆರ್ಕುಟ್ನಲ್ಲೆಲ್ಲಾ ನಿನ್ನ ಹೆಸರು ಬರೆದು ಹುಡುಕಾಡುತ್ತಿದ್ದೇನೆ. ನಿನ್ನ ಹೆಸರಿನ ಹಲವು ಜನರು ಇದ್ದರಾದರೂ ನೀನಿಲ್ಲ.
ನೀನೇನೋ ನನ್ನನ್ನು ಮರೆತಿರಬಹುದು. ಆದರೆ ನನ್ನಿಂದ ಅದು ಸಾಧ್ಯವಿಲ್ಲ. ಸ್ನೇಹವನ್ನು, ಅದರ ಮಧುರ ನೆನಪನ್ನು ಮರೆಯಲು ನನ್ನಿಂದಾಗದು.
ಹೋಗಲಿ ಬಿಡು, ನೀನು ಎಲ್ಲೇ, ಹೇಗೆಯೇ ಇರು, ಸಂತೋಷ ಎಂದಿಗೂ ನಿನ್ನ ಜೊತೆಯಿರಲಿ ಎಂಬುದೇ ಈ ಸ್ನೇಹಿತೆಯ ಹಾರೈಕೆ...
-ವಸೂ
ಕೃಪೆ: ಪ್ರಜಾವಾಣಿ
ಶುಕ್ರವಾರ, ಅಕ್ಟೋಬರ್ 14, 2011
ಮತ್ತೆ ಬರೆಯುವ ಕಾರ್ಯ ಶೀಘ್ರದಲ್ಲಿ…
ಕಳದ ಒಂದೂವರೆ ವರ್ಷಗಳಿಂದ ನನ್ನ ಬ್ಲಾಗ್ನಲ್ಲಿ ನಾನು ಏನೂ ಬರೆದಿಲ್ಲ.. ಮತ್ತೆ ಬರೆಯುವ ವಾತಾವರಣವನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ…
ಶೀಘ್ರದಲ್ಲಿ ಈ ಪುಟದಲ್ಲಿ ನನ್ನ ಪದಗಳ ಗೀಚುಗಳನ್ನು ನೀವು ಕಾಣುವಿರಿ..
ನಿಮ್ಮವ
ಸೂರ್ಯ
ಭಾನುವಾರ, ಏಪ್ರಿಲ್ 11, 2010
ಮರೆಯದ ನೆನಪನು ನಮ್ಮಲ್ಲಿ ತಂದೆ ನೀನು..

ನೀ ಬರೆದ ಕಾದಂಬರಿ’ ಚಿತ್ರದ ’ನೀ ಮೀಟಿದಾ ನೆನಪೆಲ್ಲವೂ. ಎದೆ ತುಂಬಿ ಹಾಡಾಗಿದೇ.... ಎಂದು ಹಾಡುತ್ತಿದ್ದರೆ, ಅವರ ಕಣ್ಣಂಚು .. ಜೊತೆಗೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಆ ಕಾರ್ಯಕ್ರಮದಲ್ಲಿ ಎಸ್ಪಿಬಿ ಅಂತಹ ಭಾವನಾತ್ಮಕವಾದ ಹಲವಾರು ಹಾಡುಗಳನ್ನು ಹಾಡಿದ್ದರು. ಏಕೋ ಏನೋ ಆ ಹಾಡುಗಳನ್ನೆಲ್ಲಾ ಕೇಳುವಾಗ ಹೃದಯ ತುಂಬಾ ಭಾರವಾದ ಅನುಭವ.
~~~
ಸತ್ಯ ಎಂದಿಗೂ ಕಹಿ ಅನ್ನುವ ಮಾತನ್ನು ಹಲವಾರು ಬಾರಿ ಕೇಳಿದ್ದೆ. ಆದರೆ ಅರಗಿಸಿಕೊಳ್ಳಲಾರದ್ದು ಅಂತ ತಿಳಿದಿರಲಿಲ್ಲ. ಅಂದು ಮೊದಲ ಪಾಳಿ ಮುಗಿಸಿಕೊಂಡು ತಡವಾಗಿ ರೂಮಿಗೆ ಬಂದಿದ್ದ ನನಗೆ ನಿದ್ದೆಯ ಜೋಮು ಹಿಡಿಯಬೇಕಾದರೆ ಸುಮಾರು ಹೊತ್ತು ಹಿಡಿತ್ತು. ಅದಕ್ಕೆ ಕಾರಣವೂ ಇತ್ತು. ಅಂತು ಕೊನೆಗೂ ನಿದ್ದೆ ಬಂತೆನ್ನಿ. ಮರು ದಿನ ಬೆಳಗ್ಗೆ ೮.೩೦ರ ಸುಮಾರಿಗೆ ಮಿತ್ರ ಜೋಮನ್ ವರ್ಗೀಸ್ ಒಂದು ಎಸ್ಎಂಎಸ್ ಕಳಿಸಿದ್ದರು. ನಿದ್ದೆ ಕಣ್ಣಿನಲ್ಲಿ ಮೊಬೈಲ್ ಎತ್ತಿ ಅಸ್ಪಷ್ಟವಾಗಿ ಕಾಣುತ್ತಿದ್ದ ಮೆಸೇಜ್ ಓದಿದ ಕೂಡಲೇ ನಿದ್ದೆ ಗುಡ್ಡೆ ಹತ್ತಿತ್ತು. ಸೂರ್ಯ ವಿಷ್ಯ ಗೊತ್ತಾಗಿಲ್ವ ವಿಷ್ಣು ಇನ್ನಿಲ್ಲ ಎನ್ನುವುದು ಮೆಸೇಜ್ನಲ್ಲಿದ್ದ ಸಾರಾಂಶ. ತಕ್ಷಣ ಟಿವಿ ಆನ್ ಮಾಡಿದೆ. ಮೆಸೇಜ್ನಲ್ಲಿದ್ದ ಅಂಶಗಳು ದೃಶ್ಯ ರೂಪದಲ್ಲಿ ಗೋಚರವಾಗಿತ್ತು. ನಿದ್ದೆಯಿಂದ ಮಸುಕುಕಾಗಿದ್ದ ಕಣ್ ದೃಷ್ಟಿ ಕನ್ನಡ ಚಿತ್ರರಂಗದ ಆಪ್ತಮಿತ್ರ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರ ಕಂಡಾಗ ಸರಿಯಾಗಿ ಗೋಚರವಾಗಲು ಆರಂಭವಾಯಿತು. ಹಿಂದಿನ ದಿನವಷ್ಟೇ ಸುಗಮ ಸಂಗೀತ ಕ್ಷೇತ್ರದ ಮೇರು ಗಾಯಕ ಸಿ.ಅಶ್ವತ್ಥ್ ಅವರು ನಿಧನರಾದ ಸುದ್ದಿ ಅರಗಿಸಿಕೊಳ್ಳುವಷ್ಟರಲ್ಲಿ ವಿಷ್ಣು ವಿಧಿವಶರಾಗಿದ್ದರು.
ವಿಷ್ಣುವರ್ಧನ್ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬುದ್ಧಿ ತಿಳಿದಾಗಿನಿಂದ ಅವರನ್ನು ಹೃದಯದಲ್ಲಿ ಇಟ್ಟು ಆರಾಧಿಸಿದ್ದೇನೆ. ಚಿತ್ರಮಂದಿರಗಳಲ್ಲಿ ಅವರ ಚಿತ್ರಗಳನ್ನು ನೋಡದಿದ್ದರೂ, ವಾಹಿನಿಗಳಲ್ಲಿ ಅವರ ಚಿತ್ರಗಳನ್ನು ಒಂದೂ ಬಿಡದೆ ನೋಡಿ ಸವಿದಿದ್ದೇನೆ.
ಕನ್ನಡ ಚಿತ್ರರಂಗದ ಪರ್ವಕಾಲ ೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದಲ್ಲಿನ ರಾಜಕೀಯದ ಹೊರತಾಗಿಯೂ ರಾಜನಂತೆ ಮೆರೆದವರು ವಿಷ್ಣು. ಭಾವ ತುಂಬಿದ ಅವರ ಅಭಿನಯ ಎಲ್ಲರನ್ನೂ ಮೋಡಿ ಮಾಡಿತ್ತು. ನನ್ನನ್ನೂ ಕೂಡ.
ಅವರೆಡೆಗೆ ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಅವರ ಕಣ್ಣುಗಳು. ಆ ಕಣ್ಣಿನ ತೇಜಸ್ಸು ಇದೆಯಲ್ಲಾ ಅದು ಸಾಮಾನ್ಯವಾದುದಲ್ಲ.. ತಟ್ಟನೆ ಎಲ್ಲರನ್ನೂ ಸೆಳೆದು ಬಿಡುತ್ತಿತ್ತು. ಭಾವಾನಾತ್ಮ ಚಿತ್ರಗಳಲ್ಲಿ ಆ ಕಣ್ಣುಗಳೇ ಹೀರೋ... ಸಾಹಸ ಸಿಂಹನಿಗಿಂತಲೂ ನನಗೆ ಹೆಚ್ಚು ಆಪ್ತವಾಗಿದ್ದು ಅಭಿನವ ಭಾರ್ಗವ ವಿಷ್ಣುವರ್ಧನ್. ಕರ್ಣ, ಮಲಯಮಾರುತ, ಒಂದಾಗಿ ಬಾಳು, ಬಂಧನ, ನೀ ಬರೆದ ಕಾದಂಬರಿ, ಲಾಲಿ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾವನಾತ್ಮಕ ಚಿತ್ರಗಳಲ್ಲಿನ ಯಾವುದೇ ಸನ್ನಿವೇಶ ಆಗಿರಲಿ, ಅವರ ಕಣ್ಣುಗಳು ಆ ದೃಶ್ಯಕ್ಕೆ ನೈಜತೆಯ ಸ್ಪರ್ಶ ನೀಡುತ್ತಿದ್ದವು. ಇತ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಹರಿಸುತ್ತಿದ್ದವು.
ಈಗ ೪೦-೫೦ ವಯೋಮಾನದ ಹೆಂಗಸರಲ್ಲಿ ಕೇಳಿ ನೋಡಿ.. ವಿಷ್ಣುವರ್ಧನ್ ಅವರ ನೆಚ್ಚಿನ ನಟ.. ಯಾಕೆಂದರೆ ಅವರ ಯುವ ವಯಸ್ಸಿನ ಕಾಲದಲ್ಲಿ ವಿಷ್ಣು ಅವರ ಮನಸ್ಸನ್ನು ಸೂರೆ ಮಾಡಿದ್ದರು. ಆ ಕಾರಣಕ್ಕಾಗಿಯೇ ಅವರು ಭಾರಿ ಸಂಖ್ಯೆಯಲ್ಲಿ ಮಹಿಲಾ ಅಭಿಮಾನಿಗಳನ್ನು ಹೊಂದಿದ್ದರು.
ಚಿತ್ರರಂಗದ ರಾಜಕೀಯಕ್ಕೆ ಸಿಕ್ಕಿ ನರಳಿದ್ದರೂ, ಮುಂದೊಂದು ಅದೇ ಚಿತ್ರೋದ್ಯಮದ ನಾಯಕತ್ವವನ್ನು ಹೊತ್ತುಕೊಳ್ಳುವಷ್ಟು ಬೆಳೆದಿದ್ದು ವಿಷ್ಣು ಅವರ ಸಾಧನೆ. ನಾಯಕತ್ವದ ಜವಬ್ದಾರಿ ಹೊತ್ತುಕೊಳ್ಳಿ ಎಂದಾಗ ವಿಷ್ಣು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. (ಅವರ ಆತ್ಮೀಯ ಮಿತ್ರ ಅಂಬರೀಷ್ ಇದ್ದರೆನ್ನಿ ಅದರ ಹೊರತಾಗಿ ಇನ್ನೂ ಹಲವು..! ).
ಅವರೊಬ್ಬ ಪರಿಪೂರ್ಣ ನಟ. ಖಂಡಿತ ಈ ಮಾತು ಅತಿಶಯೋಕ್ತಿ ಅಲ್ಲ. ತಮ್ಮ ಇತಿ ಮಿತಿಗಳನ್ನು ಅವರು ಚೆನ್ನಾಗಿ ತಿಳಿದಿದ್ದರು. ಅವರು ಚೆನ್ನಾಗಿ ಹಾಡದಿದ್ದರೂ, ಅವರು ಹಾಡಿರುವ ಹಾಡುಗಳು ಜನಪ್ರಿಯವಾಗಿದ್ದವು. (ಪ್ರತೀ ಬಾರಿ ನಾನು ಅಭಿಮಾನಿಗಳಿಗಾಗಿ ಹಾಡುತ್ತಿರುವುದಾಗಿ ವಿಷ್ಣು ಹೇಳುತ್ತಿದ್ದರು). ಚಿತ್ರಗಳಲ್ಲಿ ನೃತ್ಯ ಮಾಡಲು ಬರದಿರುವುದು ಅವರ ಬಹು ದೊಡ್ಡ ಮಿತಿಯಾಗಿತ್ತು. ನೀವು ನೋಡಿ, ಅವರ ಚಿತ್ರಗಳಲ್ಲಿ ನೃತ್ಯ ಸನ್ನಿವೆಶಗಳು ಇದ್ದುದು ಬಹಳ ಕಡಿಮೆ. ಆಗಿನ ಕಾಲದಲ್ಲಿ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಹೆಚ್ಚು ಪ್ರಧಾನ್ಯತೆ ಇರಲಿಲ್ಲ. ಕನ್ನಡ ಸೇರಿದಂತೆ ಯಾವುದೇ ಚಿತ್ರರಂಗದ ಹಿರಿಯ ನಟರ ಚಿತ್ರಗಳನ್ನು ವೀಕ್ಷಿಸಿ. ಅಲ್ಲಿ ನೃತ್ಯಗಳೇ ಇಲ್ಲ. ಇದ್ದರೂ ಕಡಿಮೆ ಪ್ರಮಾಣದಲ್ಲಿ. ಆ ಕಾಲದಲ್ಲಿ ಮಹತ್ವ ಇದ್ದುದು ಅಭಿನಯಕ್ಕೆ ಮಾತ್ರ. ಅದರ ಹೊರತಾಗಿ ಅವರು ಪ್ರಾಯಶಃ ಚಲನಚಿತ್ರದಲ್ಲಿ ನಟನೆಗೆ ಬೇಕಾದ ಎಲ್ಲಾ ಅಂಶಗಳನ್ನು ಕರಗತಮಾಡಿಕೊಂಡಿದ್ದರು.
ಯಾಕೋ ಏನೋ ಅವರು ರಾಜಕೀಯದತ್ತ ಸುಳಿಯಲಿಲ್ಲ, ತಮ್ಮ ಸುತ್ತ ಅದು ಸುಳಿಯಲು ಯತ್ನಿಸಿದರೂ, ಸುತ್ತಲೂ ಬಲವಾದ ಬೇಲಿ ಹಾಕಿ ಅದರ ಸುಳಿವುವಿಕೆಯನ್ನು ತಡೆದರು. ಹಲವು ಪಕ್ಷಗಳು ರಾಜಕೀಯ ಅಖಾಡಕ್ಕೆ ಆಹ್ವಾನಿಸಿದರು. ಅವರಿಗೆ ವಿಷ್ಣು ನೀಡಿದ್ದು ನಗು ಮುಖದ ನಿರಾಕರಣೆ. ಈ ಕಾರಣಕ್ಕಾಗಿಯೇ ಅವರು ಎಲ್ಲರಿಗೂ ಇನ್ನಷ್ಟು ಇಷ್ಟವಾದದ್ದು. ಗೆಳೆಯ ಅಂಬಿಗಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದರೂ ಅಲ್ಲಿ ಸ್ನೇಹ ಬಿಟ್ಟು ರಾಜಕೀಯದ ವಾಸನೆ ಇರಲಿಲ್ಲ. ಗೆಳೆಯನ ಹೆಸರು ಹೇಳಿದರೇ ಹೊರತು, ಪಕ್ಷದ ಹೆಸರು ಹೇಳಲಿಲ್ಲ.
ಅವರ ಬಗ್ಗೆ ಬರೆಯ ಹೊರಟರೆ ಎಷ್ಟೂ ಬರೆಯಬಹುದು..... ಇನ್ನು ಬರೆಯಬೇಕು ಅನ್ನಿಸುತ್ತಿದೆ. ಮನಸ್ಸು ಭಾವುಕವಾದಾಗ ಮಾತು ಬರುವುದಿಲ್ಲ ಎಂದು ಹೇಳುತ್ತಾರೆ. ನನಗ್ಯಾಕೋ ಬರೆಯಲು ಕೈ ಮುಂದೆ ಹೋಗುತ್ತಿಲ್ಲ...
’ಕೆಲವು ವರ್ಷಗಳ ಹಿಂದೆ ವಿಷ್ಣು ನನಗೆ ಫೋನ್ ಮಾಡಿದ್ದರು. ಯಾಕೆ ಬಾಲು, ಇಲ್ಲಿ ಕಾಣಿಸ್ತಾ ಇಲ್ಲ, ಭಾರಿ ಬ್ಯುಸಿ ಅಂತೆ ನೀವು? ಅಂತ ಕೇಳಿದರು. ಹೀಗೆ ಹೀಗೆ(.....) ಅಂದೆ. ಏನೂ ಮಾತಾಡಬೇಡಿ. ನನ್ನ ಎಲ್ಲಾ ಚಿತ್ರಗಳಲ್ಲಿ ನೀವು ಹಾಡಬೇಕು. ನಿರ್ಮಾಪಕರೊಂದಿಗೆ ಒಪ್ಪಂದ (ಅಗ್ರಿಮೆಂಟ್) ಮಾಡುವಾಗಲೇ ನನ್ನ ಪಾತ್ರಕ್ಕೆ ಎಸ್.ಪಿ ಬಾಲಸುಬ್ರಮಣ್ಯಂ ಅವರಿಂದ ಹಾಡಿಸಬೇಕು ಎಂಬ ಷರತ್ತನ್ನು ಹಾಕುತ್ತೇನೆ. ನೀವು ಹಾಡಿದರೆ ಬಳಿಕ ನನಗಿರುವ ಕೆಲಸ ಶೇ ೨೫ರಷ್ಟು ಮಾತ್ರ ಅಂತ ವಿಷ್ಣು ಹೇಳಿದ್ದರು. ಪ್ರಾಯಶಃ ವಿಷ್ಣು ಅವರ ಹಾಡುಗಳಲ್ಲಿ ಶೇ ೯೯ ರಷ್ಟು ಹಾಡುಗಳನ್ನು ನಾನೇ ಹಾಡಿದ್ದೇನೆ. ಅಗ್ರಿಮೆಂಟ್ನಲ್ಲಿ ನನ್ನ ಪಾತ್ರಕ್ಕೆ ನನ್ನಿಂದಲೇ ಹಾಡಿಸಬೇಕು ಎಂದು ಷರತ್ತು ಹಾಕಿದ ಏಕೈಕ ಕಲಾವಿದ ವಿಷ್ಣವರ್ಧನ್. ಜೀವನದಲ್ಲಿ ನನಗೇ ಎರಡನೇ ಸಲ ಬಹು ದೊಡ್ಡ ಆಘಾತ ಆಗಿದ್ದು, ವಿಷ್ಣುವರ್ಧನ್ ಅವರು ಅಸ್ತಂಗತರಾಗಿದ್ದು ಎರಡನೇ ಆಘಾತ. ಈ ಹಿಂದೆ ನನ್ನ ಅಣ್ಣ ಮೃತಪಟ್ಟಾಗ ಮೊದಲ ಬಾರಿ ನನಗೆ ಭಾರಿ ಆಘಾತವಾಗಿತ್ತು. ವಿಷ್ಣು ಅವರು ನನ್ನ ಸಹೋದರನಂತೆ. ಹೀ ಈಸ್ ಎ ವಂಡರ್ಫುಲ್ ಹ್ಯೂಮನ್ ಬೀಯಿಂಗ್ ’ ಅಂತ ಹೇಳಿ ಎಸ್ಪಿಬಿ ಅದೇ ಕಾರ್ಯಕ್ರಮದಲ್ಲಿ ಕಂಬನಿ ಮಿಡಿದ್ದರು.
ಎಸ್ಪಿ ಅವರ ಮಾತನ್ನು ಕೇಳಿ ಮತ್ತೊಮ್ಮೆ ನನ್ನ ಕಣ್ಣು ತೋಯ್ದಿತು. ವಿಷ್ಣು ಅವರ ಸಾವು ಎಸ್ಪಿ ಅವರಿಗೆ ಮಾತ್ರವಲ್ಲ. ನನ್ನಂಥ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅವರು ಇಲ್ಲ ಅನ್ನೋದು ಎಷ್ಟು ಸತ್ಯನೋ ಅವರ ನೆನಪು ಶಾಶ್ವತ ಅನ್ನೋದು ಅಷ್ಟೇ ಸತ್ಯ.
ಶನಿವಾರ, ಅಕ್ಟೋಬರ್ 10, 2009
ಹೀಗೊಂದು ಗೆಳೆಯನ ಮಿಂಚಂಚೆ....
ಹರೆಯದ ಕೊರಳಿಗೆ 'MMS' ಪಾಶ |
ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ, ಹೆತ್ತವರಿಗಿಂತ ಹೆಚ್ಚು ನಂಬಿದ ತನ್ನ ಗೆಳೆಯನ ಇನ್ನೊಂದು ಮುಖ ನೋಡುವ ಹೊತ್ತಿಗೆ ಎಲ್ಲವೂ ಕೈ ಮೀರಿತ್ತು. ತಾನು ಪ್ರಿಯಕರನೊಂದಿಗೆ ಕಳೆದ ಆತ್ಮೀಯ, ಖಾಸಗಿ ಕ್ಷಣಗಳು ಮೊಬೈಲ್ ಫೋನ್ ಕ್ಯಾಮರಾಗಳಲ್ಲಿ ದಾಖಲಾಗಿದೆ ಎಂಬುದನ್ನು ಆ ಹುಡುಗಿ ಹೇಗೆ ತಾನೆ ಊಹಿಸಿಯಾಳು? ಪ್ರೀತಿಯ ಭ್ರಮೆಯ ಗುಳ್ಳೆ ಒಡೆಯಿತು. ರಾತ್ರಿ ಬೆಳಗಾಗುವುದರಲ್ಲಿ ಇನಿಯ ರಕ್ಕಸನಾಗಿ ಬದಲಾಗಿದ್ದ. ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದ ದೃಶ್ಯಗಳೇ ಸಾಕಾಗಿತ್ತು ಆತನಿಗೆ ಮಾಯಾಳನ್ನು ಹುರಿದು ಮುಕ್ಕಲು. ತನ್ನ ದುಷ್ಟ ಸ್ನೇಹಿತರ ದೈಹಿಕ ಆಸೆಯನ್ನು ತೀರಿಸದಿದ್ದರೆ ಎಂಎಂಎಸ್ ತುಣುಕು ಜಗಜ್ಜಾಹೀರಾಗುವುದು ಖಚಿತ ಎಂದು ರಾಕೇಶ್ ಬೆದರಿಸತೊಡಗಿದ. ತಾನು ಬಿದ್ದಿರುವ ಪ್ರಪಾತದ ಆಳ-ಅಗಲ ಅರ್ಥವಾಗುವುದರೊಳಗೆ ಮಾಯಾಳ ಮಾನ ಮಾರುಕಟ್ಟೆಯಲ್ಲಿ ಹರಾಜಾಗಿತ್ತು. ಮಾಯಾಳಂತಹ ಮುಗ್ಧ ಬಾಲಕಿಯರ ದುರಂತಗಾಥೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಳ್ಳಿ ಇರಲಿ, ಪಟ್ಟಣಗಳಿರಲಿ ಕೇಳಿ ಬರುತ್ತಿರುವ ಕಥೆ ಮಾತ್ರ ಒಂದೇ. ದೆಹಲಿ, ಮುಂಬೈ, ಅಹಮದಾಬಾದ್, ಕಟಕ್ ಹಾಗೂ ಆಲಪುಳ ನಗರಗಳು ಈಗಾಗಲೇ ಈ ರೀತಿಯ ಹಲವು ನಿದರ್ಶನಗಳಿಗೆ ಸಾಕ್ಷಿಯಾಗಿವೆ. ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಹದಿಹರೆಯದವರ ಮುಕ್ತ ಮನೋಭಾವವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನರರೂಪದ ರಾಕ್ಷಸರು 'ಕನಸಿನ ಲೋಕದ ರಾಜಕುಮಾರರ' ರೂಪದಲ್ಲಿ ಮುಗ್ಧ ಹುಡುಗಿಯರ ಬೇಟೆಯಲ್ಲಿ ತೊಡಗಿದ್ದಾರೆ. ಲೈಂಗಿಕ ದೌರ್ಜನ್ಯ, ಬೆದರಿಕೆ ಕಥನಗಳು ಅಡೆ-ತಡೆ ಇಲ್ಲದೇ ಸಾಗುತ್ತಿವೆ. ಆಧುನಿಕತೆಯ ವೈಭೋಗ ದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುತ್ತಿರುವ ಭಾರತ ಹದಿಹರೆಯದವರ ಪಾಲಿಗೆ, ಅವರೊಳಗಿನ ಸ್ವೇಚ್ಛಾಚಾರಿ ಮನೋಭಾವದ ಅಭಿವ್ಯಕ್ತಿಗೆ ಫಲವತ್ತಾದ ರಾಷ್ಟ್ರ. ವಿರುದ್ಧ ಲಿಂಗಿಗಳೊಂದಿಗಿನ ಒಡನಾಟಕ್ಕೆ ಈಗ ಯಾವ ಅಡೆ-ತಡೆಯೂ ಇಲ್ಲ. ತಮ್ಮೊಳಗಿನ ಆಸೆ, ಆಕಾಂಕ್ಷೆಗಳ ಅಭಿವ್ಯಕ್ತಿಗೆ ಸಂಪ್ರದಾಯಗಳ ಹಂಗಿಲ್ಲ. ಬದುಕನ್ನು ಅದರ ಸಮಗ್ರತೆಯಲ್ಲಿ ಸವಿಯುವ ಉತ್ಸಾಹಕ್ಕೆ ಲಂಗು-ಲಗಾಮಿಲ್ಲ. ಯೌವನದ ಈ ತಹತಹಿಕೆಯ ಬೆನ್ನಿಗೇ ಕಹಿ ಅನುಭವಗಳ ಸರಮಾಲೆಯೂ ಇದೆ. ಅವು ಈಗ ವಿಭಿನ್ನ ರೂಪಗಳಲ್ಲಿ ಪ್ರಕಟಗೊಂಡು ನಾಗರಿಕ ಸಮಾಜದ ನಿದ್ದೆಗೆಡಿಸುತ್ತಿವೆ. ಹೀಗೆ ಯೌವನದ ರಭಸಕ್ಕೆ ಸಿಲುಕಿ ದುರಂತ ಅಂತ್ಯ ಕಂಡ ಮುಗ್ಧ ಬದುಕುಗಳಲ್ಲಿ ಕಟಕ್ನ ಅಸೀಮಾ ಮೊಹಾಂತಿ ಕೂಡ ಒಬ್ಬಳು. ಅಸೀಮಾ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಆಕೆಯ ನಂಬಿಕೆದ್ರೋಹಿ ಪ್ರಿಯಕರ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯಗಳನ್ನು ಹಣಕ್ಕೋಸ್ಕರ ಮಾರಾಟ ಮಾಡುವುದರೊಂದಿಗೆ ಅಸೀಮಾಳ ದುರಂತ ಅಂತ್ಯದ ಪ್ರಥಮ ಅಧ್ಯಾಯ ಪ್ರಾರಂಭವಾಗುತ್ತದೆ. ತನ್ನ ಗೆಳೆಯನ ಮೇಲಿಟ್ಟಿದ್ದ ಅಪರಿಮಿತ ನಂಬಿಕೆಯೇ ಅಸೀಮಾಳ ಬದುಕಿಗೆ ಎರವಾಯಿತು. ತಾನು ಆರಾಧಿಸಿದ ವ್ಯಕ್ತಿ ಒಬ್ಬ 'ತಲೆ ಹಿಡುಕ' ಎಂಬ ಸಂಗತಿ ಅವಳಿಗೆ ತಿಳಿದೇ ಇರಲಿಲ್ಲ. ಆತನ ಕಸುಬೇ ಅಂಥದ್ದು. ಹೆಣ್ಣಿನ ಮನಸ್ಸು ಗೆಲ್ಲುವುದು, ದೈಹಿಕವಾಗಿ ಬಳಸಿಕೊಳ್ಳುವುದು, ಸಾಧ್ಯವಾದರೆ ಆ ಎಲ್ಲವನ್ನೂ ಚಿತ್ರೀಕರಿಸಿ ಸಿ.ಡಿ. ರೂಪದಲ್ಲಿ ಮಾರಾಟ ಮಾಡುವುದು ಆತನಿಗೆ ಕರತಲಾಮಲಕ. ದೈಹಿಕ ಅವಮಾನದ ಜೊತೆಗೆ ಮಾನಸಿಕ ಹಿಂಸೆಯನ್ನೂ ಅನುಭವಿಸಲು ಸಿದ್ಧಳಿಲ್ಲದ ಅಸೀಮಾ ಆತ್ಮಹತ್ಯೆಗೆ ಶರಣಾದಳು. ಸಮಾಜದ ಕಣ್ಣಲ್ಲಿ ಹೇಸಿಗೆಯಾಗಿ ಬದುಕುವುದಕ್ಕಿಂತ ಸಾವೇ ಅಸೀಮಾಳಿಗೆ ಆಕರ್ಷಕವಾಗಿ ಕಂಡಿರಬೇಕು. ಅಸೀಮಾಳ ಪ್ರಕರಣದಿಂದ ಇಡೀ ಒರಿಸ್ಸಾ ರಾಜ್ಯವೇ ತಲ್ಲಣಗೊಂಡಿತ್ತು. ಅಸೀಮಾಳ ಅಪ್ಪ ನೀಡಿದ ದೂರಿನ ಅನ್ವಯ ಕಟಕ್ ನಗರದ ಪೊಲೀಸರು ಅಸೀಮಾಳ ಸ್ನೇಹಿತ ಅಸ್ತಾರಂಗ್ ಸಾಹು ಅಲಿಯಾಸ್ ಪಿಣುವ ಹಾಗೂ ಆತನ ಜೊತೆಗಾರ ಸುಬ್ರತ್ ಪ್ರಧಾನ್ ಅಲಿಯಾಸ್ ಬಾಪಿ ಇಬ್ಬರನ್ನೂ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟ ಪ್ರಕರಣದ ಅಡಿಯಲ್ಲಿ ಬಂಧಿಸಿ, ತನಿಖೆಗೊಳಪಡಿಸಿದರು. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಐದು ಮಂದಿ ಈಗ ತಲೆಮರೆಸಿಕೊಂಡಿದ್ದಾರೆ. ಪಿಣುವ ಹಾಗೂ ಆತನ ಸಹಚರರು ಕೋಣೆಯಲ್ಲಿ ಕ್ಯಾiರಾಗಳನ್ನು ಅಡಗಿಸಿಟ್ಟು ಅಸೀಮಾಳಿಗೆ ತಿಳಿಯದಂತೆ ಅಲ್ಲಿ ನಡೆಯುವ ರಾಸಲೀಲೆಗಳನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ನಮ್ಮಲ್ಲಿ ಬೇರು ಬಿಡುತ್ತಿರುವ ಈ ಎಂಎಂಎಸ್ ಸಂಸ್ಕೃತಿ ಮೊಟ್ಟ ಮೊದಲು ಬೆಳಕಿಗೆ ಬಂದದ್ದು ದೆಹಲಿ ಪಬ್ಲಿಕ್ ಸ್ಕೂಲ್ ಪ್ರಕರಣವೊಂದರಲ್ಲಿ. ಅಂದಿನಿಂದ ಇಂದಿನವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಫೋನ್ಗಳು, ಇಂಟರ್ನೆಟ್ಗಳ ಮೂಲಕ ಈ ಪಿಡುಗು ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿದೆ. ಇದಕ್ಕೆ ಯಾರನ್ನು ಹೊಣೆಯಾಗಿಸುವುದು? ಬಹುತೇಕ ಪೋಷಕರು ಹಾಗೂ ಆಪ್ತ ಸಮಾಲೋಚಕರು ಹೇಳುವಂತೆ ಇಂಥ ಸೂಕ್ಷ್ಮ ವಿಚಾರಗಳಲ್ಲಿ ಹುಡುಗಿಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. "ಇಂದಿನ ಯುವ ಸಮುದಾಯದಲ್ಲಿ ಈ ಎಂಎಂಎಸ್ ಸಂಸ್ಕೃತಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಬಗೆಯ ಗೋಮುಖ ವ್ಯಾಘ್ರಗಳು ಎಲ್ಲಡೆಯೂ ಇವೆ. ಆದ್ದರಿಂದ ಒಬ್ಬ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸುವ ಮೊದಲು ಹುಡುಗಿಯರು ಸಾಕಷ್ಟು ಎಚ್ಚರಿಕೆ ವಹಿಸಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅಹಮದಾಬಾದ್ ಮೂಲದ ಮನಶ್ಯಾಸ್ತ್ರಜ್ಞ ಡಾ. ಹನ್ಸಾಲ್ ಭಚೇಚ್. "ಇಂದಿನ ಯುವ ಜನಾಂಗದಲ್ಲಿ ಲೈಂಗಿಕತೆಯ ಕುರಿತ ಮಡಿವಂತಿಕೆ ಕಡಿಮೆಯಾಗುತ್ತಿದೆ. ದುರಂತವೆಂದರೆ, ಹುಡುಗಿಯರೇ ಈ ಪ್ರವೃತ್ತಿಯ ಮೊದಲ ಬಲಿಪಶುಗಳು" ಎನ್ನುತ್ತಾರೆ ಒರಿಸ್ಸಾದ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲ ಪ್ರೊ. ರಬೀಂದ್ರ ಕುಮಾರ್. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? "ಒಬ್ಬ ಪೋಷಕನಾಗಿ ನಾನು ಹೇಳುವುದೆಂದರೆ, ಅಂತಹ ಅವಘಡಗಳಿಗೆ ಹುಡುಗಿಯೇ ಹೊಣೆ. ಈ ಆಧುನಿಕ ಸಮಾಜದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಎಲ್ಲಾ ಹಕ್ಕು ಹುಡುಗಿಯರಿಗಿದೆ. ಆದರೆ, ಪ್ರೀತಿಯ ನೆಪದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೈಹಿಕ ಸಂಬಂಧವಿಟ್ಟುಕೊಳ್ಳುವುದು ಆರೋಗ್ಯಕರ ಪ್ರವೃತ್ತಿಯಲ್ಲ. ಅಂತಹ ಬೇಜವಾಬ್ದಾರಿ ನಡವಳಿಕೆ ಇಡೀ ಬದುಕನ್ನೇ ನಾಶಗೊಳಿಸಬಹುದು" ಎಂದು ಕಿವಿಮಾತು ಹೇಳುತ್ತಾರೆ ರಬೀಂದ್ರ ಕುಮಾರ್. ಆದರೆ ಈ ಮೇಲಿನ ಮಾತುಗಳಿಗೆ ನಮ್ರತಾ (ಹೆಸರು ಬದಲಾಯಿಸಲಾಗಿದೆ) ಪ್ರಕರಣ ವ್ಯತಿರಿಕ್ತವಾಗಿದೆ. ಗುಜರಾತ್ನ ಮೆಹಸಾನ ಜಿಲ್ಲೆಯ ಈ ಹುಡುಗಿ ವಿಷ್ಣು ಚೌಧುರಿ ಎಂಬ ಯುವಕನ ಮೋಹಪಾಶಕ್ಕೆ ಸಿಲುಕಿದಳು. ಒಮ್ಮೆ ಆಕೆಯನ್ನು ಹೊಟೇಲ್ ರೂಮಿಗೆ ಕರೆದೊಯ್ದ ವಿಷ್ಣು ಆಕೆಯ ಮೇಲೆ ಬಲಾತ್ಕಾರವೆಸಗಿದ. ತನ್ನ ಹೀನ ಕೃತ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿದು ನಮ್ರತಾಳನ್ನು ಬ್ಲ್ಯಾಕ್ಮೇಲ್ ಮಾಡತೊಡಗಿದ. ತೀವ್ರ ಆಘಾತಕ್ಕೊಳಗಾದ ನಮ್ರತಾ ಈ ಕುರಿತು ಪೊಲೀಸರಿಗೆ ದೂರು ನೀಡಿದಳು. ಇದರಿಂದ ಕೆರಳಿದ ವಿಷ್ಣು ಆ ಎಂಎಂಎಸ್ ತುಣುಕುಗಳನ್ನು ಬಹಿರಂಗಗೊಳಿಸಿ ಸೇಡು ತೀರಿಸಿಕೊಂಡ. ನಮ್ಮಲ್ಲಿರುವ ಕೌಟುಂಬಿಕ ಹಾಗೂ ಸಮಾಜಿಕ ಸಂದರ್ಭಗಳು ಹೇಗಿವೆ ಎಂದರೆ ಬೆಳವಣಿಗೆಯ ಹಂತದಲ್ಲಿರುವ ಹೆಣ್ಣು ಮಗಳು ತಾವು ಪ್ರೀತಿಸುವ ವ್ಯಕ್ತಿಯನ್ನು ಪೂರ್ವಾಪರ ಯೋಚಿಸದೇ ನಂಬಿ ಬಿಡುವುದೇ ಜಾಸ್ತಿ. ಆ ನಂಬಿಕೆ ಎಷ್ಟರ ಮಟ್ಟಿಗಿರುತ್ತದೆ ಎಂದರೆ ತನ್ನ ಇನಿಯನ ಎಲ್ಲಾ ಬೇಡಿಕೆಗಳಿಗೂ ಈ ಮುಗ್ಧ ಮನಸ್ಸಿನ ಹುಡುಗಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಗೆ ನೀಡುತ್ತಾರೆ. ಅದು ಒಂದು ಹಂತದವರೆಗೆ ಆ ಹುಡುಗಿಯರಲ್ಲಿ ಸ್ವತಂತ್ರ ಭಾವನೆಯನ್ನು ಮೂಡಿಸುವುದು ನಿಜವಾದರೂ ಬಹಳಷ್ಟು ಸಂದರ್ಭಗಳಲ್ಲಿ ಈ ಹುಡುಗಿಯರು ತಮ್ಮ ಪ್ರಿಯಕರನ ಕಾಮ ಪಿಪಾಸುತನಕ್ಕೆ ಬಲಿಯಾಗುವುದೇ ಜಾಸ್ತಿ. ಮುಂಬೈ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಪ್ರಕರಣ ಇದಕ್ಕೆ ಉತ್ತಮ ಉದಾಹರಣೆ. ಭಾಯಂದರ್ನ ಈ ಹುಡುಗಿ ರಿತೇಶ್ ಪಾಟೀಲ್ ಎಂಬ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿದ ಪರಾಗ್ ಮಾತ್ರೆ ಎಂಬ 'ನಾಜೂಕಯ್ಯ'ನ ಮೋಹಪಾಶಕ್ಕೆ ಸಿಲುಕಿದಾಗ ಮುಂದೇನಾಗುವುದು ಎಂಬುದರ ಪರಿವೆಯೇ ಇರಲಿಲ್ಲ. ಪ್ರೀತಿ ಮಾಡಿದ ಅಪರಾಧಕ್ಕಾಗಿ ಆಕೆ ಮೊದಲು ತನ್ನ ಪ್ರಿಯಕರನ ಕಾಮದಾಹಕ್ಕೆ ಬಲಿಯಾಗಿದ್ದು ಸಾಲದೆಂಬಂತೆ ಆತನ ಸ್ನೇಹಿತರಿಂದಲೂ ಅತ್ಯಾಚಾರಕ್ಕೊಳಗಾಗಬೇಕಾಯಿತು. ಈ ಕರ್ಮಕಾಂಡವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದ ಪರಾಗ್ ಈ ವಿಚಾರವನ್ನು ಎಲ್ಲಿಯಾದರೂ ಬಾಯಿ ಬಿಟ್ಟರೆ ಎಂಎಂಎಸ್ನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದ. ಕ್ರಮೇಣ ಆ ಎಂಎಂಎಸ್ ಪರಾಗ್ನ ಸಹೋದರ ಪಂಕಜ್ ಮೊಬೈಲ್ಗೆ ರವಾನೆಯಾಯಿತು. ಈಗ ಆ ಹುಡುಗಿಯನ್ನು ಬ್ಲ್ಯಾಕ್ಮೇಲ್ ಮಾಡುವ ಪಾಳಿ ಪಂಕಜ್ನದ್ದು. ಆಕೆಯನ್ನು ಅದೇ ಹೊಟೇಲ್ಗೆ ಬರಹೇಳಲಾಯಿತು. ಎಲ್ಲಿ ಎಂಎಂಎಸ್ಗಳು ಬಹಿರಂಗಗೊಂಡು ತನ್ನ ಮಾನ ಹರಾಜಾಗುತ್ತದೋ ಎಂದು ಹೆದರುತ್ತಾ ಅಲ್ಲಿಗೆ ಹೋದ ಹುಡುಗಿ ಮತ್ತೊಮ್ಮೆ ಪಂಕಜ್ ಹಾಗೂ ಆತನ ಸ್ನೇಹಿತರ ಕಾಮದಾಹಕ್ಕೆ ಬಳಕೆಯಾಗಬೇಕಾಯಿತು. ಹೀಗೆ ಸರಣಿ ಅತ್ಯಾಚಾರಗಳಿಂದ ಮಾನಸಿಕವಾಗಿ ಕುಗ್ಗಿ ಹೋದ ಹುಡುಗಿ ಅಂತಿಮವಾಗಿ ಕುಟುಂಬದವರಲ್ಲಿ ತನ್ನ ಅಳಲು ತೋಡಿಕೊಂಡಳು. ಈ ಪ್ರಕರಣ ಮಿರಾ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಖ್ಯಾತ ಲೈಂಗಿಕ ವಿಜ್ಞಾನಿ (ಸೆಕ್ಸಾಲಜಿಸ್ಟ್) ಡಾ. ಪರಸ್ ಶಾ ಪ್ರಕಾರ ಇಂದು ಹುಡುಗಿಯರು ತುಂಬಾ ಸುಲಭವಾಗಿ ಕಾಮಪಿಪಾಸುಗಳ ಬಲೆಗೆ ಬೀಳುತ್ತಾರೆ. "ಎಂಎಂಎಸ್ ಸೌಲಭ್ಯವನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಹೇಗೆ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ನಿದರ್ಶನ. ಇಂತಹ ಕೃತ್ಯಗಳಿಗೆ ಕೈಹಾಕುವ ಹುಡುಗರಿಗೆ ಹಣ ಸಂಪಾದನೆಯೊಂದೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಪರಸ್ಪರ ಒಪ್ಪಿಗೆಯಿಂದಲೂ ಇದು ನಡೆಯುತ್ತದೆ. ಹುಡುಗಿಯರು ತಮ್ಮ ಗೆಳೆಯನ ಮೇಲೆ ಕುರುಡು ನಂಬಿಕೆ ಇಟ್ಟಾಗ ಇವೆಲ್ಲಾ ಘಟಿಸುತ್ತವೆ" ಎನ್ನುತ್ತಾರೆ ಡಾ. ಪರಸ್ ಶಾ. ಎಂಎಂಎಸ್ ಬಲಿಪಶು ಅಸೀಮಾ ಮೊಹಾಂತಿ ಆತ್ಮಹತ್ಯೆ ಮಾಡಿಕೊಂಡ ನಂತರ ಅದೇ ರೀತಿಯ ಮತ್ತೊಂದು ಪ್ರಕರಣ ಕಟಕ್ ಜಿಲ್ಲೆಯಲ್ಲಿ ೨೦೦೮ ಅಕ್ಟೋಬರ್ ೧೫ರಂದು ಬೆಳಕಿಗೆ ಬಂದಿತ್ತು. ನಿಯಾಲಿ ಗ್ರಾಮದ ಅಮಿನಾ (ಹೆಸರು ಬದಲಿಸಲಾಗಿದೆ) ಕಲಪಾಂಚಣ ಗ್ರಾಮದ ಶೇಖ್ ಅಬ್ದುಲ್ ಎಂಬ ವ್ಯಕ್ತಿಯೊಬ್ಬನನ್ನು ಪ್ರೀತಿಸಿದ್ದಳು. ಎಲ್ಲಾ ತಲೆಮಾಸಿದ ಹುಡುಗರಂತೆ ಶೇಖ್ ಅಬ್ದಲ್ಲಾ ಕೂಡ ತಮ್ಮಿಬ್ಬರ ನಡುವಿನ ರಾಸಲೀಲೆಗಳನ್ನು ಸಿ.ಡಿ ಮಾಡಿ 'ಓiಚಿಟiಘಿಘಿಘಿ' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ. ಅಸೀಮಾಳಂತೆ ದುಡುಕಿನ ನಿರ್ಧಾರ ಕೈಗೊಳ್ಳದ ಅಮೀನ ಮುಂದಿನ ಪರಿಣಾಮಗಳನ್ನು ಧೈರ್ಯದಿಂದ ಎದುರಿಸಿದಳು. ಆದರೆ ಆ ಧೈರ್ಯ ಎಷ್ಟು ಜನರಿಗಿದ್ದೀತು? ಈ ವರ್ಷದ ಪ್ರಾರಂಭದಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಾಗರಿಕರಲ್ಲಿ ಆತಂಕದ ಅಲೆ ಸೃಷ್ಟಿಸಿತ್ತು. ಆಲಪುಳ ಜಿಲ್ಲೆಯ ಅಂಬಲಪುಳ ನಗರದ ಶಾಲೆಯೊಂದರ ಮೂವರು ಹುಡುಗಿಯರು ತರಗತಿಯ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದ್ದಂತೆಯೇ ಒಂದೊಂದೇ ಸಂಗತಿ ಹೊರ ಬೀಳತೊಡಗಿದ್ದವು. ತಮ್ಮ ಖಾಸಗಿ ಡೈರಿಯಲ್ಲಿ ಆ ಹುಡುಗಿಯರು ತಮ್ಮದೇ ತರಗತಿಯ ಕೆಲವು ಹುಡುಗರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು ಎಂಬುದನ್ನು ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಆ ಹುಡುಗಿಯರು ದೈಹಿಕ ಸಂಪರ್ಕಕ್ಕೆ ಒಳಗಾಗಿದ್ದು ಸಾಬೀತಾಗಿತ್ತು. ಆ ಡೈರಿಗಳನ್ನು ಆಧರಿಸಿಯೇ ಇಂದು ತನಿಖೆ ನಡೆಯುತ್ತಿದೆ. ವಿಷಯ ಅಷ್ಟೇ ಆಗಿದ್ದರೆ ಇದ್ಯಾವುದೋ ವಿಫಲ ಪ್ರೇಮದ ಕತೆ ಎಂದು ಸುಮ್ಮನಿದ್ದುಬಿಡಬಹುದು. ಆದರೆ, ಆ ನಂತರ ಬೆಳಕಿಗೆ ಬಂದ ಕೆಲವು ಸಂಗತಿಗಳು ನಿಜಕ್ಕೂ ಕಳವಳಕಾರಿಯಾಗಿವೆ. ಪ್ರೀತಿಯ ನಾಟಕವಾಡಿದ್ದ ಹುಡುಗರು ಹುಡುಗಿಯರ ಗಮನಕ್ಕೆ ಬಾರದಂತೆ ಅವರ ನಡುವಿನ ಖಾಸಗಿ ಕ್ಷಣಗಳನ್ನು ಮೊಬೈಲ್ ಫೋನ್ಗಳಲ್ಲಿ ಸೆರೆ ಹಿಡಿದಿದ್ದರು. ಅದನ್ನು ಬಳಸಿಕೊಂಡೇ ಆ ಹುಡುಗಿಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಮಾನಕ್ಕೆ ಅಂಜುವ ಮಧ್ಯಮ ವರ್ಗದಿಂದ ಬಂದ ಈ ಹುಡುಗಿಯರು ಆತ್ಮಹತ್ಯೆಗೆ ಮೊರೆ ಹೋಗುವ ಮೂಲಕ ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದರು. ಈ ಘಟನೆಯಿಂದ ಇಡೀ ಕೇರಳವೇ ತತ್ತರಿಸಿತ್ತು. ಮಾತ್ರವಲ್ಲ ಹೆಣ್ಣು ಮಕ್ಕಳ ಪೋಷಕರು ಆತಂಕದಿಂದ ನಿದ್ದೆಗೆಡುವಂತಾಗಿತ್ತು. ಬಹುತೇಕ ಮಂದಿ ಈ ಎಲ್ಲಾ ಸಮಸ್ಯೆಗಳಿಗೆ ಹುಡುಗಿಯರ ಪೋಷಕರ ಕಡೆ ಬೊಟ್ಟು ಮಾಡುತ್ತಾರೆ. "ಮೊದಲನೆಯದಾಗಿ ಪ್ರತಿ ತಂದೆ-ತಾಯಿಯೂ ತಮ್ಮ ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಆಗ ಮಕ್ಕಳಿಗೂ ತಮ್ಮ ತವಕ-ತಲ್ಲಣಗಳನ್ನು ತಂದೆ-ತಾಯಿಗಳೊಂದಿಗೆ ಹಂಚಿಕೊಳ್ಳಲು ಅವಕಾಶವಾಗುತ್ತದೆ. ಅದರಲ್ಲೂ ಇಂತಹ ಸಂದರ್ಭಗಳಲ್ಲಿ ತಾಯಿಯ ಪಾತ್ರ ಮಹತ್ವದ್ದು" ಎಂಬ ಅಭಿಪ್ರಾಯ ಬೆಂಗಳೂರಿನ ಗೃಹಿಣಿ ಉಷಾ ಕುಮಾರಿ ಅವರದ್ದು. ಅವರ ಪುತ್ರಿ ಈಗ ಪತ್ರಿಕೋದ್ಯಮ ವಿದ್ಯಾರ್ಥಿನಿ. ಜೊತೆಗೆ ಇಂದಿನ ಯುವ ಜನಾಂಗದ ಎದುರಿಗಿರುವ ಆಯ್ಕೆಗಳು, ಅವರ ಸುತ್ತ-ಮುತ್ತಲಿನ ವಾತಾವರಣ ಉಷಾ ರೀತಿಯ ಬಹಳಷ್ಟು ಪೋಷಕರನ್ನು ಆತಂಕದ ಮಡುವಿಗೆ ತಳ್ಳಿದೆ. "ನಿಜಕ್ಕೂ ನನಗೆ ಆತಂಕವಾಗುತ್ತದೆ. ನಮ್ಮ ಖಾಸಗಿ ಕ್ಷಣಗಳನ್ನ ಅಪಹರಿಸುತ್ತಿರುವ ಮಲ್ಟಿಮೀಡಿಯಾಗಳು, ಶಾಲೆ-ಕಾಲೇಜುಗಳಲ್ಲಿ ಅವರು ಒಡನಾಡುವ ಸ್ನೇಹಿತರು, ಆರ್ಕುಟ್, ಫೇಸ್ಬುಕ್ ರೀತಿಯ ಅಂತರ್ಜಾಲ ತಾಣಗಳು ಎಲ್ಲವೂ ಈ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ. ಮಕ್ಕಳ ಸ್ನೇಹಿತರ ಮೇಲೆ ಒಂದು ಕಣ್ಣಿಟ್ಟಿರುವುದು ಅತ್ಯವಶ್ಯಕ" ಎನ್ನುತ್ತಾರೆ ಉಷಾ ಕುಮಾರಿ. ಅಹಮದಾಬಾದ್ನ ಹುಡುಗಿ ಬಿಜಲ್ ಜೋಷಿಗೆ ತನ್ನ ಪ್ರಿಯಕರ ಸಜಾಲ್ ಜೈನ್ ಒಬ್ಬ ವಿವಾಹಿತ ಎಂಬ ಸಂಗತಿಯೇ ತಿಳಿದಿರಲಿಲ್ಲ. ೨೦೦೩ ಡಿಸೆಂಬರ್ ೩೧ರಂದು ಹೊಸ ವರ್ಷದ ಸಂಭ್ರಮಾಚರಣೆಗೆಂದು ತನ್ನ ಗೆಳೆಯನೊಂದಿಗೆ ಹೋಗುವವರೆಗೂ ಬಿಜಲ್ ಮನದಲ್ಲಿ ತನ್ನ ಗೆಳೆಯನ ಕುರಿತು ಕಿಂಚಿತ್ತೂ ಅನುಮಾನವಿರಲಿಲ್ಲ. ಗೆಳೆಯನನ್ನು ನಂಬಿ ಸಮೀಪದ ಹೊಟೇಲ್ಗೆ ಹೋದ ಬಿಜಲ್ ಮೇಲೆ ಸಜಾಲ್ ಹಾಗೂ ಆತನ ಸ್ನೇಹಿತ ಪಡೆ ಅತ್ಯಂತ ಅಮಾನುಷವಾಗಿ ಅತ್ಯಾಚಾರವೆಸಗಿತು. ಮಾತ್ರವಲ್ಲ ಚಿತ್ರ-ವಿಚಿತ್ರ ದೈಹಿಕ ಹಿಂಸೆಗಳಿಗೂ ಅವಳನ್ನು ಗುರಿ ಮಾಡಲಾಯಿತು. ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಮನನೊಂದ ಬಿಜಲ್ ೨೦೦೪ ಜನವರಿ ೭ರಂದು ಆತ್ಮಹತ್ಯೆ ಮಾಡಿಕೊಂಡಳು. ಬೆಂಗಳೂರಿನ ನಿಮ್ಹಾನ್ಸ್ನ ಮನೋವೈದ್ಯ ಡಾ.ಬಿ.ಎನ್. ಗಂಗಾಧರ್ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯ ಎನ್ನುತ್ತಾರೆ. "ಹದಿಹರೆಯ ಒಂದು ರೀತಿಯಲ್ಲಿ ಸಂಕ್ರಮಣ ಕಾಲ. ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಗೊಂದಲಗಳಿಗೆ ಮಕ್ಕಳು ಪಕ್ಕಾಗುತ್ತವೆ. ಮಕ್ಕಳು ಅನುಭವಿಸುವ ಮಾನಸಿಕ ತುಮುಲ ತಂದೆ-ತಾಯಿಯರ ಗಮನಕ್ಕೆ ಬಾರದೇ ಹೋಗಬಹುದು. ಮಕ್ಕಳಿಗೆ ಯಾವಾಗ, ಎಷ್ಟು ಸ್ವಾತಂತ್ರ್ಯ ನೀಡಬೇಕು ಎಂಬ ಸಾಮಾನ್ಯ ಪ್ರಜ್ಞೆ ಕೂಡ ನಮ್ಮ ಬಹಳಷ್ಟು ಪೋಷಕರಿಗೆ ಇರುವುದಿಲ್ಲ. ಇದು ಮುಂದೆ ಮಕ್ಕಳು ಹಾಗೂ ಪೊಷಕರ ನಡುವಿನ ಶೀತಲ ಸಮರವಾಗಿ ಮಾರ್ಪಾಟಾಗುತ್ತದೆ. ಜೊತೆಗೆ ಮಕ್ಕಳು ಹಾಗೂ ಅವರ ಸ್ನೇಹಿತ ಬಳಗದ ಮೇಲೆ ಒಂದು ಕಣ್ಣಿಡುವುದು ಪೋಷಕರ ಹೊಣೆ" ಎನ್ನುತ್ತಾರೆ ಡಾ. ಗಂಗಾಧರ್. ಆರ್ಥಿಕ ಜಾಗತೀಕರಣವೇ ಈ ಎಲ್ಲಾ ಹಳವಂಡಗಳಿಗೆ ಕಾರಣ ಎನ್ನುವುದು ಖ್ಯಾತ ಸಾಮಾಜಿಕ ಕಾರ್ಯಕರ್ತ ರಿತುಪರ್ಣ ಮೊಹಾಂತಿ ಅವರ ದೃಢ ನಿಲುವು. "ನಮ್ಮ ಪುರುಷ ಪ್ರಧಾನ ಸಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಕೇವಲ ಭೋಗದ ವಸ್ತುವಿನ ಸ್ಥಾನ. ಹೆಣ್ಣು ಅಂದರೆ ಮನಸ್ಸು ಬಂದಾಗ ಬಳಸಿಕೊಂಡು ಬಿಸಾಡುವ ಪದಾರ್ಥಗಳೆಂದೇ ಬಹುತೇಕ ಮಂದಿಯ ಭಾವನೆ. ಇಂಥ ಸನ್ನಿವೇಶದಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳು ಒಂದೊಂದು ಹೆಜ್ಜೆ ಇಡುವಾಗಲೂ ಸಾವಿರ ಬಾರಿ ಚಿಂತಿಸಬೇಕಾಗುತ್ತದೆ" ಎನ್ನುತ್ತಾರೆ ರಿತುಪರ್ಣ ಮೊಹಾಂತಿ. ಹೌದು, ಈಗ ಕಾಲ ಸಾಕಷ್ಟು ಬದಲಾಗಿದೆ. ನಮ್ಮ ಪೋಷಕರು ಇದ್ದ ಕಾಲಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ಇದೆ. ನಿವೃತ್ತ ಶಾಲಾ ಶಿಕ್ಷಕಿ ಹಾಗೂ ದೆಹಲಿ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಕ "ಮಾಧ್ಯಮಗಳಿಗೂ ಈ ವಿಚಾರಗಳ ಕುರಿತು ಇನ್ನಿಲ್ಲದ ಕುತೂಹಲ ಹಾಗೂ ಆಸಕ್ತಿ. ಆದರೆ, ಹುಡುಗ ಹಾಗೂ ಹುಡುಗಿಯರನ್ನು ಮುಕ್ತವಾಗಿ ಬೆರೆಯಲು ಬಿಟ್ಟು, ಅವರಲ್ಲಾಗುವ ದೈಹಿಕ ಹಾಗೂ ಮಾನಸಿಕ ಗೊಂದಲಗಳನ್ನು ಒಪ್ಪಿಕೊಳ್ಳದಿರುವುದು ಸರಿಯಲ್ಲ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಹಂಚಿಕೊಳ್ಳುವ ಅವಕಾಶ ಪ್ರತಿಯೊಬ್ಬ ಹುಡುಗಿಗೂ, ಹುಡುಗನಿಗೂ ಇರಬೇಕು. ಆಗ ಮಾತ್ರ ಈ ರೀತಿಯ ಪ್ರಕರಣಗಳು ತಹಬಂದಿಗೆ ಬರುತ್ತವೆ" ಎನ್ನುತ್ತಾರೆ ಕಿರಣ್ ಮೆಹ್ತಾ. ನಮ್ಮ ಸಮಾಜದ ದುರಂತವೆಂದರೆ, ಯುವ ಮನಸ್ಸುಗಳು ಸಮಸ್ಯೆಗಳ ಕೂಪಕ್ಕೆ ಬಿದ್ದು ಬಳಲಿ, ಇಂತಹ ಅನಾಹುತಗಳಾದಾಗ ಮಾತ್ರವೇ ನಮಗೆ ಜ್ಞಾನೋದಯವಾಗುವುದು. ಆದ್ದರಿಂದಲೇ ಇಂತಹ ಬಹಳಷ್ಟು ಸಮಸ್ಯೆಗಳಿಗೆ ನಮ್ಮಲ್ಲಿ ಇನ್ನೂ ಉತ್ತರ ದೊರೆಕಿಲ್ಲ. |
ಮಂಗಳವಾರ, ಸೆಪ್ಟೆಂಬರ್ 29, 2009
ಅನುಭವಿ ಬ್ಲಾಗರ್ಗಳ ಅನಾಮಿಕ ಬ್ಲಾಗುಗಳು
ಬ್ಲಾಗ್ಲೋಕದಲ್ಲಿ ದಿನಕ್ಕೊಂದರಂತೆ ಅನಾಮಿಕ ಬ್ಲಾಗುಗಳು ತಲೆ ಎತ್ತುತ್ತಿವೆ. ಒಂದರ್ಥದಲ್ಲಿ ಇವೂ ಲೋಕದ ಮಗ್ಗುಲ ಮುಳ್ಳುಗಳು. ಇವುಗಳ ಕುರಿತು ಚರ್ಚೆಯೂ ಆರಂಭವಾಗಿದೆ. ಅಣಕವೆಂದರೆ ಈ ಚರ್ಚೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದೂ ಅವರೆ!.
ಅತಿ ಹೆಚ್ಚು ಹಿಟ್ಟು ಗಳಿಸುವ ಬ್ಲಾಗುಗಳೂ ಇವುಗಳೇ. ಅತೀ ಹೆಚ್ಚು ಪ್ರತಿಕ್ರಿಯೆಗಳು ಪಡೆಯುವುದೂ ಇವುಗಳೇ. ಕಾಮೆಂಟ್ ಬರೆಯುವವರೂ ಅನಾಮಿಕರೇ.
'ಅನಾಮಿಕತೆ’ ಎನ್ನುವುದೇ ಹಾಗೆ. ಜನರಲ್ಲಿ ಸಹಜ ಕುತೂಹಲವನ್ನು ಸೃಷ್ಟಿಸುವ ಶಕ್ತಿ ಈ ಐದಕ್ಷರದ ಪದಕ್ಕೆ ಇದೆ. ಈ ಅನಾಮಿಕ ಯಾರು? ಎಂದು ಹುಡುವುದಕ್ಕೆ ಯಾರೂ ಹೋಗುವುದಿಲ್ಲವಾದರೂ ಅನಾಮಿಕ ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೆ. ಅನಾಮಿಕತೆ ವ್ಯಕ್ತಿಗೂ ಕೂಡ ಹೆಚ್ಚಿನ ಸ್ವತಂತ್ರತೆಯನ್ನು ನೀಡುತ್ತದೆ. ಹೆಸರು ಹೇಳಿಕೊಂಡು ಬರೆಯಲಾರದ ಅಥವಾ ಹೇಳಲಾರದ ವಿಚಾರವನ್ನು ನಿರ್ಭಿಡೆಯಿಂದ ಹೇಳುತ್ತಾರೆ ಅಥವಾ ಬರೆಯುತ್ತಾರೆ. ಅನುಭವಿ ಬ್ಲಾಗರ್ಗಳು ತಮ್ಮ ಅನಾಮಿಕ ಬ್ಲಾಗುಗಳಲ್ಲಿ ಬರೆಯುತ್ತಿರುವುದೂ ಇದನ್ನೇ.
ಬ್ಲಾಗ್ ಎಂಬುದು ಒಬ್ಬ ವ್ಯಕ್ತಿಯ ಮುಖವಾಣಿ. ರಾಜಕೀಯ ಪಕ್ಷ, ಸಂಘಟನೆಗಳು ಅದರದ್ದೇ ಆದ ಮುಖವಾಣಿಯನ್ನು ಹೊಂದಿರುವಂತೆ, ಆಯಾ ವ್ಯಕ್ತಿಗಳು ತಮ್ಮ ಅಭಿಪ್ರಾಯ, ಸಿದ್ಧಾಂತಗಳನ್ನು ಬ್ಲಾಗುಗಳ ಮೂಲಕ ತೆರೆದಿಡುತ್ತಾರೆ. (ಇನ್ನೊಬ್ಬರ ಮೇಲೆ ಹೇರುತ್ತಾರೆ.)
ಅನಾಮಿಕ ಬ್ಲಾಗರ್ಗಳು ಮಾಡುತ್ತಿರುವುದೂ ಅದನ್ನೇ. ತಮಗೆ ಯಾವುದು ಹಿತವಾಗಿಲ್ಲವೋ ಅದರ ವಿರುದ್ಧ ಅಥವಾ ಆ ವ್ಯಕ್ತಿಯ ವಿರುದ್ಧ ಒಂದು ಲೇಖನ ಬರೆಯುತ್ತಾರೆ. ಅದಕ್ಕೊಂದಿಷ್ಟು ಹಿಟ್ಟುಗಳು. ಲೇಖನವನ್ನು ಮೆಚ್ಚಿ ಕೆಲವರು ಪ್ರತಿಕ್ರಿಯೆ ಬರೆದರೆ ಇನ್ನೊಂದಿಷ್ಟು ಜನ ಖಾರವಾಗಿ ಪ್ರತಿಕ್ರಿಯೆ ಬರೆಯುತ್ತಾರೆ(ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಬ್ಲಾಗರುಗಳೂ ಇದ್ದಾರೆ.)
ಅನಾಮಿಕ ಬ್ಲಾಗುಗಳಲ್ಲಿ ವಿಮರ್ಶಕರೆಲ್ಲಾ ವಿಮರ್ಶಕಿಗಳಾಗುತ್ತಾರೆ. ಒಬ್ಬರೇ ನಡೆಸುತ್ತಿದ್ದರೂ ನಮ್ಮದೊಂದು ತಂಡವಿದೆ ಎಂದು ಹೇಳಿಕೊಳ್ಳುತ್ತಾರೆ.
ಪ್ರತಿ ಕ್ಷೇತದಲ್ಲೂ ಇಂತಹ ಬ್ಲಾಗರುಗಳಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲಿ , ಸಾಹಿತ್ಯ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅನಾಮಿಕರ ಬ್ಲಾಗುಗಳು ಇವೆ. ಈ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುವ ಚರ್ಚೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಕೇವಲ ಆಯಾ ಕ್ಷೇತ್ರದವರಿಗೆ ಮಾತ್ರ ಗೊತ್ತಿರುತ್ತದೆ.
ಉದಾಹರಣೆಗೆ ಮಾಧ್ಯಮ ಕ್ಷೇತ್ರವನ್ನು ತೆಗೆದುಕೊಂಡಾಗ, ಮಾಧ್ಯಮ ಮಂದಿಯ ಅನಾಮಿಕ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಕೇವಲ ಆ ಕ್ಷೇತ್ರದವರಿಗೆ ಮಾತ್ರ ಅರಿವಿದೆ. ಸಾಮಾನ್ಯ ಜನರಿಗೆ ಅಥವಾ ಇತರ ಕ್ಷೇತ್ರದವರಿಗೆ ಇದರ ಬಗ್ಗೆ ತಿಳಿದಿಲ್ಲ. ಇದು ಈ ಬ್ಲಾಗುಗಳ ಬಹು ದೊಡ್ಡ ಮಿತಿ. ಅವರ ಉದ್ದೇಶವೂ ಅಷ್ಟೇ ಇರುತ್ತದೆ. ಆ ಕ್ಷೇತ್ರದವರಿಗೆ ಮಾತ್ರ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದು.
ಈ ಅನಾಮಿಕರನ್ನು ಕಂಡು ಹಿಡಿಯುವುದು ಕಷ್ಟದ ವಿಚಾರವೇನಲ್ಲ. ಅದಕ್ಕೆ ಒಂದಿಷ್ಟು ಸಮಯ ವ್ಯಯಿಸಿ ತಾಂತ್ರಿಕ ಶ್ರಮ ಹಾಕಿದರೆ ಆಯಿತು. ಆದರೆ ಅದನ್ನು ಮಾಡುವ ತಾಳ್ಮೆಯೂ ಅಗತ್ಯತೆಯೂ ಯಾರಿಗೂ ಇಲ್ಲ. ಯಾರಿಗೆ ಏನು ತೋಚತ್ತೋ ಅದನ್ನು ಹೇಳಲು ಬರೆಯಲು ಅವರು ಸ್ವತಂತ್ರರು. ಅದು ಅನಾಮಿಕರಾಗಿ ಬರೆದರೂ ಹೆಸರು ಹೇಳಿಕೊಂಡು ಬರೆದರೂ ವ್ಯತ್ಯಾಸವಿಲ್ಲ. ಈ ಬ್ಲಾಗುಗಳಲ್ಲಿ ಆರೋಗ್ಯಕರ ವಿಚಾರ ಚರ್ಚೆಯಾದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಆದರೆ ಅಂತಹ ವಿಚಾರಗಳು ಚರ್ಚೆಯಾಗುತ್ತಿರುವುದು ಬಹಳ ಕಡಿಮೆ. ಅನಾರೋಗ್ಯಕರ ವಿಚಾರಗಳೇ ಈ ಬ್ಲಾಗುಗಳ ಜೀವಾಳವಾಗುತ್ತಿರುವುದು ಕೆಟ್ಟಬೆಳವಣಿಗೆ. ಇಂತಹುದಕ್ಕೆ ಅನಾಮಿಕರೇ ಸ್ವಯಂ ಆಗಿ ಕಡಿವಾಣ ಹಾಕಬೇಕು. ಆರೋಗ್ಯಕರ ವಿಚಾರ, ಆರೋಗ್ಯಕರ ಚರ್ಚೆಗಳಿದ್ದರೆ ಬ್ಲಾಗ್ ಲೋಕವೂ ಆರೋಗ್ಯಕರವಾಗುತ್ತದೆ. ಓದುಗರೂ ಕೂಡ.
ಕೊನೆಮಾತು: ಕೆಲವು ಅನಾಮಿಕ ಬ್ಲಾಗುಗಳು ’ಬೇಸತ್ತು’ ಲೋಕಕ್ಕೆ ವಿದಾಯ ಹೇಳುತ್ತಿವೆ. ಇನ್ನು ಕೆಲವು ಅಪ್ಡೇಟ್ ಹಾಗದೇ ಉಳಿದಿವೆ.